ಕನ್ನಡಪ್ರಭ ವಾರ್ತೆ ವಿಜಯಪುರ
ಒಟ್ಟು 36 ಜನ ಪ್ರಯಾಣಿಕರಿದ್ದ ಜನತಾ ಟ್ರಾವೆಲ್ಸ್ಗೆ ಸೇರಿದ ಬಸ್ ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿತ್ತು. ಈ ವೇಳೆ ಟೈರ್ ಬ್ಲಾಸ್ಟ್ ಆಗಿದೆ. ಬಸ್ಸಿನ ಎಡಬದಿಯ ಹಿಂಭಾಗದ ಟೈರ್ ಬ್ಲಾಸ್ಟ್ ಆಗಿದ್ದರಿಂದ ಚಕ್ರದ ಕಬ್ಬಿಣದ ಭಾಗ ರಸ್ತೆಗೆ ತಗುಲಿ ಘರ್ಷಣೆ ಉಂಟಾಗಿ ಕಿಡಿ ಹೊತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ಟೈರ್ಗೆ ವ್ಯಾಪಿಸಿದೆ. ಬಳಿಕ ಬಸ್ಗೂ ಬೆಂಕಿ ತಗುಲಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ.
ಪ್ರಾಣ ಕಾಪಾಡಿದ ಚಾಲಕ:ಚಾಲಕ ಫಾಲಾಕ್ಷಪ್ಪ ಅವರು ಟೈರ್ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರನ್ನು ಎಚ್ಚರಿಸಿ, ತಕ್ಷಣವೇ ಬಸ್ ಬಿಟ್ಟು ಕೆಳಗೆ ಇಳಿಯಲು ಸೂಚನೆ ನೀಡಿದ್ದಾರೆ. ಆಗ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ತಮ್ಮ ಲಗೇಜ್ ಸಮೇತ ಸುರಕ್ಷಿತವಾಗಿ ಕೆಳಗೆ ಇಳಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ಗೆ ಬೆಂಕಿ ಹೊತ್ತಿಕೊಂಡ ಆರಂಭಿಕ ಹಂತದಲ್ಲಿ ಬೆಂಕಿನಂದಿಸಲು ಬಸ್ಸಿನ ಚಾಲಕ, ಕ್ಲೀನರ್, ಪ್ರಯಾಣಿಕರು ಮತ್ತು ದಾರಿಹೋಕರು, ಸ್ಥಳೀಯರು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಬೆಂಕಿಯ ಕೆನ್ನಾಲಿಗೆ ಬಸ್ ವ್ಯಾಪಿಸಿಕೊಂಡು, ಡಿಸೇಲ್ ಟ್ಯಾಂಕ್ ಸ್ಫೋಟಿಸಿ ಕ್ಷಣಾರ್ಧದಲ್ಲೇ ಬಸ್ ಸುಟ್ಟು ಕರಕಲಾಗಿದೆ.