ಗದಗ: ಜಿಲ್ಲೆಯ ಗ್ರಾಮೀಣ ಭಾಗದ ರೈತರ ಹೊಲಗಳಿಗೆ ಬೆಳಗಿನ ಸಮಯದ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತ ಹಿತಾಭಿವೃದ್ಧಿ ಸಂಘದಿಂದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಜಂತ್ಲಿ ಮಾತನಾಡಿ, ಗ್ರಾಮೀಣ ಭಾಗದ ರೈತರ ಹೊಲಗಳಿಗೆ ಸರಿಯಾಗಿ ವಿದ್ಯುತ್ ಪೂರೈಸದೆ ಇರುವುದರಿಂದ ಸಾಕಷ್ಟು ತೊಂದರೆ ಆಗಿದೆ. ರಾತ್ರಿ ಸಮಯದಲ್ಲಿ ವಿದ್ಯುತ್ ಪೂರೈಸಿದರೆ ನಮಗೆ ಹೊಲಗಳಿಗೆ ನೀರು ಬಿಡಲು ಕಾರ್ಮಿಕರು ಬರುವುದಿಲ್ಲ ಹಾಗೂ ರಾತ್ರಿಸಮಯದಲ್ಲಿ ಕಳ್ಳರು ಹಾಗೂ ವಿಷಜಂತುವಿನ ಭಯವೂ ಬಹಳ ಇರುವುದರಿಂದ ಹೆಸ್ಕಾಂನವರು ಜಿಲ್ಲೆಯ ಗ್ರಾಮೀಣ ಭಾಗದ ರೈತರಿಗೆ ಬೆಳಗ್ಗೆ ೫ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಮೊದಲಿನ ಹಾಗೆ ಸಿಂಗಲ್ ಫೇಸ್ನ ವಿದ್ಯುತ್ತನ್ನು ಒದಗಿಸಬೇಕೆಂದು ಆಗ್ರಹಿಸಿದರು.ಪ್ರಗತಿಪರ ರೈತರಾದ ಬಸಪ್ಪ ಕಲಬಂಡಿ, ರುದ್ರೇಶ ಹಿರೇಮಠ, ವಿಶ್ವನಾಥ ಪಾಟೀಲ, ವಿ.ಎಸ್. ಅಕ್ಕಿ, ರುದ್ರಪ್ಪ ಕಲಬಂಡಿ, ಬಸವರಾಜ ಮಡ್ಡಿ, ಮಂಜುನಾಥ ಕಳಸದ, ರಾಜಪ್ಪ ಅಂತರಗೊಂಡ, ಬರಮಪ್ಪ ಅಕ್ಕಮ್ಮನವರ, ಬಸವರಾಜ ಹುಬ್ಬಳ್ಳಿ, ರವಿ ಹಡಪದ, ಬಿಂಕದಕಟ್ಟಿ, ಹೊಂಬಳ, ತಗಡೂರ ಗದಗ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದರು.