ಕವಿಗೆ ಸಾಮಾಜಿಕ ಆಗುಹೋಗುಗಳ ಅರಿವಿರಬೇಕು

KannadaprabhaNewsNetwork | Published : Oct 31, 2024 2:04 AM

ಸಾರಾಂಶ

ರಾಮನಗರ: ಕಾವ್ಯ ಲೋಕ ನೋಡುವ ದೃಷ್ಟಿಕೋನವನ್ನು ಬದಲಾವಣೆ ಮಾಡುವಂತಿರಬೇಕು. ಓದುಗನೊಳಗೆ ಮತ್ತು ಸಮಾಜದ ಒಳಗೆ ಸಕಾರಾತ್ಮಕ ಪರಿವರ್ತನೆಯನ್ನು ತರುವಂತಿರಬೇಕು ಎಂದು ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಹೇಳಿದರು.

ರಾಮನಗರ: ಕಾವ್ಯ ಲೋಕ ನೋಡುವ ದೃಷ್ಟಿಕೋನವನ್ನು ಬದಲಾವಣೆ ಮಾಡುವಂತಿರಬೇಕು. ಓದುಗನೊಳಗೆ ಮತ್ತು ಸಮಾಜದ ಒಳಗೆ ಸಕಾರಾತ್ಮಕ ಪರಿವರ್ತನೆಯನ್ನು ತರುವಂತಿರಬೇಕು ಎಂದು ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಬೆಂಗಳೂರಿನ ರಂಗಮಂಡಲವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಮನಗರ ಜಿಲ್ಲಾ ಕಾವ್ಯ ಸಂಸ್ಕೃತಿ ಯಾನದಲ್ಲಿ ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ತಮ್ಮದೇ ನೆಲೆಯ ಕಾವ್ಯದ ವೈಶಿಷ್ಟ್ಯಗಳನ್ನು ವಿವರಿಸಿದರಲ್ಲದೆ ಕಾವ್ಯದ ಗುಣ, ಅವುಗಳಿಗಿರುವ ಸಾರ್ವತ್ರಿಕತೆ, ಸಾಮಾಜಿಕ ಜವಾಬ್ದಾರಿಗಳನ್ನು ವಿಸ್ತಾರವಾಗಿಯೇ ತಿಳಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಾನಪದ ಸಂಶೋಧಕ ಡಾ. ಎಂ. ಬೈರೇಗೌಡ, ಕಾವ್ಯ ಎಂಬುದು ಭಾಷೆಯ ಒಂದು ಉಪಯುಕ್ತ ಕಲೆ. ಬರೆದುದೆಲ್ಲವೂ ಕಾವ್ಯವಾಗುವುದಿಲ್ಲ. ಕಾವ್ಯ ಒಂದು ಅನಿರ್ಬಂಧಿತ ಅಮೂರ್ತ ವಾಸ್ತವ, ಕಲ್ಪನೆಗಳ ಮಾಯಾಲೋಕ ಸೃಷ್ಟಿಸುವ ಅಪರೂಪದ ಪ್ರಕಾರ ಎಂದರು.

ಆಶಯ ನುಡಿಗಳನ್ನಾಡಿದ ಉಪನ್ಯಾಸಕ ಡಾ. ಡಿ.ಆರ್. ದೇವರಾಜು ಕವಿಗಳ ಸಂಖ್ಯೆ ಬಹಳವಾಗಿದ್ದರೂ ಸಮರ್ಥ ಕವಿತೆಗಳ ಕೊರತೆಯಿದೆ. ಕಾವ್ಯ ಸೃಜನಶೀಲತೆಯ ಭಾಗವಾಗುವ ಹಾಗೇ ಒಂದು ನಿರ್ಧಿಷ್ಟವಾದ ಸೈದ್ಧಾಂತಿಕ ನಿಲುವು ಬೇಕೆಂದರು. ಅದೆಲ್ಲದರ ಜೊತೆ ಕಾವ್ಯಕ್ಕೆ ಅಧಿಕೃತತೆ ಬೇಕು ಎಂದು ವಿವರಿಸಿದರು.

ರಂಗಮಂಡಲ ಸಂಸ್ಥೆಯ ಮುಖ್ಯಸ್ಥ ಮತ್ತು ಕಾವ್ಯ ಸಂಸ್ಕೃತಿ ಯಾನದ ರೂವಾರಿ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಈ ಯಾನದ ಕವಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿದರು.

ಕಾವ್ಯ ಸಂಸ್ಕೃತಿ ಯಾನ ಜಿಲ್ಲಾ ಸಂಚಾಲಕ ಜಿ.ಶಿವಣ್ಣ ಕೊತ್ತೀಪುರ, ಪತ್ರಕರ್ತ ಜಿ.ಎನ್. ಮೋಹನ್, ಆರ್.ಜಿ. ಹಳ್ಳಿ ನಾಗರಾಜ್, ರಾಮನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ಎಚ್. ರಾಮಯ್ಯ, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್, ಎರಡನೇ ಕವಿಗೋಷ್ಠಿಯ ಅಧ್ಯಕ್ಷರಾದ ಡಾ.ಕುರುವ ಬಸರವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಇದ್ದರು.

----

29ಕೆಆರ್ ಎಂಎನ್ 2.ಜೆಪಿಜಿ

ಕಲಬುರ್ಗಿಯಿಂದ ಅಲ್ಲಿ ಸರ್ವಾಧ್ಯಕ್ಷ ಡಾ. ಕಾಶಿನಾಥ ಅಂಬಲಗಿ ಅವರಿಂದ ಹಸ್ತಾಂತರಿಸಿಕೊಂಡ ಕಾವ್ಯ ಸಂಸ್ಕೃತಿ ಯಾನದ ದೀವಟಿಗೆಯನ್ನು ರಾಮೇಗೌಡರು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದರು.

------------

Share this article