ಗದಗ: ಉತ್ತಮ ಪರಿಸರ ನಿರ್ಮಾಣದಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಆದ್ದರಿಂದ ಗ್ರಾಮಸ್ಥರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡು ಪ್ರತಿಯೊಬ್ಬರೂ ಹಸಿರು ಪರಿಸರವನ್ನು ನಿರ್ಮಿಸುವಲ್ಲಿ ಮುಂದಾಗಬೇಕೆಂದು ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ಎಲ್. ಗುಂಜೀಕರ್ ಹೇಳಿದರು. ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಸಹಯೋಗದಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಗ್ರಾಮದ ನೈರ್ಮಲ್ಯತೆಯನ್ನು ಕಾಪಾಡಿ ಸ್ವಚ್ಛ ಸುಂದರ ಗ್ರಾಮವನ್ನಾಗಿ ಪರಿವರ್ತನೆ ಮಾಡಬೇಕಾಗಿದ್ದು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಗ್ರಾಮ ಪಂಚಾಯಿತಿಯ ನಿಕಟವರ್ತಿಯಾಗಿ ಕೆಲಸ ಮಾಡಲು ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ ಎಂದರು.ಜಿಪಂ ಸ್ವಚ್ಛ ಭಾರತ ಮಿಷನ್ ಯೋಜನೆಯ ಜಿಲ್ಲಾ ಸಂಯೋಜಕ ಕೃಷ್ಣ ದೊಡ್ಡಮನಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ, ವೈಜ್ಞಾನಿಕವಾಗಿ ಗ್ರಾಮದಲ್ಲಿ ಮುಕ್ತ ಮಾಡಲು ಎಲ್ಲರ ಸಹಕಾರ ನೀಡಬೇಕು. ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆ ಅಡಿಯಲ್ಲಿ ಪ್ರಸ್ತಕ ಸಾಲಿನಲ್ಲಿ ಸರಕಾರವು ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿದೆ ಎಂದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಸರೋಜಕ್ಕ ಮಾತನಾಡಿ, ಪರಮಾತ್ಮನ ಜ್ಞಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಪರಿಸರದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಎಲ್ಲಿ ಪರಿಸರ ಧನಾತ್ಮಕವಾಗಿ ಕೂಡಿರುತ್ತದೆಯೂ ಅಲ್ಲಿ ಪರಮಾತ್ಮ ನೆಲೆಸಿರುತ್ತಾನೆ ಎಂದರು.
ಜಿಲ್ಲಾ ಎಸ್.ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಬಸವರಾಜ ಮುಳ್ಳಾಳ, ಭಾರತೀಯ ಕಿಸಾನ ಸಂಘದ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ದೊಂಗಡೆ, ಗ್ರಾಪಂ ಮಟ್ಟದ ಮಹಿಳಾ ಸಂಜೀವಿನ ಒಕ್ಕೂಟದ ಅಧ್ಯಕ್ಷೆ ಕಸ್ತೂರೆವ್ವ ಗುಂಜಳ, ಚಂದ್ರಕಲಾ ಮಾಡಲಗೇರಿ, ಶೈಲಾ ಅಂಬಕ್ಕಿ ಹಾಗೂ ಆಶಾ, ಅಂಗನವಾಡಿ, ಗ್ರಾಪಂ ಸಿಬ್ಬಂದಿ ಇದ್ದರು. ಪಿಡಿಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಪ್ರದೀಪ ಆಲೂರ ಸ್ವಾಗತಿಸಿದರು. ಎಂ.ಎ.ಗಾಜಿ ವಂದಿಸಿದರು.