ಕನ್ನಡಪ್ರಭ ವಾರ್ತೆ ಕಲಬುರಗಿ
ಶುಕ್ರವಾರ ಬೆ.11ಕ್ಕೆ ಸಭೆ ಶುರುವಾಗುತ್ತಿದ್ದಂತೆಯೇ ಹಿರಿಯ ಸದಸ್ಯ ಯಲ್ಲಪ್ಪ ನಾಯಿಕೋಡಿ, ವಿಪಕ್ಷ ನಾಯಕ ಕೃಷ್ಣ ನಾಯಕ್ , ಕಾಂಗ್ರೆಸ್ನ ಸಚೀನ್ ಶಿರವಾಳ್, ಬಿಜೆಪಿಯ ವಿಜಯಕುಮಾರ್ ಸೇವಲಾನಿ ಸೇರಿದಂತೆ ಅನೇಕ ಸದಸ್ಯರು ಸೇವಾ ಭದ್ರತೆ, ನೇಮಕಾತಿ ವಿಚಾರದಲ್ಲಿನ ಗೊಂದಲಗಳಿಂದಾಗಿ ಧರಣಿ ನಡೆಸಿರುವ ಪೌರ ಕಾರ್ಮಿಕರ ಕಾಯಂಮಾತಿ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳಿಂದ ಮಾಹಿತಿ ಬಯಸಿದರು.
ಪೌರ ಕಾರ್ಮಿಕರ ನೇಮಕಾತಿಗೆ 6.12.2018ರಂದು ಹೊರಬಿದ್ದ ಅಧಿಸೂಚನೆಯಿಂದ ಹಿಡಿದು ಇಲ್ಲಿಯವರೆಗೂ ಏನೆಲ್ಲಾ ಬೆಳವಣಿಗೆಗಳು ನಡೆದಿವೆ ಎಂಬುದನ್ನು ಪರಿಸರ ಎಂಜಿನಿಯರ್ ಮುನಾಫ್ ಪಟೇಲ್ ಸಭೆಗೆ ಗಮನಕ್ಕೆ ತರುತ್ತಿರುವಂತೆಯೇ ಪ್ರಶ್ನೆಗಳ ಸುರಿಮಳೆಗರೆದ ಸದಸ್ಯರು ನೇಮಕಾತಿಯಲ್ಲಿ ಹಗರಣವಾಗಿದೆ, ಕೆಟಗರಿ ಪಾಲನೆಯಾಗಿಲ್ಲ, ಸತ್ತವರ ಹೆಸರು ಪ್ರತ್ಯಕ್ಷವಾಗಿವೆ ಎಂದು ಹೇಳುತ್ತ ಪ್ರಾದೇಶಿಕ ಆಯುಕ್ತರು ಈ ವಿಚಾರದಲ್ಲಿ ಸರಕಾರದ ಗಮನ ಸೆಳೆದು ಬರೆದ ಪತ್ರವನ್ನು ಓದುತ್ತ ಸಂಬಂಧಪಟ್ಟಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.ನೇಮಕಾತಿ ಪ್ರಮಾದಕ್ಕೆ ಕಾರಣರಾದವರ ವಿರುದ್ಧ ಕ್ರಮ ಯಾಕಿಲ್ಲ:
ಈ ಪತ್ರದ ಮೇಲೆಯೇ ಪೌರಾಡಳಿತ ನಿರ್ದೇಶನಾಲಯ ಕಳುಹಿಸಿದ್ದ ಪರಿಶೀಲನಾ ತಂಡದ ಸದಸ್ಯರು ಸಹ ದೋಷಗಳನ್ನು ಪಟ್ಟಿ ಮಾಡಿದ್ದಾರೆ. ಇಂತಹ ದೋಷಪೂರಿತ ನೇಮಕಾತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಲು ಕೋರಿದ್ದರೂ ಪಾಲಿಕೆ ಇದನ್ನು ಕಡೆಗಣಿಸಿದೆ ಎಂದು ಸಚೀನ್ ಶಿರವಾಳ್, ವಿಜಯ ಸೇವಲಾನಿ, ಕೃಷ್ಣ ನಾಯಕ್, ಯಲ್ಲಪ್ಪ ನಾಯಿಕೋಡಿ ಸೇರಿದಂತೆ ಅನೇಕರು ವಾಗ್ದಾಳಿ ನಡೆಸಿದರು.
ಪಾಲಿಕೆಯ ಪೌರ ಕಾರ್ಮಿಕರ ನೇಮಕಾತಿಯಲ್ಲಿ ವಿಶೇಷ ನಿಯಮಗಳನ್ನು ಪರಿಗಣಿಸಿ ಅರ್ಹತೆ ಇದ್ದವರನ್ನು ಮಾತ್ರ ಪರಿಗಣಿಸಬೇಕು, ಅನರ್ಹರನ್ನು ಪಟ್ಟಿಯಿಂದ ಕೈಬಿಡಬೇಕು, ಸದರಿ ಲೋಪಗಳಿರುವ ತಾತ್ಕಾಲಿಕ ಆಯ್ಕೆಪಟ್ಟಿ ಹೊರಬರಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪೌರಾಡಳಿತ ನಿರ್ದೇಶನಾಲಯದಿಂದ ಪತ್ರ ಬಂದು ವರ್ಷ ಉರುಳಿದರೂ ಶಿಸ್ತು ಕ್ರಮ ಯಾಕಾಗಿಲ್ಲ. ಇವೆಲ್ಲ ದೋಷಗಳಿಗೆ ಪರಿಸರ ಎಂಜಿನಿಯರ್ ಎಇಇ ಮುನಾಫ್ ಪಟೇಲ್ ನೇರ ಹೊಣೆ ಎಂದು ಯಲ್ಲಪ್ಪ ನಾಯಿಕೋಡಿ, ಸಚೀನ್ ಶಿರವಾಳ ಆರೋಪಿಸಿದರಲ್ಲದೆ ತಕ್ಷಣ ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಪರಿಹಾರ ಮಾರ್ಗೋಪಾಯ ಚಿಂತನೆ ಮಾಡಬೇಕೆಂದು ಕಮೀಷ್ನರ್, ಮೇಯರ್ಗೆ ಆಗ್ರಹಿಸಿದಾಗ ಸಸ್ಪೆಂಡ್ ಎಲ್ಲದಕ್ಕೂ ಪರಿಹಾರವಲ್ಲ, ದುಡುಕಿನ ಕ್ರಮ ಬೇಡವೆಂದು ಅಜ್ಮಲ್ ಗೋಲಾ ತಮ್ಮ ಅಸಮ್ಮತಿ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆಯಿತು.
ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸತ್ತವರಿಗೂ ಸ್ಥಾನ: ಪಾಲಿಕೆ ಪೌರ ಕಾರ್ಮಿಕರ ನೇಮಕಾತಿಗೆ 3 ವರ್ಷದಿಂದ ಪ್ರಕ್ರಿಯೆ ನಡೆದಿತ್ತು. 2018ರಲ್ಲಿ ಅಧಿಸೂಚನೆ ಹೊರಬಿದ್ದು 258 ಕಾರ್ಮಿಕರ ನೇಮಕಾತಿಗೆ ಮುಂದಾಗಿತ್ತು. 137 ನೇರ ನೇಮಕಾತಿ, 376 ನೇರ ಪಾವತಿ ವಿಧಾನದಲ್ಲಿ ತಾತ್ಕಾಲಿಕ ನೇಮಕಾತಿ ಪಟ್ಟಿ 6.4.2021ರಂದು ಹೊರಡಿಸಿ 2 ವಾರ ಆಕ್ಷೇಪಣೆಗೆ ಅವಕಾಶ ನೀಡುವುದರ ಜೊತೆಗೆ 2ನೇ ನೇಮಕಾತಿ ಅಧಿಸೂಚನೆ ಕೂಡಾ ಹೊರಡಿಸಲಾಗಿತ್ತು. ಇದಕ್ಕೆ ಸಾಕಷ್ಟು ಆಕ್ಷೇಪಣೆಗಳು ಬಂದಾಗ ಪ್ರಾದೇಶಿಕ ಆಯುಕ್ತರು ದೋಷಪೂರತ ಆಯ್ಕೆಪಟ್ಟಿ ಎಂದು ಡಿಸಿ ವಿರುದ್ಧ ಸರ್ಕಾರಕ್ಕೆ, ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ನಂತರ ಸಮಿತಿ ರಚನೆಯಾಗಿ ನಡೆದ ಪರಿಶೀಲನೆಯಲ್ಲಿ ಕೆಟಗರಿ ಅದಲು ಬದಲಾಗಿರೋದು ಪತ್ತೆಯಾಯ್ತು, ಸತ್ತವರು ಕೂಡಾ ಪಟ್ಟಿಯಲ್ಲಿ ಪ್ರತ್ಯಕ್ಷರಾಗಿದ್ದು ಗೊತ್ತಾಯ್ತು.