ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರದ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳ ಎದುರು ಸೇರಿದ ಹೋರಾಟಗಾರರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಮಲತಾಯಿ ಧೋರಣೆ ತಾಳುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.
ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭವಾದ ಬೈಕ್ ರ್ಯಾಲಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಚಾಲನೆ ನೀಡಿದರು. ಬಳಿಕ ಬೈಕ್ ರ್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ, ಬಜಾರ ರಸ್ತೆ, ಮೇದಾರ ಗಲ್ಲಿ, ಬಸವ ಸರ್ಕಲ್, ಇಂಚಲ ಕ್ರಾಸ್, ಎಪಿಎಂಸಿ ಗಣೇಶ ದೇವಸ್ಥಾನ ಮಾರ್ಗವಾಗಿ ಚನ್ನಮ್ಮನ ವೃತ್ತಕ್ಕೆ ಆಗಮಿಸಿತು. ಎಪಿಎಂಸಿ ಗಣೇಶ ದೇವಸ್ಥಾನ ಆವರಣದಲ್ಲಿ ಚಕ್ಕಡಿ, ಟ್ರ್ಯಾಕ್ಟರ್ಗಳ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಪಾದಚಾರಿಗಳು, ಪ್ರಯಾಣಿಕರು ಸುಗಮ ಸಂಚಾರಕ್ಕಾಗಿ ಪರದಾಡಿದರು.ಶಾಸಕರ ಮನೆಗೆ ಪೊಲೀಸ್ ಭದ್ರತೆ:
ಹೋರಾಟದಲ್ಲಿ ಭಾಗವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯದಲ್ಲಿಯೇ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅನೇಕ ಹಗರಣಗಳು ನಡೆದರೂ ಯಾವುದೇ ಕ್ರಮವಹಿಸಿಲ್ಲ. ಕಿತ್ತೂರು ಚನ್ನಮ್ಮ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಭ್ರಷ್ಟಾಚಾರ ಕೇಳಿ ಬಂದಿದೆ. ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಕುರಿತು ಕಳೆದ 23 ದಿನಗಳಿಂದ ಹೋರಾಟ ನಡೆದರೂ ವಿಧಾನ ಮಂಡಲದಲ್ಲಿ ಈ ಭಾಗದ ಶಾಸಕರು ಯಾವುದೇ ಚರ್ಚೆ ಮಾಡದೆ ಈ ನಾಡಿಗೆ ಅಗೌರವ ತೋರಿದ್ದಾರೆ. ಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಕಲಾವಿದ ಸಿ.ಕೆ.ಮೆಕ್ಕೇದ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ಹೋರಾಟಗಾರ ರಫೀಕ ಬಡೆಘರ, ವಕೀಲ ಎಫ್.ಎಸ್.ಸಿದ್ದನಗೌಡರ, ಮಲ್ಲಿಕಾರ್ಜುನ ಹುಂಬಿ, ಬೀರಪ್ಪ ದೇಶನೂರ ಮಾತನಾಡಿದರು. ಹಿರಿಯ ವಕೀಲ ಎಂ.ವೈ. ಸೋಮಣ್ಣವರ, ಅಪ್ಪಾಸಾಹೇಬ ಲಕ್ಕುಂಡಿ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಸೋಮನಾಥ ಸೊಪ್ಪಿಮಠ, ರಾಜು ಕುಡಸೋಮಣ್ಣವರ, ಮಹೇಶ ಹರಕುಣಿ, ಈಶ್ವರ ಕೊಪ್ಪದ, ರಿತೇಶ ಪಾಟೀಲ, ಸುಭಾಷ ಬಾಗೇವಡಿ, ಮುರುಗೇಶ ಗುಂಡ್ಲೂರ, ಮಹಾಂತೇಶ ಗುಂಡ್ಲೂರ, ಆನಂದ ಮೂಗಿ, ಆನಂದಗೌಡ ಪಾಟೀಲ, ದುಂಡೇಶ ಗರಗದ, ನಿಂಗಪ್ಪ ಚೌಡನ್ನವರ, ಚನ್ನಪ್ಪ ಹಾದಿಮನಿ, ಮಹಾಂತೇಶ ಕಮತ, ಉದಯ ಕೊಟಬಾಗಿ, ಆಶಾ ಕಸಮಳಗಿ, ಶಾಂತಾ ಮಡ್ಡಿಕರ ಸೇರಿದಂತೆ ವಿವಿಧ ಗ್ರಾಮಸ್ಥರು, ರೈತ, ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
----------
ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವನ್ನಾಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಸರ್ಕಾರದ ಯಾವುದೇ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಶಿಷ್ಟಾಚಾರ ಪಾಲಿಸಿ ಸದನದಲ್ಲಿ ಅಂಗಿಕರಿಸಿದರೆ ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಚನ್ನಮ್ಮ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ.