ಶೋಷಣೆ ಮಾಡುವ ಧರ್ಮ ಧರ್ಮವೇ ಅಲ್ಲ..!

KannadaprabhaNewsNetwork |  
Published : Apr 29, 2024, 01:37 AM IST
28ಡಿಡಬ್ಲೂಡಿ7ಜಗನ್ಮಾತೆ ಅಕ್ಕಮಹಾದೇವಿ ಆಶ್ರಮದಲ್ಲಿ ಏರ್ಪಡಿಸಿದ ಶ್ರೀಮಠದ 56 ನೇ ವಾರ್ಷಿಕೋತ್ಸವದಲ್ಲಿ ಮಾತೆ ಜ್ಞಾನೇಶ್ವರಿ ಅವರ ಪೀಠಾರೋಹಣ ನೆರವೇರಿತು.  | Kannada Prabha

ಸಾರಾಂಶ

ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮದಲ್ಲಿ ಏರ್ಪಡಿಸಿದ ಶ್ರೀಮಠದ 56ನೇ ವಾರ್ಷಿಕೋತ್ಸವ, 15ನೇ ಶರಣೋತ್ಸವ ಮತ್ತು ಬಸವಾತ್ಮಜೆ ಮ್ಯೂಸಿಯಂ ಉದ್ಘಾಟನೆ ಹಾಗೂ ಮಾತೆ ಜ್ಞಾನೇಶ್ವರಿ ಅವರ ಪೀಠಾರೋಹಣ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ಶರಣರು ಹಿಂಸೆಯನ್ನು ದೂರ ಮಾಡಲೆತ್ನಿಸಿ ಜಗತ್ತಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ದಿಕ್ಕರಿಸಿ ಸಮಾಜೋದ್ಧಾರಕ ಕಾರ್ಯ ಮಾಡುವ ಮೂಲಕ ಮಾನವೀಯ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ಧರ್ಮ ಎಂದಿಗೂ ಶೋಷಣೆ ಮಾಡುವುದಿಲ್ಲ, ಶೋಷಣೆ ಮಾಡುವ ಧರ್ಮ ಧರ್ಮವೇ ಅಲ್ಲ ಎಂದು ಬಸವ ಧರ್ಮ ಪೀಠದ ಅಧ್ಯಕ್ಷರಾದ ಡಾ.ಮಾತೆ ಗಂಗಾದೇವಿ ಹೇಳಿದರು.

ಇಲ್ಲಿಯ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮದಲ್ಲಿ ಏರ್ಪಡಿಸಿದ ಶ್ರೀಮಠದ 56ನೇ ವಾರ್ಷಿಕೋತ್ಸವ, 15ನೇ ಶರಣೋತ್ಸವ ಮತ್ತು ಬಸವಾತ್ಮಜೆ ಮ್ಯೂಸಿಯಂ ಉದ್ಘಾಟನೆ ಹಾಗೂ ಮಾತೆ ಜ್ಞಾನೇಶ್ವರಿ ಅವರ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಮನುಷ್ಯನ ಆಸೆಗಳು ಮಾತಾದಾಗ ಆತ ಭವಿಯಾಗುತ್ತಾನೆ. ಜೀವ ಕಾರುಣ್ಯ ಮಾತನಾಡುವಾಗ ಆತನೆ ಭಕ್ತನಾಗುತ್ತಾನೆ. ಅಕ್ಕನ ವಚನ ಅರ್ಥಾತ ಪರಮಸತ್ಯ ತೋರುತ್ತವೆ. ನಕಾರಾತ್ಮಕ ಚಿಂತೆಯ ಚಿತೆಯಿಂದ ದಹಿಸಿ ಹೋಗುತ್ತಿರುವ ಜೀವಕ್ಕೆ ಸಕಾರಾತ್ಮಕ ಸತ್ಯ ಚಿಂತನೆಯಿಂದ ಚೈತನ್ಯದ ಚಿಲುಮೆಯಾಗಿಸುವ ಬಸವಾದಿ ಶರಣರ ವಚನಗಳು ಸುಖ ಶಾಂತಿಯ ನೆಮ್ಮದಿಯ ಬದುಕಿನ ದಿವ್ಯ ಸೂತ್ರಗಳಾಗಿವೆ ಎಂದರು.

ವಚನ ಸಾಹಿತ್ಯದಲ್ಲಿ ಶರಣ ದರ್ಶನವಿದೆ. ಜೀವನಕ್ಕೊಂದು ದಾರಿಯಿದೆ, ಭವಭಾರಿ ತಪ್ಪಿಸುವ ಗುರಿ ಇದೆ, ಸದ್ಭಾವದ ಸೌರಭವಿದೆ. ಪರಿಪೂರ್ಣ ಜೀವನದ ದರ್ಶನವಿದೆ. ಶರಣರ ಒಂದೊಂದು ವಚನಗಳು ಭಾವ ವಿಕಾಸದತ್ತ ಹೆಜ್ಜೆಯಿಡುವಂತೆ ಪ್ರೇರೇಪಿಸುತ್ತದೆ. ಇವುಗಳನ್ನು ಅಳವಡಿಸಿಕೊಂಡ ಮಾನವ ಮೊದಲ ಇದ್ದ ಹಾಗೆ ಇರಲಾರರು ಖಂಡಿತವಾಗಿ ಪರಿವರ್ತಿತರಾಗುತ್ತಾರೆ. ಅವು ಮಾನವನ ಒಳಲೋಕ ಮತ್ತು ಹೊರ ಲೋಕವನ್ನು ಪ್ರತಿನಿಧಿಸುತ್ತವೆ. ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಸಾಹಿತ್ತಿಕ ಸೈದ್ಧಾಂತಿಕ, ಧಾರ್ಮಿಕ ಅಂಶಗಳನ್ನು ಒಳಗೊಂಡ ಬಸವ ಧರ್ಮ ಜಗತ್ತಿಗೆ ಮಾದರಿಯಾಗಿದೆ ಎಂದರು.

ಉಳವಿ ಶಿವಪುರ ಚನ್ನಬಸವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಶಿವಶರಣರ ಕಾಲಜ್ಞಾನ ವಚನಗಳ ಕುರಿತು ಮಾತನಾಡಿದರು. ಮಾತೆ ದಾನೇಶ್ವರಿ, ಮಾತೆ ಕಸ್ತೂರಿ, ಬಸವಯೋಗಿ ಸ್ವಾಮೀಜಿ, ಬಸವರತ್ನ ಮಾತೆ, ಸಿದ್ದರಾಮೇಶ್ವರ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ವಿಜಯಾಂಬಿಕೆ ಮಾತೆ ಸಮ್ಮುಖ ವಹಿಸಿದ್ದರು. ನಾಡಿನ ವಿವಿಧ ಮಠಾಧೀಶರ, ಮಾತಾಜಿಯವರ ಸಮ್ಮುಖದಲ್ಲಿ ಮಾತೆ ಜ್ಞಾನೇಶ್ವರಿ ಅವರ ಪೀಠಾರೋಹಣ ನೆರವೇರಿತು.

ಲತಾ ಮುಳ್ಳೂರ, ಶಾಂತಾದೇವಿ ಬಿರಾದಾರ, ಮಲ್ಲೇಶಪ್ಪ ಕುಸುಗಲ್, ಮಲ್ಲನಗೌಡ ಪಾಟೀಲ, ಧೀರಜಕುಮಾರ, ಶಾಂತಾ ಪಾಟೀಲ, ಗಂಗಮ್ಮ ಯಾದವಾಡ, ವಿದ್ಯಾ ಪ್ರತಾಪ, ಸುಜಾತಾ ಯರಗಟ್ಟಿ, ವೆಂಕಮ್ಮ ಮಡಿವಾಳರ, ಜಯಶ್ರೀ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!