ರಾಮನಗರ: ಜಿಲ್ಲಾಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಪಂಚಾಯಿತಿ ಸಿಬ್ಬಂದಿವರೆಗೆ ಎಲ್ಲ ಸರ್ಕಾರಿ ನೌಕರರು ಅಪ್ ಅಂಡ್ ಡೌನ್ ಬಿಟ್ಟು ತಾವು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿ ವಾಸ್ತವ್ಯ ಹೂಡಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಆದೇಶಕ್ಕೆ ಜಿಲ್ಲೆಯಲ್ಲಿ ಕವಡೆ ಕಾಸಿನ ಕಿಮ್ಮಿತ್ತು ಇಲ್ಲದಂತಾಗಿದೆ.
ಕಳೆದ ಜೂನ್ 26ರಂದು ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಕುಮಾರ್ ರವರು ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ 60 ದಿನಗಳ ಕಾಲಾವಕಾಶ ನೀಡಿದ್ದರು. ಅಲ್ಲದೆ, ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಇದೇ ಮಾತನ್ನು ಪುನರುಚ್ಚರಿಸುತ್ತಲೇ ಇದ್ದಾರೆ. ಇಷ್ಟಾದರು ಅಧಿಕಾರಿಗಳು ಮತ್ತು ಸಿಬ್ಬಂದಿ ಅಪ್ ಅಂಡ್ ಡೌನ್ ಮಾಡುವುದನ್ನು ಬಿಟ್ಟಿಲ್ಲ.
ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ತಾನು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಮನೆ ಮಾಡಿಕೊಂಡಿರುವ ಬಗ್ಗೆ ದೃಢೀಕರಿಸಬೇಕಿತ್ತು. ಬಾಡಿಗೆ ಮನೆಯ ವಿಳಾಸ, ಕರಾರು ಪತ್ರ, ಫೋಟೋ ಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ತಲುಪಿಸಬೇಕಿತ್ತು. ಆ ಮಾಹಿತಿಯನ್ನು ಸಂಗ್ರಹಿಸಿ ವಾರ್ತಾ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚನೆ ನೀಡಲಾಗಿತ್ತು.ಡಿ.ಕೆ.ಶಿವಕುಮಾರ್ ರವರು ಆದೇಶ ಹೊರಡಿಸಿ 5 ತಿಂಗಳು ಕಳೆದಿದೆ. ಇಲ್ಲಿವರೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟ ಸೇರಿ 72 ಮಂದಿ ಅಧಿಕಾರಿಗಳು ಮಾತ್ರವಷ್ಟೇ ಪತ್ರದ ಮೂಲಕ ತಾವು ಕೇಂದ್ರ ಸ್ಥಾನದಲ್ಲಿ ಮನೆ ಮಾಡಿಕೊಂಡಿದ್ದೇವೆಂದು ತಿಳಿಸಿದ್ದಾರೆ. ಇವರಲ್ಲಿ ಕೆಲವರು ಮನೆ ವಿಳಾಸವನ್ನು ಮಾತ್ರ ನೀಡಿದ್ದು, ಮನೆ ಫೋಟೋಗಳನ್ನು ಕೊಟ್ಟಿಲ್ಲ.
ಬಹುತೇಕ ಸರ್ಕಾರಿ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿರುಸಂಬಂಧಿಕರು ಮತ್ತು ಸ್ನೇಹಿತರ ಮನೆ ವಿಳಾಸ, ಫೋಟೋಗಳನ್ನು ನೀಡಿದ್ದಾರೆ. ಇಲ್ಲದವರು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಮನೆಯನ್ನೇ ಬಾಡಿಗೆ ಮನೆ ಎಂದು ತೋರಿಸಿದ್ದಾರೆ. ಯಾರೂ ಕೂಡ ಮನೆ ಬಾಡಿಗೆಯ ಕರಾರುಪತ್ರ, ಫೋಟೋಗಳನ್ನು ಪತ್ರದಲ್ಲಿ ಅಳವಡಿಸಿಲ್ಲ. ಇದೆಲ್ಲವು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ.
ಬಾಕ್ಸ್..........
ಬಹುತೇಕ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದಾರೆ. ಇದು ಜಿಲ್ಲಾ ಕೇಂದ್ರ ರಾಮನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಉಳಿದ ತಾಲೂಕುಗಳಾದ ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳ ಪರಿಸ್ಥಿತಿಯೂ ಹೀಗೆಯೇ ಇದೆ.
ಬಾಕ್ಸ್.....................
ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಜಿಲ್ಲಾಮಟ್ಟದ ಅಧಿಕಾರಿಗಳು ಮಂಡ್ಯ ನಗರದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಅವರನ್ನು ಬೆಳಗ್ಗೆ ಕಚೇರಿಗೆ ಕರೆತರಲು ಮತ್ತು ಸಂಜೆ ಮನೆಗೆ ವಾಪಸ್ ಕರೆದೊಯ್ಯಲು ಸರ್ಕಾರಿ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ನಿತ್ಯ ರಾಮನಗರದ ಸರ್ಕಾರಿ ವಾಹನಗಳು ಗಡಿ ದಾಟಿ ಮಂಡ್ಯ ನಗರ ಪ್ರವೇಶಿಸುತ್ತಿವೆ. ಇಷ್ಟೇ ಅಲ್ಲದೆ, ರೇಲ್ವೆ ಮತ್ತು ಬಸ್ ನಿಲ್ದಾಣಗಳ ಬಳಿಯೂ ಸರ್ಕಾರಿ ವಾಹನಗಳು ಅಧಿಕಾರಿಗಳ ಬರುವಿಕೆಯನ್ನೇ ಕಾಯುತ್ತಿರುತ್ತವೆ. ಉಪಮುಖ್ಯಮಂತ್ರಿ ಗಳ ಆದೇಶಕ್ಕೂ ಈ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ.
ರಾಮನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಪೈಕಿ 72 ಮಂದಿ ಅಧಿಕಾರಿಗಳು ಮಾತ್ರ ತಮ್ಮ ಭಾವಚಿತ್ರ, ಮನೆ ,ಕಚೇರಿ ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದೆ.
- ರಮೇಶ್ ಬಾಬು, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಮನಗರ4ಕೆಆರ್ ಎಂಎನ್ 1.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣ.