ಮುಂಬೈ ದಾಳಿ ಬಳಿಕ ನಡೆದ ಘೋರ ಘಟನೆ: ಡಾ.ನಿಂಗರಾಜ್‌ಗೌಡ

KannadaprabhaNewsNetwork | Published : Apr 30, 2025 12:34 AM

ಸಾರಾಂಶ

ದಾಳಿಕೋರರು ಪ್ರವಾಸಿಗರನ್ನ ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸಿ ಪುರುಷರನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದಾರೆ. ಇಸ್ಲಾಂನ ಕಲ್ಮಾ ಉಚ್ಛರಿಸಲು ವಿಫಲರಾದವರಿಗೆ ಗುಂಡಿಕ್ಕಿದ್ದಾರೆ. ದಾಳಿಯಲ್ಲಿ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಸಂಪರ್ಕವಿರುವುದನ್ನು ಭಾರತೀಯ ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿ ೨೦೦೮ರ ಮುಂಬೈ ದಾಳಿ ನಂತರದ ಅತ್ಯಂತ ಘೋರ ದಾಳಿ. ಅದರಲ್ಲೂ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ಗುಂಡುಹಾರಿಸಿ ಕೊಂದಿರುವುದು ಹೀನ ಮತ್ತು ಅಮಾನುಷ ಎಂದು ಮೈಸೂರು ಸಿಂಡಿಕೇಟ್ ವಿವಿ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿ ಮಂಡ್ಯ ಚಿತ್ರಕಲಾವಿದರ ಬಳಗ, ರೈನ್‌ಬೋ ಕ್ರಿಯೇಷನ್ಸ್, ಡಾ.ಈ.ಸಿ.ನಿಂಗರಾಜ್‌ಗೌಡ ಸ್ನೇಹ ಬಳಗದ ಆಶ್ರಯದಲ್ಲಿ ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಭಾರತೀಯ ನಾಗರಿಕರಿಗೆ ಚಿತ್ರನಮನ ಸಲ್ಲಿಸಿ ಮಾತನಾಡಿದರು.

ದಾಳಿಕೋರರು ಪ್ರವಾಸಿಗರನ್ನ ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸಿ ಪುರುಷರನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದಾರೆ. ಇಸ್ಲಾಂನ ಕಲ್ಮಾ ಉಚ್ಛರಿಸಲು ವಿಫಲರಾದವರಿಗೆ ಗುಂಡಿಕ್ಕಿದ್ದಾರೆ. ದಾಳಿಯಲ್ಲಿ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಸಂಪರ್ಕವಿರುವುದನ್ನು ಭಾರತೀಯ ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ. ಮೂವರು ಆರೋಪಿಗಳಲ್ಲಿ ಇಬ್ಬರು ಪಾಕಿಸ್ತಾನ ಮೂಲದವರಾಗಿರುವುದು ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿರುವುದನ್ನು ಎತ್ತಿ ತೋರಿಸುತ್ತಿದೆ ಎಂದರು.

ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ತೆಗೆದ ಬಳಿಕ ಶಾಂತಿ ನೆಲೆಸಿತ್ತು. ಲಕ್ಷಾಂತರ ಪ್ರವಾಸಿಗರು ಅಲ್ಲಿಗೆ ಬಂದು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಕಾಶ್ಮೀರ ಉಗ್ರರ ಉಪಟಳದಿಂದ ದೂರವಾಗಿ ಶಾಂತಿಯ ಧಾಮವಾಗುತ್ತಿರುವುದನ್ನು ಪಾಕಿಸ್ತಾನ ಸಹಿಸದೆ ಈ ಕ್ರೌರ್ಯವನ್ನು ಮೆರೆದಿದೆ. ಇದಕ್ಕೆ ಭಾರತ ಯಾರೂ ನಿರೀಕ್ಷಿಸದ ರೀತಿಯಲ್ಲಿ ದಿಟ್ಟ ಉತ್ತರ ನೀಡಲು ಸಜ್ಜಾಗುತ್ತಿದೆ ಎಂದರು.

ಮೊದಲಿಗೆ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿಯ ಒಪ್ಪಂದಕ್ಕೆ ತಾತ್ಕಾಲಿಕ ತಡೆಯೊಡ್ಡಿದೆ. ನದಿ ನೀರಿನ ಮಾರ್ಗಗಳನ್ನು ಬದಲಿಸಲು ಯೋಜನೆಗಳನ್ನು ರೂಪಿಸುತ್ತಿದೆ. ಅಣೆಕಟ್ಟೆಯ ಎತ್ತವರನ್ನು ಎತ್ತರಿಸಲು ಮುಂದಾಗಿದೆ. ಹೀಗೆ ಹಲವು ರಾಜತಾಂತ್ರಿಕ ಸಮರದೊಂದಿಗೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದಕ್ಕೆ ಮುಂದಾಗಿದೆ. ಇದಕ್ಕೆ ಭಾರತೀಯರಲ್ಲರ ಬೆಂಬಲವಿದೆ ಎಂದರು.

ಉಗ್ರರ ಅಮಾನುಷ ದಾಳಿ ನಡೆದಿದ್ದರೂ ಮುಖ್ಯಮಂತ್ರಿಗಳ ಹೇಳಿಕೆ ಹಾಗೂ ವರ್ತನೆ ಸರಿಯಾಗಿಲ್ಲ. ಹಿಂದೆ ಜಿಲ್ಲಾಧಿಕಾರಿಯನ್ನು ವೇದಿಕೆಯಲ್ಲಿ ಅವಮಾನಿಸಿದ್ದರು. ಈಗ ಪೊಲೀಸ್ ಇಲಾಖೆಯನ್ನೇ ಅವಮಾನಿಸಿದ್ದಾರೆ. ದೇಶದ ಭದ್ರತೆ ವಿಷಯ ಬಂದಾಗಲೂ ವಿರೋಧಿ ದೇಶದ ಪರ ಹೇಳಿಕೆ ನೀಡುತ್ತಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಪಾಕಿಸ್ತಾನದಲ್ಲೋ, ಅಫ್ಘಾನಿಸ್ತಾನದಲ್ಲೋ ವಾಸಿಸಲಿ. ನಮ್ಮ ದೇಶ ಸರ್ವರನ್ನೂ ಅಪ್ಪಿ ಮುದ್ದಾಡುತತ್ತಿವೆ. ದೇಶದ ಭದ್ರತೆ ವಿರುದ್ಧ ಅವರು ಹೇಳಿಕೆ ನೀಡುವುದಾದರೆ ದೇಶದ ಪರ ಹಾಗೂ ದೇಶಾಭಿಮಾನವಿರುವವರು ಅವರ ವಿರುದ್ಧ ಪ್ರತಿಭಟಿಸುವುದರಲ್ಲಿ ತಪ್ಪೇನು ಎಂದರು.

ಉಗ್ರರ ದಾಳಿಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು. ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳ ಪರವಾಗಿ ನಿಲ್ಲಬೇಕು. ಉಗ್ರರಿಗೆ ಆಶ್ರಯ ತಾಣವಾಗಿ ಪದೇ ಪದೇ ಭಾರತದ ನೆಲದ ಮೇಲೆ ದಾಳಿ ನಡೆಸಲು ಕುಮ್ಮಕ್ಕು ನೀಡುವ ಪಾಕಿಸ್ತಾನಿಯರಿಗೆ ತಕ್ಕ ಪಾಠ ಕಲಿಸುವ ಕಾಲ ಒದಗಿ ಬಂದಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ನದಿ ಒಪ್ಪಂದಕ್ಕೆ ತಾತ್ಕಾಲಿಕ ತಡೆ ನೀಡದೆ ಶಾಶ್ವತ ತಡೆಯೊಡ್ಡಬೇಕು.

ಕಾಶ್ಮೀರದಲ್ಲಿ ಶಾಂತಿ ನೆಲಸಬೇಕು. ಪಿಒಕೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ವಶಕ್ಕೆ ಪಡೆದುಕೊಳ್ಳಬೇಕು. ಅದಕ್ಕೆ ಈಗ ಒಳ್ಳೆಯ ಸದಾವಕಾಶ ಕೂಡಿಬಂದಿದೆ. ಪಾಕಿಸ್ತಾನಿಯರಿಗೆ ಭಾರತಕ್ಕೆ ಪ್ರವೇಶ ಸಿಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವುದರೊಂದಿಗೆ ಈ ಬಾರಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಎದಿರೇಟು ನೀಡುವುದರೊಂದಿಗೆ ಮತ್ತೆ ಪಾಕಿಸ್ತಾನ ಭಾರತದ ತಂಟೆಗೆ ಬರದಂತೆ ತಡೆಯುವಂತೆ ಒತ್ತಾಯಿಸಿದರು.

ಚಿತ್ರಕಲಾವಿದರಾದ ಕೆ.ಎನ್.ಶಂಕರಪ್ಪ, ಎಂ.ಶಿವಪ್ರಸಾದ್, ವಿನೋದ್‌ಕುಮಾರ್, ಬಿ.ಎಸ್.ವಿದ್ಯಾಶ್ರೀ, ಎಸ್.ವಿರೂಪಾಕ್ಷ, ಜಯರಾಂ, ಶೋಭಾ ಇದ್ದರು.

Share this article