ಗ್ರಾಪಂ ವ್ಯಾಪ್ತಿಗೊಂದು ಸಹಕಾರ ಸಂಘ ಅಗತ್ಯ

KannadaprabhaNewsNetwork |  
Published : Jun 14, 2025, 12:33 AM IST
೧೩ ವೈಎಲ್‌ಬಿ ೦೨ಯಲಬುರ್ಗಾದ ತಾ.ಪಂ ಕಚೇರಿ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಇಒ ಸಂತೋಷ ಪಾಟೀಲ್ ಇದ್ದರು. | Kannada Prabha

ಸಾರಾಂಶ

ಸರ್ಕಾರಿ ಶಾಲಾ ಮೈದಾನದಲ್ಲಿ ಖಾಲಿ ಜಾಗ ಇದ್ದರೆ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಎಸ್‌ಡಿಎಂಸಿ ಅವರ ಅಭಿಪ್ರಾಯಪಡೆಯಬೇಕು ಎನ್ನುವ ನಿಯಮವಿಲ್ಲ.

ಯಲಬುರ್ಗಾ:

ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹಕಾರ ಸಂಘ ಇರಬೇಕು ಎನ್ನುವ ಸರ್ಕಾರಿ ಆದೇಶವಿದೆ. ತಾಲೂಕಿನಲ್ಲಿ ಸೊಸೈಟಿ ಇಲ್ಲದ ಗ್ರಾಮ ಪಂಚಾಯಿತಿಗಳಾವವು ಎಂದು ಸಹಕಾರ ಸಂಘಗಳ ಇಲಾಖೆ ಅಧಿಕಾರಿಗೆ ತಾಪಂ ಆಡಳಿತಾಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಪ್ರಶ್ನಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿ ಇಲ್ಲದ ಗ್ರಾಪಂ ಹೆಸರನ್ನು ಗುರುತಿಸಿ, ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳಿಸಬೇಕು ಎಂದರು.

ಇದಕ್ಕೆ ಸಹಕಾರ ಸಂಘಗಳ ಅಧಿಕಾರಿ ಪ್ರತಿಕ್ರಿಯಿಸಿ, ತಾಲೂಕಿನ ಬಳೂಟಗಿ, ಹಿರೇಮ್ಯಾಗೇರಿ, ಮಾಟಲದಿನ್ನಿ, ತುಮ್ಮರಗುದ್ದಿ ಹಾಗೂ ಬೋದೂರು ಗ್ರಾಪಂ ವ್ಯಾಪ್ತಿಯಲ್ಲಿ ಸೊಸೈಟಿಗಳು ಇಲ್ಲ. ಈ ಕುರಿತು ಈಗಾಗಲೇ ಗ್ರಾಮಸಭೆಯಲ್ಲಿ ಚರ್ಚಿಸಿದ್ದು ಪ್ರಸ್ತಾವನೆ ಕಳಿಸಲಾಗುವುದು ಎಂದರು.

ಸರ್ಕಾರಿ ಶಾಲಾ ಮೈದಾನದಲ್ಲಿ ಖಾಲಿ ಜಾಗ ಇದ್ದರೆ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಎಸ್‌ಡಿಎಂಸಿ ಅವರ ಅಭಿಪ್ರಾಯಪಡೆಯಬೇಕು ಎನ್ನುವ ನಿಯಮವಿಲ್ಲವೆಂದು ಶಿಕ್ಷಣ ಇಲಾಖೆ ಅಧಿಕಾರಿ ವೀರಭದ್ರಪ್ಪ ಅಂಗಡಿಗೆ ತೊದಲಬಾಗಿ ನಿರ್ದೇಶಿಸಿದರು.

ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಕೊರತೆ ಬಗ್ಗೆ ಹೆಚ್ಚು ಆರೋಪಗಳು ಕೇಳಿ ಬರುತ್ತಿವೆ. ಟೆಂಡರ್ ಪಡೆದವರಿಗೆ ಘಟಕದಿಂದ ನೋಟೀಸ್ ಜಾರಿಗೊಳಿಸಿ. ಪಟ್ಟಣದಿಂದ ಸುಮಾರು 4 ಕಿಮೀ ದೂರದಲ್ಲಿರುವ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು.

ಶಾಲೆ ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮುಖ್ಯಶಿಕ್ಷಕರು, ಗ್ರಾಪಂ ಪಿಡಿಒ ಉಪಾಹಾರ ಸವಿದು ನೋಡಿದ ಬಳಿಕ ವಿದ್ಯಾರ್ಥಿಗಳಿಗೆ ಉಣಬಡಿಸಬೇಕು. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತಾಪಂ ಇಒ ಸಂತೋಷ ಪಾಟೀಲ್ ಅವರು ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ವೀರಭದ್ರಪ್ಪ ಅಂಗಡಿಗೆ ತಿಳಿಸಿದರು. ಹಾಗೆಯೇ ವಾರಕ್ಕೊಮ್ಮೆ ಮಕ್ಕಳಿಗೆ ಪೌಷ್ಟಿಕ ಆಹಾರ ಭಾಗವಾಗಿ ದಾನಿಗಳಿಂದ ಮೊಳಕೆಕಾಳು ವಿತರಿಸುವುದನ್ನು ಮುಂದುವರಿಸಬೇಕೆಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ. ದಾನಿ ಅವರಿಗೆ ಇಒ ಸೂಚಿಸಿದರು.

ಮಳೆಗಾಲ ಪ್ರಾರಂಭವಾಗಿದ್ದು ಜಾನುವಾಗಳ ಆರೋಗ್ಯದ ಸಲುವಾಗಿ ಲಸಿಕೆ ಹಾಕುವ ಪ್ರಕ್ರಿಯೆ ಬಗ್ಗೆ ತಾಪಂ ಇಒ ಸಂತೋಷ ಪಾಟೀಲ್ ಅವರು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಚೂರಿ ಅವರನ್ನು ಪ್ರಶ್ನಿಸಿದರು. ಈಗಾಗಲೇ ಮೇಕೆ, ಜಾನುವಾರುಗಳಿಗೆ ಲಸಿಕಾಕರಣ ಪೂರ್ಣಗೊಂಡಿದೆ ಎಂದು ಉತ್ತರಿಸಿದರು.

ಕೃಷಿ ಇಲಾಖೆಯಿಂದ ರೈತರಿಗೆ ಯಾವುದೇ ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ಅವರಿಗೆ ಇಒ ನಿರ್ದೇಶಿಸಿದರು. ಶಿಕ್ಷಣ ಇಲಾಖೆ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯವರು ವಿವಿಧ ಯೋಜನೆಯಡಿ ಸಕಾಲಕ್ಕೆ ನೆಡುತೋಪು ನೆಡಬೇಕು ಎಂದು ಆಯಾ ಇಲಾಖೆ ಅಧಿಕಾರಿಗಳಿಗೆ ಇಒ ಸೂಚಿಸಿದರು.

ನೀರಿನ ಸಮಸ್ಯೆ ಪರಿಹರಿಸಿ:

ಗಾಣಧಾಳ ಗ್ರಾಮದ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ನಿಲಯದ ಹತ್ತಿರ ಸ್ಮಶಾನವಿದ್ದು, ಅದನ್ನು ಸ್ಥಳಾಂತರಿಸಬೇಕು. ನಿಲಯಕ್ಕೆ ಕಾಂಪೌಂಡ್ ನಿರ್ಮಿಸಬೇಕು. ಪಟ್ಟಣದ ಪದವಿ ಕಾಲೇಜಿನಲ್ಲಿರುವ ವಸತಿ ನಿಲಯದಲ್ಲಿ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಸಮಾಜ ಕಲ್ಯಾಣ ಅಧಿಕಾರಿ ಶಶಿಧರ ಸಕ್ರಿ ಸಭೆಯ ಗಮನಕ್ಕೆ ತಂದರು. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಇಒ ಭರವಸೆ ನೀಡಿದರು.

ಈ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''