ಕನ್ನಡಪ್ರಭ ವಾರ್ತೆ ಕುಶಾಲನಗರ
ಬೆಳಗ್ಗೆ 10 ಗಂಟೆ ವೇಳೆಗೆ ಕುಶಾಲನಗರ ಕಾರು ಶೋ ರೂಮ್ ನಿಂದ ಮಡಿಕೇರಿ ಶೋರೂಮ್ ಗೆ ತೆರಳುತ್ತಿದ್ದ ಹೊಸ ಕಾರು ಆನೆಕಾಡು ಬಳಿ ಅತ್ತೂರು ಅರಣ್ಯ ವಲಯದಿಂದ ಆನೆಕಾಡು ಮೀಸಲು ಅರಣ್ಯ ವಲಯದ ಕಡೆಗೆ ವೇಗದಿಂದ ಸಾಗುತ್ತಿದ್ದ ಜಿಂಕೆಗೆ ಡಿಕ್ಕಿಯಾಗಿದೆ.
ಇದರಿಂದ ಹೆಚ್ಚಿನ ಗಾಯಗಳೊಂದಿಗೆ ಜಿಂಕೆ ಸ್ಥಳದಲ್ಲಿ ಮೃತಪಟ್ಟಿದೆ. ಕಾರಿನ ಭಾಗ ಕೂಡ ಬಹುತೇಕ ಜಖಂಗೊಂಡಿದೆ.ಮಾಹಿತಿ ತಿಳಿದ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಆನೆಕಾಡು ಮೀಸಲು ಅರಣ್ಯದ ಉಪವಲಯ ಅರಣ್ಯ ಅಧಿಕಾರಿ ದೇವಯ್ಯ ಮತ್ತು ಸಿಬ್ಬಂದಿ ಸ್ಥಳ ಮಹಜರು ನಡೆಸಿ ಕಾರಿನ ಚಾಲಕ ರವಿ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಿಯಮಾನುಸಾರ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಕುಶಾಲನಗರ ಶೋರೂಂನಿಂದ ನೂತನ ಕಾರನ್ನು ಮಡಿಕೇರಿ ಕಾರು ಶೋರೂಮ್ ಗೆ ಹಸ್ತಾಂತರಿಸಲು ಸಾಗಿಸುವ ಸಂದರ್ಭ ಈ ಘಟನೆ ನಡೆದಿದೆ. ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಇಂದು ವಿದ್ಯುತ್ ಪೂರೈಕೆ ವ್ಯತ್ಯಯಪೊನ್ನಂಪೇಟೆ 66/11 ಕೆವಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಶನಿವಾರ ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ 66/11 ಕೆವಿ ಪೊನ್ನಂಪೇಟೆ, 66/11ಕೆವಿ ವಿರಾಜಪೇಟೆ, 66/11 ಕೆವಿ ಶ್ರೀಮಂಗಲ, 33/11ಕೆವಿ ಸಿದ್ದಾಪುರ, 33/11 ಕೆವಿ ಮೂರ್ನಾಡು ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಪೊನ್ನಂಪೇಟೆ, ಗೋಣಿಕೊಪ್ಪ, ನಲ್ಲೂರು, ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳಲೆ, ಕಾನೂರು, ಬಿರುನಾಣಿ, ಕುಟ್ಟ, ವಿರಾಜಪೇಟೆ, ಬಿ.ಶೆಟ್ಟಿಗೇರಿ, ಬೇತ್ರಿ, ಕಡಂಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರುಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.