ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವ್ಯರ್ಥ ಪ್ರಯತ್ನ: ಪಿ.ಎಚ್. ಪೂಜಾರ ವಾಗ್ದಾಳಿ

KannadaprabhaNewsNetwork | Published : May 5, 2025 12:45 AM
ಬಿಟಿಡಿಎ, ಸಂಘ ಪರಿವಾರ ವಿಷಯದಲ್ಲಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವ್ಯರ್ಥ ಪ್ರಯತ್ನ ಮಾಡಲಾಗುತ್ತಿದೆ. ಹಾಫ್ ನಾಲೇಜ್ ಮೋರ್‌ ಡೇಂಜರ್ ಎನ್ನುವ ಹಾಗೆ ಅಲ್ಪಜ್ಞಾನ ಇಟ್ಟುಕೊಂಡು ಆರೋಪ ಮಾಡಿದ್ದಾರೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ರಾಜಕೀಯ ಅಪಸವ್ಯದಲ್ಲಿದ್ದು, ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ವಿಪ ಸದಸ್ಯ ಪಿ.ಎಚ್. ಪೂಜಾರ ಆರೋಪಿಸಿದರು.
Follow Us

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಟಿಡಿಎ, ಸಂಘ ಪರಿವಾರ ವಿಷಯದಲ್ಲಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವ್ಯರ್ಥ ಪ್ರಯತ್ನ ಮಾಡಲಾಗುತ್ತಿದೆ. ಹಾಫ್ ನಾಲೇಜ್ ಮೋರ್‌ ಡೇಂಜರ್ ಎನ್ನುವ ಹಾಗೆ ಅಲ್ಪಜ್ಞಾನ ಇಟ್ಟುಕೊಂಡು ಆರೋಪ ಮಾಡಿದ್ದಾರೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ರಾಜಕೀಯ ಅಪಸವ್ಯದಲ್ಲಿದ್ದು, ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ವಿಪ ಸದಸ್ಯ ಪಿ.ಎಚ್. ಪೂಜಾರ ಆರೋಪಿಸಿದರು.

ನಗರದ ಪ್ರಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಚರಂತಿಮಠ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವಿಷಯದಲ್ಲಿ ಹೈಕೋರ್ಟ್‌ ಆದೇಶ ವಿಷಯದಲ್ಲಿ ಜಾಣ ಕುರುಡುತನ ಪ್ರದರ್ಶಿಸಿ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಬಿಟಿಡಿಎ ಕಾರ್ಪಸ್ ಫಂಡ್ ₹350 ಕೋಟಿ ವಾಪಸ್‌ ಹೋಗಿದ್ದು ನಿಮ್ಮ ತಪ್ಪಿನಿಂದ. ನೀವು ಶಾಸಕರು, ಅಧ್ಯಕ್ಷರಾಗಿದ್ದ ವೇಳೆ ಸರ್ಕಾರದ ಆದೇಶವಾಗಿದೆ. ಆವಾಗ ತಡೆಯಲಿಲ್ಲ ಏಕೆ? ಬಾಗಲಕೋಟೆ ನಗರ ನಡುಗಡ್ಡೆ ಸ್ಥಳಾಂತರಕ್ಕೆ ಆಗ್ರಹಿಸಿ 15 ವರ್ಷದಿಂದ ಹೋರಾಟ ನಡೆಯುತ್ತಿದೆ. ಒಂದು ದಿನವೂ ಆ ಬಗ್ಗೆ ಗಮನ ಹರಿಸಲಿಲ್ಲ. ಈಗ ಏಕೆ ಅಭಿವೃದ್ಧಿಯ ಚಿಂತನೆ ಎಂದು ಪ್ರಶ್ನಿಸಿದರು.ನಾನು ಬಿಜೆಪಿಯ ಉಚ್ಛಾಟಿತರ ಜೊತೆಗೆ ಇದ್ದಾರೆಂದು ಆರೋಪ ಮಾಡುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಸಮ್ಮುಖದಲ್ಲಿ ಅವರೆಲ್ಲ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಪರ ಓಡಾಡಿದ್ದಾರೆ, ಮತ ಹಾಕಿದ್ದಾರೆ. ಸದಸ್ಯತ್ವ ಸ್ಥಾನ ಪಡೆದುಕೊಂಡಿದ್ದಾರೆ. ನಿಮ್ಮ ವೈಯಕ್ತಿಕ ಕಾರಣಕ್ಕೆ ಬೇಡವಾದರೆ ಪಕ್ಷ ಅದನ್ನು ಸ್ವೀಕರಿಸಬೇಕಾ? ಇದು ಯಾವ ನೀತಿ? ಎಂದು ಪ್ರಶ್ನಿಸಿದರು.

ಸಂಘ ಪರಿವಾರದ ವಿಷಯದಲ್ಲಿ ನಾನು ನೀಡಿದ ದೇಣಿಯ ಚೆಕ್ ಬೌನ್ಸ್ ಆಗಿದೆ. ಐದಾರು ಅಕೌಂಟ್ ಇದೆ. ಚೆಕ್ ನೀಡಿದ ಅಕೌಂಟ್‌ನಲ್ಲಿ ಹಣ ಇರಲಿಲ್ಲ, ಜಮಾ ಆಗಲಿಲ್ಲ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಜೊತೆಗೆ ಮಾತನಾಡಿದ್ದೇನೆ. ಹಣ ತಲುಪಿಸುವುದಾಗಿ ತಿಳಿಸಿದ್ದೆ. ಅದಕ್ಕೂ ನಿಮಗೂ ಸಂಬಂಧವೇನು?, ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ರಿ. ನೀವು ಯಾವ ಡೊನ್ನೆನಾಯಕ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠಗೆ ಖಾರವಾಗಿ ಪ್ರಶ್ನಿಸಿದ ಅವರು, ಆರ್ ಎಸ್ಎಸ್ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಅವಮಾನ ಮಾಡಿದ್ರಿ. ಎಬಿಸಿಡಿಎ ಗೊತ್ತಿಲ್ಲದ ನೀವು ಪಕ್ಷದಲ್ಲಿ ಬೂತ್‌ ಮಟ್ಟದ ಅಧ್ಯಕ್ಷ ಸಹ ಇಲ್ಲ, ನೀವು ರಾಜಕೀಯ ಅಪಸವ್ಯದಲ್ಲಿ ಬದುಕುತ್ತಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದರು.