ಶಿವಾನಂದ ಪಿ. ಮಹಾಬಳಿಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬನಹಟ್ಟಿಯ ಹೃದಯಭಾಗದಲ್ಲಿರುವ ಕಂದಾಯ ಇಲಾಖೆಯ ಪಾಳು ಬಿದ್ದ ಕಟ್ಟಡ ತೆರವುಗೊಳಿಸಬೇಕೆಂದು ಹಲವು ವರ್ಷಗಳಿಂದ ಬೇಡಿಕೆಯಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೆಯೇ ಉಳಿದಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನಹರಿಸಿ ತೆರವುಗೊಳಿಸುವಂತೆ ನಾಗರಿಕರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಈ ಮೊದಲು ಇಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿತ್ತು. ನಂತರದ ದಿನಗಳಲ್ಲಿ ತೀವ್ರ ಶಿಥಿಲಾವಸ್ಥೆಗೆ ಬಂದ ಮೇಲೆ ಗ್ರಂಥಾಲಯವನ್ನು ಸ್ಥಳಾಂತರ ಮಾಡಲಾಗಿದೆ. ಈ ಕಟ್ಟಡವು ಜನವಸತಿಗೆ ಯೋಗ್ಯವಲ್ಲವೆಂದು ವರದಿ ನೀಡಿ ಸುಮಾರು ೧೫ ವರ್ಷಗಳೇ ಕಳೆದಿವೆ. ಆದರೂ ಇಂದಿಗೂ ಕಟ್ಟಡವನ್ನು ತೆರವುಗೊಳಿಸದೇ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಇಲಾಖೆ ಗುರಿಯಾಗಿದೆ.ಮಳೆಗಾಲ ಆರಂಭವಾದರೆ ಸಾಕು, ಕಟ್ಟಡ ಮತ್ತಷ್ಟು ಶಿಥಿಲಗೊಂಡು ಮತ್ತಷ್ಟು ಬಿರುಕು ಬಿಡುತ್ತದೆ. ಪ್ರಸಕ್ತ ವರ್ಷವಂತೂ ಮಳೆಗಾಲ ಪ್ರಾರಂಭವಾಗಿದ್ದು, ಕಟ್ಟಡದ ಚಾವಣಿ ಸಂಪೂರ್ಣ ಕುಸಿದಿದೆ.ನಗರದ ಹೃದಯಭಾಗದಲ್ಲೇ ಗಲೀಜು:
ನಗರದ ಮಧ್ಯಭಾಗದ ವರ್ತುಲದಲ್ಲಿಯೇ ಈ ಪಾಳುಬಿದ್ದ ಕಟ್ಟಡವಿದೆ. ಆಗಾಗ ಇಲ್ಲಿ ಹಾವುಗಳ ದರ್ಶನವೂ ಆಗುತ್ತದೆ. ದಿನಂಪ್ರತಿ ನೂರಾರು ಜನ ಇದೇ ಕಟ್ಟಡದ ಕಟ್ಟೆಯ ಮೇಲೆ ಕುಳಿತುಕೊಳ್ಳುವುದು ರೂಢಿಯಾಗಿದೆ. ನಿರಂತರ ಜನನಿಬಿಡ ಪ್ರದೇಶವಾಗಿರುವ ಇಲ್ಲಿ ಆಕಸ್ಮಿಕವಾಗಿ ಶಿಥಿಲ ಕಟ್ಟಡ ಕುಸಿದರೆ ಅವಘಡ ಸಂಭವಿಸುವ ಸಾಧ್ಯತೆ ಇದೆ. ಶಿಥಿಲವಾಗಿರುವ ಕಟ್ಟಡದ ಗೋಡೆಗಳು ಕುಸಿದು ಬೀಳುವ ಮೊದಲೇ ಕಟ್ಟಡ ತೆರವುಗೊಳಿಸಿ, ಮುಂದೆ ಆಗುವ ಅನಾಹುತ ತಪ್ಪಿಸಬೇಕೆಂದು ಬನಹಟ್ಟಿಯ ಜನತೆ ಒತ್ತಾಯಿಸಿದ್ದಾರೆ.ನಗರಸಭೆ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೇಳಿದ್ದೆವು. ಕಂದಾಯ ಇಲಾಖೆ ಸಹಮತ ದೊರಕದ ಹಿನ್ನೆಲೆ ತಟಸ್ಥತೆ ಕಾಯ್ದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕಟ್ಟಡಕ್ಕೆ ಸಹಕಾರ ನೀಡಲಾಗುವುದು.
-ಶ್ರೀಶೈಲ ಬೀಳಗಿ, ನಗರಸಭೆ ಮಾಜಿ ಅಧ್ಯಕ್ಷದಿನಂಪ್ರತಿ ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು. ಅತ್ಯಂತ ಗಲೀಜು ಪ್ರದೇಶವಾಗಿ ಕಾಣುತ್ತಿರುವ ನಗರದ ಹೃದಯ ಭಾಗದಲ್ಲಿರುವ ಈ ಕಟ್ಟಡ ತೆರವುಗೊಳಿಸಬೇಕು.
- ರಾಜು ಕುಲಕರ್ಣಿ ಸ್ಥಳೀಯರು.ರಬಕವಿ-ಬನಹಟ್ಟಿ