ದಾಬಸ್ಪೇಟೆ: ಶಿಕ್ಷಕರು ಮೊದಲನೇಯದಾಗಿ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು, ಎರಡನೇಯದು ಬೋಧನಾ ವಿಷಯವನ್ನು ವಿಶೇಷವಾಗಿ ಪ್ರೀತಿಸಬೇಕು, ನಂತರ ವೃತ್ತಿಯನ್ನು ಪ್ರೀತಿಸಬೇಕು, ಬಳಿಕ ತನಗೆ ಕೆಲಸ ನೀಡಿದ ಇಲಾಖೆಯನ್ನು ಗೌರವದಿಂದ ಕಾಣಬೇಕು. ಈ 4 ಗುಣಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ಸಿಕ್ಕಂತಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪುಟ್ಟರುದ್ರಾರಾಧ್ಯ ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಾಸುದೇವಮೂರ್ತಿ ಮಾತನಾಡಿ, ಶಿಕ್ಷಕ ವೃತ್ತಿ ಇತರೆ ವೃತ್ತಿಗಿಂತ ಪವಿತ್ರವಾದುದಲ್ಲದೇ ಶ್ರೇಷ್ಠತೆಗೆ ಸಾಕ್ಷಿ. ನಾಗವೇಣಿಯವರು ಕಳೆದ 25 ವರ್ಷಗಳಿಂದ ಸಹಶಿಕ್ಷಕಿಯಾಗಿ ನಮ್ಮ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ವರ್ಗಾವಣೆಗೊಂಡ ಶಾಲೆಯಲ್ಲೂ ಉತ್ತಮ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಹೆಸರು ಸಂಪಾದಿಸಲಿ ಎಂದು ಆಶಿಸಿದರು.
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಶಿಕ್ಷಕಿ ನಾಗವೇಣಿ ಮಾತನಾಡಿ, ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ದೊರೆತ ಪ್ರೀತಿ, ವಿಶ್ವಾಸ ಹಾಗೂ ಸ್ಪಂದನೆಯನ್ನು ಎಂದಿಗೂ ಮರೆಯಲಾಗದು. ಉತ್ತಮ ಅನುಭವ ನೀಡಿದವರ ಋಣ ತೀರಿಸಲಾಗದು. ಪ್ರೀತಿ ಮತ್ತು ಸಹಕಾರದಿಂದ ಎಲ್ಲವೂ ಸಾಧ್ಯ. ವರ್ಗಾವಣೆಯಾಗಿದ್ದೇನೆ ಅಷ್ಟೇ, ಮಾನಸಿಕವಾಗಿ ಇಲ್ಲಿಯೇ ಇದ್ದೇನೆ. ಇಲ್ಲಿಯವರ ಹೃದಯವಂತಿಕೆ ಶಾಶ್ವತವಾಗಿ ಉಳಿಯಲಿದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಾಸುದೇವಮೂರ್ತಿ, ವಿದ್ಯಾ ಇಲಾಖಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಗಿರೀಶ್, ಸಿಆರ್ ಪಿ ರಾಮಕೃಷ್ಣಯ್ಯ ಸೇರಿ ವಿವಿಧ ಶಾಲೆಯ ಶಿಕ್ಷಕರು, ನಿವೃತ್ತ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.