ನರಗುಂದ: ಈ ಸಮಾಜದಲ್ಲಿ ಮನುಷ್ಯ ದ್ವೇಷದಿಂದ ಏನು ಸಾಧಿಸಲು ಸಾಧ್ಯವಿಲ್ಲ, ಪ್ರೀತಿಯಿಂದ ಈ ಜಗವನ್ನೆ ಗೆಲ್ಲಲು ಸಾಧ್ಯವಿದೆ ಎಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು. ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ ನಡೆದ 28ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ನಾಡಿನಲ್ಲಿ ಶರಣರು ವಚನಗಳ ಪ್ರಕಾರ ಮನುಷ್ಯ ದ್ವೇಷದಿಂದ ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಮನುಷ್ಯ ಪ್ರೀತಿಯಿಂದ ಈ ಜಗತ್ತನ್ನು ಗೆಲ್ಲಲು ಸಾಧ್ಯವಿದೆ ಎಂದರು.
ಇಂದಿನ ಸಮಾಜದ ಮಹಿಳೆಯರು ಶರಣೆ ಅಕ್ಕಮಹಾದೇವಿ ರಚನೆ ಮಾಡಿದ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಈ ಸಮಾಜದ ಬದಲಾವಣೆಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮರಡಿ ಮಾರುತೇಶ್ವರ ಮಹಿಳಾ ಸಂಘದವರು ಬಸವ ಪುರಾಣಕ್ಕೆ ಬಸವ ಬುತ್ತಿ ತಂದು ಪುರಾಣಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಿದರು.ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ನಾಗಲೋಟಿಮಠ, ನಾಗನಗೌಡ ತಿಮ್ಮನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ. ನದಾಫ, ಶಿವಾನಂದ ಯಲಬಳ್ಳಿ, ಹನಮಂತ ಕಾಡಪ್ಪನವರ, ಪ್ರಾಚಾರ್ಯ ಬಿ.ಆರ್. ಸಾಲಿಮಠ ಇದ್ದರು.