ರೈತ ಮುಖಂಡ ಶಾನುವಳ್ಳಿ ಗ್ರಾಪಂ. ಸದಸ್ಯ ನವೀನ್ ಕರುವಾನೆ
ಕನ್ನಡಪ್ರಭ ವಾರ್ತೆ, ಕೊಪ್ಪಮಲೆನಾಡು ಭಾಗದಲ್ಲಿ ಕೂಸಿನ ಮನೆ ಯೋಜನೆ ಅವೈಜ್ಞಾನಿಕವಾಗಿದೆ ಎಂದು ರೈತ ಮುಖಂಡ ಶಾನುವಳ್ಳಿ ಗ್ರಾಪಂ. ಸದಸ್ಯ ನವೀನ್ ಕರುವಾನೆ ಹೇಳಿದ್ದಾರೆ.ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಲೆನಾಡಿನಲ್ಲಿ ಕೂಸಿನ ಮನೆ ಅನುಷ್ಠಾನಕ್ಕಾಗಿ ಮೇಲಾಧಿಕಾರಿಗಳು ಗ್ರಾಪಂ ಪಿಡಿಒಗಳಿಗೆ ಒತ್ತಡ ಹಾಕುತ್ತಿದ್ದಾರೆ. 6 ತಿಂಗಳ ನಂತರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರ ಕೂಸಿನ ಮನೆ ಯೋಜನೆಯನ್ನು ಜಾರಿಗೊಳಿಸಿದೆ. ಸಾಧಾರಣವಾಗಿ 3 ವರ್ಷದ ಒಳಗಿನ ಮಕ್ಕಳನ್ನು ತಾಯಂದಿರು ತಾವೇ ಲಾಲನೆ ಪಾಲನೆ ಮಾಡುತ್ತಾರೆ. ಈ ವಯಸ್ಸಿನಲ್ಲಿ ಮಗುವಿಗೆ ತಾಯಿಯ ಹಾಲು ಹೆಚ್ಚು ಪೌಷ್ಟಿಕ ಆಹಾರವಾಗಿದೆ.
ಕೂಸಿನ ಮನೆಯ ಆಹಾರ ಪಟ್ಟಿಯಂತೆ ಹಾಲು ಕುಡಿಯುವ ಮಕ್ಕಳಿಗೆ ರಾಗಿ ಮಾಲ್ಟ್ ಸೇರಿದಂತೆ ಇತರೆ ಆಹಾರಗಳನ್ನು ನೀಡಿದಲ್ಲಿ ಮಗುವಿನ ಆಹಾರ ಕ್ರಮ ಬದಲಾಗಿ ವಾಂತಿ, ಭೇದಿಗಳಾಗಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ ಅವರು ಬಯಲುಸೀಮೆ ಮತ್ತು ಮಲೆನಾಡಿನ ಹವಾಮಾನ, ಜನಜೀವನ, ಆಹಾರಕ್ರಮಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿದ್ದು ಎರಡೂ ಕಡೆಗೂ ಒಂದೇ ರೀತಿಯ ಯೋಜನೆಗಳನ್ನು ಜಾರಿಗೊಳಿಸುವುದು, ಅದರ ಅನುಷ್ಠಾನಕ್ಕೆ ಒತ್ತಡ ಹೇರುವುದು ಅವೈಜ್ಞಾನಿಕ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಮಾಡಲು ಸಾಕಷ್ಟು ಕೆಲಸಗಳಿವೆ. ಇದರ ನಡುವೆ ಕೂಸಿನ ಮನೆ ಅನುಷ್ಠಾನಕ್ಕೆ ಎನ್.ಆರ್.ಐ.ಜಿ. ಮುಖೇನ ಮತ್ತಷ್ಟು ಒತ್ತಡ ಹೇರುತ್ತಿರುವುದರಿಂದ ಗ್ರಾಮದ ಅಭಿವೃದ್ಧಿ ಮತ್ತಷ್ಟು ಕುಂಠಿತಗೊಳ್ಳಲಿದೆ. ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಇನ್ನೂ ಬಾಕಿ ಇದೆ. ಮೊದಲು ಆ ಕೆಲಸವಾಗಲಿ. ಯೋಜನೆಗಳನ್ನು ರೂಪಿಸುವಾಗ ಬಯಲುಸೀಮೆ ಮತ್ತು ಮಲೆನಾಡಿಗೆ ಅನ್ವಯವಾಗುವಂತೆ ಯೋಜನೆ ರೂಪಿಸುವ ಬಗ್ಗೆ ಕ್ರಮವಾಗಲಿ ಎಂದರು. ಹರಂದೂರು ಗ್ರಾ.ಪಂ. ಅಧ್ಯಕ್ಷ ಸುರೇಶ್ ಸುದ್ಧಿಗೋಷ್ಠಿಯಲ್ಲಿದ್ದರು.