- ಹನಗವಾಡಿಯಲ್ಲಿ 24/7 ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಜನ ಸಮುದಾಯದವರು ಸರ್ಕಾರಿ ಯೋಜನೆಗಳನ್ನು ತಮ್ಮದು ಎಂದುಕೊಂಡು ನಿರ್ವಹಣೆ ಮಾಡಿದರೆ ಸರ್ಕಾರದ ಎಲ್ಲ ಜನಪರ ಯೋಜನೆಗಳು ಸಾರ್ಥಕತೆ ಪಡೆಯುತ್ತವೆ ಎಂದು ಶಾಸಕ ಡಿ.ಜಿ . ಶಾಂತನಗೌಡ ಹೇಳಿದರು.ತಾಲೂಕಿನ ಹನಗವಾಡಿಯಲ್ಲಿ ಲಿಂಗಾಪುರ ಗ್ರಾಮ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು, ನೈರ್ಮಲ್ಯ ಇಲಾಖೆ, ಜಲಜೀವನ ಮಿಷನ್ ಯೋಜನೆಯಡಿ.ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಕಾಮಗಾರಿ ಬಹುಪಾಲು ಎಲ್ಲ ಗ್ರಾಮಗಳಲ್ಲಿ ನಡೆಯುತ್ತಿದ್ದು, ಇದರ ಉದ್ದೇಶ ಸರ್ವರಿಗೂ ಪ್ರತಿದಿನ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿದೆ. ಗ್ರಾಮ ಪಂಚಾಯಿತಿಗಳು ಈ ಯೋಜನೆ ಜಾರಿಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಕೆಲ ಗ್ರಾಮಗಳಲ್ಲಿ ಉತ್ತಮ ಗುಣಮಟ್ಟದ ನಲ್ಲಿಗಳನ್ನು ಹಾಕಲಾಗಿದೆ. ಆದರೆ ಕೆಲವರು ನಲ್ಲಿಗಳನ್ನು ಕಿತ್ತು ಹಾಕಿರುವ ಪ್ರಕರಣಗಳು ಆಗಿವೆ. ಇದು ದುರದೃಷ್ಟಕರ ಸಂಗತಿ. ಪ್ರತಿಯೊಬ್ಬ ಗ್ರಾಮಸ್ಥರು ಜಲಜೀವನ ಮಿಷನ್ನಂತಹ ಉತ್ತಮ ಯೋಜನೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜಲಜೀವನ್ ಯೋಜನೆ ಅನುಷ್ಠಾನ, ನಿರ್ವಹಣೆ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಯೋಜನೆಯಡಿ ನಿರ್ವಹಣೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ವಿವಿಧ ಅಧಿಕಾರಿಗಳು ಒಟ್ಟು 22 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಅವಳಿ ತಾಲೂಕುಗಳಲ್ಲಿ 59 ಕೆರೆಗಳಲ್ಲಿ ನೀರು ತುಂಬಿಸಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಸ್ವಾರ್ಥ ಬಿಟ್ಟು ತ್ಯಾಗವನ್ನು ರೂಢಿಸಿಕೊಂಡರೆ ಸಮಾಜ ಸಂತೋಷದಿಂದ ಇರುತ್ತದೆ. ಈ ಕುರಿತು ಎಲ್ಲರೂ ಯೋಚನೆ ಮಾಡಬೇಕು. ನೀರು ಅಮೂಲ್ಯವಾದದ್ದು. ಅದನ್ನು ಮಿತವಾಗಿ ಬಳಸಬೇಕು. ಸರ್ಕಾರದ ಈ ಯೋಜನೆ ಸದುಪಯೋಗ ಗ್ರಾಮದವರು ತೋರಿಸಿಕೊಟ್ಟರೆ ಈ ಗ್ರಾಮಕ್ಕೆ ಇನ್ನೂ ಮೂರು ಬಾರಿ ಬರುತ್ತೇನೆ. ಆಗ ನಿಮ್ಮ ಈ ಗ್ರಾಮದ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಮುರುಗ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಇಒ ಪ್ರಕಾಶ್, ಕಾರ್ಯನಿರ್ವಾಹಕ ಅಭಿಯಂತರ ಷಣ್ಮುಖ, ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮ್ಲಾ ನಾಯಕ್, ಗ್ರಾಪಂ ಉಪಾಧ್ಯಕ್ಷ ಎಚ್. ಜೆ. ವೆಂಕಟೇಶ್,ಜೆಜೆಎಂ ಯೋಜನಾ ನಿರ್ದೇಶಕ ಅಜಯ್ ಸಿನ್ಹಾ, ಪಿಡಿಒ ಧರ್ಮಪ್ಪ, ನಾಗರಾಜ್ ಹಾಗೂ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಪಂ ಸದಸ್ಯರು, ಮುಖಂಡರು ಇದ್ದರು.
- - -(ಬಾಕ್ಸ್) ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದಲ್ಲಿ ವಾರದ ಏಳು ದಿನ, ದಿನದ 24 ಗಂಟೆಯೂ ನಿಮ್ಮ ಮನೆಯ ನಳದಲ್ಲಿ ನೀರು ಬರುತ್ತದೆ. ನೀರಿನ ಶುದ್ಧೀಕರಣ ಪ್ರತಿ ತಿಂಗಳು ಆಗುವುದರಿಂದ ಯಾವುದೇ ಕಾಯಿಲೆಗಳು ಕಾಣಿಸಿಕೊಳ್ಳುವುದಿಲ್ಲ. ತಿಂಗಳಿಗೆ ₹100 ಶುಲ್ಕ ನಿಗದಿ ಮಾಡಿದೆ. ನೀರನ್ನು ಪ್ರತಿ ತಿಂಗಳು ಲ್ಯಾಬ್ಗೆ ಕಳುಹಿಸಿ, ಟೆಸ್ಟ್ ಮಾಡಲಾಗುತ್ತದೆ. ಸಮುದಾಯದಲ್ಲಿ ಇಂತಹ ಯೋಜನೆಗಳನ್ನು ಮಾಡಿದಾಗ ಅವು ಸಕ್ಸಸ್ ಆಗಬೇಕು ಎಂದರೆ ಸಮುದಾಯದ ಸಹಕಾರ ಅತಿ ಮುಖ್ಯ ಎಂದರು. ಜಿಲ್ಲೆಯಲ್ಲಿ ಕನಿಷ್ಠ 100 ಗ್ರಾಮಗಳನ್ನು ಆಗಸ್ಟ್ 15ರೊಳಗೆ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಮಾಡುವ ನಿರ್ಧಾರ ಮಾಡಿದ್ದೇವೆ. ಪ್ರತಿಯೊಬ್ಬ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ತಲಾ 2 ಗ್ರಾಮಗಳನ್ನು ದತ್ತು ಪಡೆದು ಆ ಗ್ರಾಮದಲ್ಲಿ ನಾವು ಜೆಜೆಎಂ ಯೋಜನೆ ಜಾರಿಗೊಳಿಸಲು ನಿರಂತರ ಶ್ರಮಿಸುತ್ತೇವೆ ಎಂದರು.
- - --6ಎಚ್.ಎಲ್.ಐ3.ಜೆಪಿಜಿ:
ಹೊನ್ನಾಳಿ ತಾಲೂಕಿನ ಹನಗವಾಡಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.