ಕನ್ನಡಪ್ರಭ ವಾರ್ತೆ ಮುಧೋಳ
ವಿವಿಧ ವಾದ್ಯಮೇಳಗಳು ಡಾಲ್ಬಿ ಹಾಗೂ ಪಾಪ್ ಸಂಗೀತಕ್ಕೆ ಯುವಕರು ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಇಡೀ ನಗರವು ಕೇಸರಿಮಯವಾಗಿತ್ತು. ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಗುರುವಾರ ಸಂಜೆ ಹೊತ್ತಿಗೆ ನಗರಕ್ಕೆ ಆಗಮಿಸಿದ ವಿಜಯಪುರದ ಶಾಸಕ ಬಸನಗೌಡ ಪಾಟಿಲ ಯತ್ನಾಳ ಅವರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕೋರ್ಟ್ ಮೆಟ್ಟಿಲೇರುವೆ:ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತೆಲಂಗಾಣದ ಹೈದರಾಬಾದ್ನ ಶಾಸಕ ರಾಜಾಸಿಂಗ್ ಅವರಿಗೆ ನಿರ್ಬಂಧ ವಿಧಿಸಿದ್ದು, ಖಂಡನೀಯ. ಈ ಕುರಿತು ತಾವು ಕೋರ್ಟ್ ಮೆಟ್ಟಲೇರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.
ನಿರ್ಬಂಧಕ್ಕೆ ಖಂಡನೆ:
ರಾಜಾಸಿಂಗ್ ಅವರಿಗೆ ಸೆ.16 ರಿಂದ ಮುಂದಿನ ಮೂರು ತಿಂಗಳ ಅವಧಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶಿಸದಂತೆ ಆದೇಶಿಸಿರುವುದನ್ನು ಹಿಂದುಪರ ಸಂಘಟನೆಗಳು ಕೂಡ ತೀವ್ರವಾಗಿ ಖಂಡಿಸಿವೆ. 2015ರಲ್ಲಿ ಇದೇ ಜನತಾ ರಾಜಾ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಉಂಟಾದ ಗಲಾಟೆಯಲ್ಲಿ ಕೋಟ್ಯಂತರ ಮೊತ್ತದ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು.