ಕನ್ನಡಪ್ರಭ ವಾರ್ತೆ ಬೆಂಗಳೂರು
ಹಣಕಾಸು ವಿಚಾರವಾಗಿ ಆಪ್ತ ಸ್ನೇಹಿತರ ಮಧ್ಯೆ ಉಂಟಾದ ಜಗಳವು ಕೊಲೆ ಅಂತ್ಯವಾಗಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಸಾಯಿಬಾಬಾನಗರದ ನಿವಾಸಿ ಕುಮಾರನ್ (39) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ದಯಾಲನ್ ಎಂಬಾತನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಣಕಾಸು ವಿಚಾರವಾಗಿ ಸೋಮವಾರ ರಾತ್ರಿ ಎಚ್ಎಎಲ್ ಜಂಕ್ಷನ್ ಬಳಿ ಈ ಇಬ್ಬರು ಗೆಳೆಯರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಕೆರಳಿದ ದಯಾಲನ್, ಕುಮಾರನ್ಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲಿ ಮೃತಪಟ್ಟಿದ್ದ. ರಸ್ತೆ ಬದಿ ರಕ್ತದ ಮಡುವಿನಲ್ಲಿ ಮೃತದೇಹ ಕಂಡು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ. ಕೂಡಲೇ ಕೃತ್ಯದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ನಡೆಸಿದಾಗ ಆರೋಪಿ ಸುಳಿವು ಸಿಕ್ಕಿತು. ಮಂತ್ರಿ ಮಾಲ್ ಬಳಿ ಆತನನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.==
₹50 ಲಕ್ಷ ಸಾಲ ಮರಳಿಸದಕಾರಣಕ್ಕೆ ಸ್ನೇಹಿತರ ಜಗಳ
ಮೃತ ಕುಮಾರನ್ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಆತನ ಪೋಷಕರು ವಲಸೆ ಬಂದಿದ್ದರು. ತನ್ನ ಕುಟುಂಬದ ಜತೆ ಸಾಯಿಬಾಬಾನಗರದಲ್ಲಿ ನೆಲೆಸಿದ್ದ ಕುಮಾರನ್, ಅಲ್ಲೇ ಸಣ್ಣ ಮಟ್ಟದ ಕ್ಯಾಂಟೀನ್ ನಡೆಸುತ್ತಿದ್ದರು. ಇನ್ನು ದಯಾಲನ್ ಸಹ ತಮಿಳುನಾಡು ಮೂಲದವನಾಗಿದ್ದು, ದಶಕಗಳಿಂದ ಕುಮಾರನ್ಗೆ ಜತೆ ಆತ್ಮೀಯ ಸ್ನೇಹವಿತ್ತು. ಈ ಗೆಳೆತನದಲ್ಲಿ ದಯಾಲನ್ನಿಂದ ₹50 ಲಕ್ಷ ಸಾಲವನ್ನು ಕುಮಾರನ್ ಪಡೆದಿದ್ದ. ಆದರೆ ಸಕಾಲಕ್ಕೆ ಸಾಲ ಮರಳಿಸದ ಕಾರಣಕ್ಕೆ ಗೆಳೆಯರ ಮಧ್ಯೆ ಮನಸ್ತಾಪ ಮೂಡಿತ್ತು. ಇದೇ ಹಣಕಾಸು ವಿಷದಲ್ಲಿ ಕೆಲವು ಸಲ ಪರಸ್ಪರ ಜಗಳವಾಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.ಅಂತೆಯೇ ಸ್ನೇಹದಲ್ಲಿ ಸೋಮವಾರ ರಾತ್ರಿ ಮದ್ಯ ಸೇವನೆ ಇಬ್ಬರು ತೆರಳಿದ್ದರು. ಮದ್ಯ ಸೇವಿಸಿದ ಬಳಿಕ ಮತ್ತೆ ಹಣಕಾಸು ವಿಚಾರ ಪ್ರಸ್ತಾಪವಾಗಿ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕುಮಾರನ್ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.