ಹನೂರು: ಮಾಜಿ ಪ್ರಧಾನಮಂತ್ರಿ, ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡಿರುವುದು ಇಡೀ ಭಾರತ ದೇಶಕ್ಕೆ ಅಪಾರ ನಷ್ಟ ಉಂಟು ಮಾಡಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ತಿಳಿಸಿದರು.
ಡಾ.ಮನಮೋಹನ್ ಸಿಂಗ್ ಅವರು ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ 10 ವರ್ಷದ ಅವಧಿಯಲ್ಲಿ ಹಲವು ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರ ಮೂಲಕ ಉತ್ತಮ ಆಡಳಿತ ಕೊಟ್ಟು ಜನ ಮನ್ನಣೆಗಳಿಸಿದ ಮಹಾನ್ ನಾಯಕರಾಗಿದ್ದಾರೆ. ಪ್ರಧಾನಿಯಾಗಿದ್ದಾಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ಆಹಾರ ಶಿಕ್ಷಣ ಹಕ್ಕು ಕಾಯ್ದೆ, ಮೊಬೈಲ್ ಪೋರ್ಟ್ ಎಬಿಲಿಟಿ ಸೌಲಭ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯೋಜನೆ ಜಾರಿ ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹಳ್ಳಿಗಾಡಿನ ಜನತೆಗೆ ಪ್ರತಿ ವರ್ಷ ಕನಿಷ್ಠ ನೂರು ದಿನಗಳ ಉದ್ಯೋಗ ಖಾತ್ರಿ ನೀಡುವ ಯೋಜನೆ ಜಾರಿಗೆ ತಂದ ನಂತರ ಇದು ಬಡವರಿಗೆ ವರದಾನವಾಗಿದೆ. ಪ್ರತಿಯೊಂದು ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ 6 ವರ್ಷದಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಗೆ ತರುವುದರ ಮೂಲಕ ಶಿಕ್ಷಣ ಕ್ರಾಂತಿ ರೂಪಿಸಿದ್ದಾರೆ, ಆಹಾರ ಭದ್ರತೆ ಕಾಯ್ದೆಯಿಂದ ದೇಶದ 120 ಕೋಟಿ ಜನರಿಗೆ ಇದರ ಲಾಭ ದೊರಕಿದೆ ಎಂದು ಸ್ಮರಿಸಿದರು.ಪಪಂ ನಾಮನಿರ್ದೇಶಿತ ಬಸವರಾಜು ಮಾತನಾಡಿ, ಪ್ರಧಾನಮಂತ್ರಿ ಪಿ.ವಿ ನರಸಿಂಹರಾವ್ ಅವರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ 1991 ರಲ್ಲಿ ಮಂಡಿಸಿದ ಬಜೆಟ್ ಈ ದೇಶದ ಗತಿಯನ್ನೇ ಬದಲಿಸಿದ ಮಾಂತ್ರಿಕ ಬಜೆಟ್ ಎಂಬ ಖ್ಯಾತಿ ಪಡೆದಿದೆ. ಭಾರತ ದೇಶ ದಿವಾಳಿಯತ್ತ ಸಾಗಿದ ಆರ್ಥಿಕತೆಯನ್ನು ಆ ಬಜೆಟ್ನಲ್ಲಿ ಮನಮೋಹನ್ ಸಿಂಗ್ ಅಚ್ಚರಿಯ ರೀತಿಯಲ್ಲಿ ಮೇಲೆತ್ತಲು ಅಡಿಪಾಯ ಹಾಕಿದ್ದರು ಎಂದರು. ಪಪಂ ಸದಸ್ಯ ಸಂಪತ್ ಮಾಜಿ ಉಪಾಧ್ಯಕ್ಷ ಮಾದೇಶ್, ಎಲ್ಲೇಮಾಳ ನಾಗೇಶ್, ರಾಜು, ರಾಜೇಶ್ ಸಿದ್ದನಂಜೇಗೌಡ, ಮಂಜೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಪಪಂ ನಾಮ ನಿರ್ದೇಶನ ಸದಸ್ಯರಾದ ಬಸವರಾಜ್ ಇದ್ದರು.