ಬ್ಯಾಡಗಿ: ತಾಲೂಕಿನ ಮಾಸಣಗಿ ಗ್ರಾಮದ ಹೊಲದಲ್ಲಿ ಮಂಗಳವಾರ ತುಂಡಾಗಿ ಬಿದ್ದದ್ದ ವಿದ್ಯುತ್ ತಂತಿ ತುಳಿದು ನಾಗಪ್ಪ ಚನ್ನಬಸಪ್ಪ ಬನ್ನಿಹಟ್ಟಿ (45) ಎಂಬ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಹಿನ್ನೆಲೆ: ರೈತ ನಾಗಪ್ಪ ಬನ್ನಿಹಟ್ಟಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೇವು ತರಲು ಹೊಲಕ್ಕೆ ತೆರಳಿದ್ದಾನೆ, ಆದರೆ ಹೊಲದಲ್ಲಿನ ವಿದ್ಯುತ್ ತಂತಿ ಕೆಳಗೆ ಬಿದ್ದಿದೆ. ಅದು ನಾಗಪ್ಪನ ಗಮನಕ್ಕೆ ಬಂದಿಲ್ಲ, ಹುಲ್ಲು ಕೊಯ್ಯಲು ಸಾಗುವ ವೇಳೆ ನೆಲಕ್ಕೆ ಬಿದ್ದಿದ್ದ ತಂತಿಯಿಂದ ವಿದ್ಯುತ್ ಹರಿದು ಕುಡುಗೋಲು, ಹಗ್ಗ ಸಮೇತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಹೊಲಕ್ಕೆ ಹೋದವ ಸಂಜೆಯಾದರೂ ಮರಳಿ ಮನೆಗೆ ಬಂದಿಲ್ಲ. ಮೊಬೈಲ್ ಕೂಡ ರಿಸೀವ್ ಮಾಡುತ್ತಿಲ್ಲ, ಸಂಶಯಗೊಂಡ ಕುಟುಂಬಸ್ಥರು ಹೊಲಕ್ಕೆ ತೆರಳಿದಾಗ ದೂರದಿಂದ ವಿದ್ಯುತ್ ತಂತಿ ಬಿದ್ದಿರುವುದು ಕಂಡು ಬಂದಿದ್ದು ತಂತಿ ಸ್ಪರ್ಶದಿಂದ ಮೃತಪಟ್ಟಿರುವುದು ಖಚಿತವಾಗಿದೆ.ರೈತ ನಾಗಪ್ಪ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ರೈತರು ಹಾಗೂ ಗ್ರಾಮಸ್ಥರು ಹೆಸ್ಕಾಂ ಕಾರ್ಯಾಲಯದ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾರಂಭಿಸಿದರು. ಈ ವೇಳೆ ಮಾತನಾಡಿದ ಗ್ರಾ.ಪಂ.ಸದಸ್ಯ ಹಾಗೂ ವಕೀಲ ಬಸವರಾಜ ಬನ್ನಿಹಟ್ಟಿ, ಕಳೆದ 4 ವರ್ಷದಿಂದ ವಿದ್ಯುತ್ ತಂತಿಗಳು ತಳಮಟ್ಟದಲ್ಲಿ ಹರಿದಿರುವ ಬಗ್ಗೆ ಹೆಸ್ಕಾಂ ಸಿಬ್ಬಂದಿಗೆ ಲಿಖಿತ ರೂಪದಲ್ಲಿ ತಿಳಿಸಲಾಗಿದೆಯಲ್ಲದೇ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಅರ್ಜಿ ಸಲ್ಲಿಸಿದರೂ ಈವರೆಗೂ ಎಂಜಿನಿಯರ್ ಎಚ್.ಕೆ. ರವಿ ಕ್ಯಾರೆ ಎನ್ನದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
15 ದಿನದಲ್ಲಿ ಪರಿಹಾರ: ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಹೆಸ್ಕಾಂ ಎಂಜಿನಿಯರ್ ರಾಜು ಅರಳೀಕಟ್ಟಿ ರೈತರಲ್ಲಿ ಕ್ಷಮೆ ಕೇಳಿ, ಈ ಕುರಿತು ಸೂಕ್ತ ತನಿಖೆ ನಡೆಸಿ, ಮೇಲಧಿಕಾರಿಗಳಿಗೆ ವರದಿ ಕಳುಹಿಸಿ ತುರ್ತು ಕ್ರಮ ಜರುಗಿಸುವೆ. ಪ್ರಕರಣ ದಾಖಲಿಸಿಕೊಂಡು, ಪರಿಹಾರ ವಿತರಿಸಲು ಮನವಿ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.