ಕನ್ನಡಪ್ರಭ ವಾರ್ತೆ ಹರಿಹರ
ನಿತ್ಯ ಹರಿಹರದಿಂದ ಕಡೂರಿಗೆ ಮರದ ಕೆತ್ತನೆ ಕಸೂರಿ ಮಾಡುವ ಕಾರ್ಯಕ್ಕೆ ತೆರಳುವ ಹರಿಹರದ ಖ್ಯಾತ ಚಿತ್ರಕಲಾವಿದ ಜಿ.ಎಂ.ರಾಜಶೇಖರಮೂರ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ಸಿದ್ಧಗಂಗಾ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ 7.58ಕ್ಕೆ ಆಗಮಿಸಿ 8 ಗಂಟೆಗೆ ಹರಿಹರದಿಂದ ಬೆಂಗಳೂರು ಕಡೆ ತೆರಳುವ 6ನೇ ನಂಬರ್ ಡಬ್ಬಿಯಲ್ಲಿ ಪ್ರಯಾಣಿಸುತ್ತಾರೆ.
ಡಬ್ಬಿಯಲ್ಲಿ ಹತ್ತುವ ಹೊಸ ಹೊಸ ಪ್ರಯಾಣಿಕರನ್ನೂ ಪರಿಚಯ ಮಾಡಿಕೊಂಡು ಅವರ ಹೆಸರು ಕೆಲಸ ಸೇರಿದಂತೆ ಇಡೀ ಡಬ್ಬಿಯಲ್ಲಿರುವವರಿಗೆ ಪರಿಚಯ ಮಾಡಿಕೊಡುತ್ತಾರೆ.ಇವರೆಲ್ಲರ ಸಹಯೋಗದಲ್ಲಿ ರಾಜಶೇಖರಮೂರ್ತಿ ನೇತೃತ್ವದಲ್ಲಿ ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆಯ ಗೆಳೆಯರ ಬಳಗ ಸ್ಥಾಪಿಸಲಾಗಿದೆ. ಬಳಗದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸುತ್ತಾರೆ.
ಇವರೆಲ್ಲರ ಆತ್ಮೀಯತೆಯಿಂದ ಬೆರಗಾದ ಹಾವೇರಿ, ರಾಣಿಬೆನ್ನೂರು ಪ್ರಯಾಣಿಕರೂ ಸಹ ಬಳಗದೊಂದಿಗೆ ಕೈ ಜೋಡಿಸಿದ್ದಾರೆ. ಅವರೊಂದಿಗೆ ಅಕ್ಕ ಪಕ್ಕದ ಡಬ್ಬಿಯ ಸಹ ಪ್ರಯಾಣಿಕರೂ ಬಳಗದೊಂದಿಗೆ ಕೈ ಜೋಡಿಸಿದ್ದಾರೆ. ಇವರೆಲ್ಲರಿಗೂ ದಿನ ನಿತ್ಯದ ಪ್ರಯಾಣ ಅತ್ಯಂತ ಸಂತೋಷಕರ ಆಗಿ ಬಿಟ್ಟಿದೆ. ಇವರು ಮಾಡುವ ರಾಜ್ಯೋತ್ಸವ ಕಾರ್ಯಕ್ರಮಕ್ಕಂತೂ ಜಾತಿ, ಮತ ಮರೆತು ಎಲ್ಲ ಸಮೂದಾಯದವರೂ ಸೇರುತ್ತಾರೆ.ನವೆಂಬರ್ ತಿಂಗಳಲ್ಲಿ ಎಲ್ಲರ ಅನುಕೂಲ ಉಪಸ್ಥಿತಿಗೆ ಅನುಗುಣವಾಗಿ ರಾಜ್ಯೋತ್ಸವಕ್ಕೆ ಮಹೂರ್ತ ಸಿದ್ದ ಪಡಿಸುತ್ತಾರೆ. ಕನ್ನಡಾಂಬೆಯ ಸಿಂಗರಿಸಿ, ಪೂಜೆ ಸಲ್ಲಿಸಿ, ಸಾಮೂಹಿಕವಾಗಿ ಎದ್ದುನಿಂತು ಕನ್ನಡ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಣೆ, ನಾಡಗೀತೆ ಹಾಡುವ, ಕನ್ನಡದ ಮಹತ್ವ ಸಾರುವ ಕಾರ್ಯ, ಹಿರಿಯರಿಗೆ, ಗೆಳೆಯರಿಗೆ, ಗೌರವ ಸನ್ಮಾನ ನೀಡಿ ನಂತರ ಬೋಗಿಯ ಸಹ ಪ್ರಯಾಣಿಕರಿಗೆಲ್ಲ ಸಿಹಿ ಹಂಚಲಾಯಿತು.
ಇವರ ರಾಜ್ಯೋತ್ಸವ ಪೂಜೆಗೆ ಮಾತ್ರ ಸಿಮಿತವಾಗದೆ, ಬರುವ ಪ್ರಯಾಣಿಕರಿಗೆ ರೈಲಿನ ಬೋಗಿ, ಶೌಚಾಲಯ ಸ್ವಚ್ಛತೆ, ನೀರಿನ ಮಿತವ್ಯಯ, ತಿಂದ ತಿಂಡಿ, ಊಟ ಮಾಡಿದ ಪ್ಲಾಸ್ಟಿಕ್ ವಸ್ತುಗಳನ್ನು ದಾರಿಯಲ್ಲಿ ಕಿಟಕಿಯ ಮೂಲಕ ಎಸೆಯದಂತೆ, ಇದರಿಂದ ಪರಿಸರಕ್ಕೆ ಆಗುವ ನಷ್ಟ, ರೈಲಿಗೆ ವಿದ್ಯುತ್ ತಂತಿಗಳ ವ್ಯವಸ್ಥೆ ಇರುವ ಕಾರಣ ಹಳಿ ದಾಟದಂತೆ ಟಿಕೆಟ್ ಇಲ್ಲದ ಪ್ರಯಾಣ ದಂಡಕ್ಕೆ ಕಾರಣ ಎಂಬ ಸ್ಲೋಗನ್ ಬೋರ್ಡ್ಗಳನ್ನು ಪ್ರದರ್ಶಿಸಿ ಜನರಲ್ಲಿ ಅರಿವು ಉಂಟು ಮಾಡುತ್ತಾರೆ.ಇವರ ಡಬ್ಬಿಯಲ್ಲಿ, ವೈದ್ಯರು, ಎಂಜಿನಿಯರ್, ಕೃಷಿ ಪಂಡಿತರು ಸೇರಿದಂತೆ ವಿವಿಧ ಉದ್ಯೋಗಸ್ಥರು ಪ್ರಯಾಣಿಸುತ್ತಾರೆ. ತಾವು ಅರಿತ ಮಾಹಿತಿಗಳನ್ನು ಜೊತೆಗಾರರೊಂದಿಗೆ ಹಂಚಿಕೊಳ್ಳುತ್ತಾರೆ. ಕೃಷಿಯಲ್ಲಿ ಸಾಧನೆ ಮಾಡಿದವರು ಮಣ್ಣಿನ ಗುಣ, ಬೀಜಗಳ ಬಳಕೆ, ಔಷಧ ಬಳಕೆ, ಬೆಳೆಗಳು, ಅವುಗಳ ಮಾರುಕಟ್ಟೆ ಮುಂತಾದ ಮಾಹಿತಿಗಳನ್ನು ಹಂಚುತ್ತಾರೆ.