ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲಅಣಬೆ ಬೇಸಾಯದಲ್ಲಿ ನಿವೃತ್ತ ಸೈನಿಕರೊಬ್ಬರು ಸೈ ಎನಿಸಿಕೊಂಡಿದ್ದಾರೆ. ನಿವೃತ್ತಿಯಲ್ಲಿ ಜನರಿಗೆ ಒಳ್ಳೆಯ ಪೋಷಕಾಂಶದ ಅಣಬೆ ತರಕಾರಿ ನೀಡುವ ಬಯಕೆ. ಜನರ ಆರೋಗ್ಯ ಕಾಪಾಡುವ ಮಹದಾಸೆ, ಪರಿಶ್ರಮದಿಂದ ಕೃಷಿಯಲ್ಲಿ ದುಡಿದರೆ ಭೂಮಿತಾಯಿ ಕೈ ಹಿಡಿಯುತ್ತಾಳೆ ಎಂಬ ಅಚಲ ವಿಶ್ವಾಸ ಅವರದು.
ತಾಲೂಕಿನ ಹಸನಾಬಾದಿ ಗ್ರಾಮದ ಸಂತೋಷ ಆರೇರ ಸೈನಿಕ ಸೇವೆ ಪೂರೈಸಿ ಈಗ ಕೃಷಿಯಲಿ, ಅದರಲ್ಲೂ ಅಣಬೆ ಕೃಷಿಯಲ್ಲಿ ತೊಡಗಿದ್ದಾರೆ. ಸೇನೆಯಿಂದ ಮರಳಿದ ಮೇಲೆ ಕೃಷಿಯನ್ನೇ ತಮ್ಮ ಕಸುಬನ್ನಾಗಿ ಆರಿಸಿಕೊಂಡು ಅಣಬೆ, ಭತ್ತ, ಕಾಕಡಾ ಮಲ್ಲಿಗೆ, ತರಕಾರಿ ಬೆಳೆಯುತ್ತಾರೆ. ಇದೆಲ್ಲದಕ್ಕೂ ಮಡದಿ ಸುಜಾತಾ, ಪದವೀಧರ ಸಹೋದರ ಸಚಿನ್ ಹೆಗಲಾಗಿದ್ದಾರೆ.ಒಳ್ಳೆಯ ಬೆಳೆ ಬೆಲೆ:
ದಾವಣಗೆರೆಯಲ್ಲಿ ಒಂದು ದಿನದ ತರಬೇತಿ ಪಡೆದು ಏನೇ ಕಷ್ಟವಾದರು ಅಣಬೆ ಬೆಳೆಯಲು ಮುಂದಾಗಿ ಮನೆಯ ಪಕ್ಕದಲ್ಲಿ ಎರಡು ಶೆಡ್ ನಿರ್ಮಿಸಿಕೊಂಡು ಮೊದಲು ಎರಡು ಕೆಜಿ ಬೀಜದೊಂದಿಗೆ ಅಣಬೆ ಬೆಳೆಗೆ ಮುಂದಾದೆ. ಪಾಲಿಥಿನ್ ಚೀಲದಲ್ಲಿ ಇದನ್ನು ಬೆಳೆಯುತ್ತೇವೆ. ಇದನ್ನು ಮಲ್ಟಿ ಲೇಯರ್ ಫಾರ್ಮಿಂಗ್ ಮತ್ತು ಹ್ಯಾಂಗಿಂಗ್ ಮೆಥೆಡ್ನಲ್ಲಿ ಬೆಳೆಯುವುದು ಹೆಚ್ಚು ಲಾಭಕರ. ಮೊದಲ ಕಟಾವು ೩೫ ದಿನಕ್ಕೆ ಬರುತ್ತದೆ. ಮುಂದೆ ಹತ್ತು ದಿನಗಳಂತೆ ಎರಡು ಮೂರು ಕುಳಿ ಬೆಳೆ ತೆಗೆಯಬಹುದು. ಆದರೆ ಇಳುವರಿ ಕಡಿಮೆಯಾಗುತ್ತದೆ. ಸದ್ಯ ನಮ್ಮ ದುಡಿಮೆಗೆ ವರ್ಷದ ೮ ತಿಂಗಳಿನಲ್ಲಿ ₹ ೮೦ ಸಾವಿರ ಲಾಭವಾಗುತ್ತಿದೆ. ಕಡಿಮೆ ಜಾಗೆ, ಕಡಿಮೆ ಶ್ರಮದಲ್ಲಿ ಒಳ್ಳೆಯ ಲಾಭದ ಬೆಳೆ ಇದು. ದೇಶದ ಸೇವೆ ಎಂದರೆ ಅದು ಸೇನೆ ಹಾಗೂ ಕೃಷಿ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಅದರಲ್ಲೂ ನನಗೆ ಅಣಬೆ ಕೃಷಿ ಅಚ್ಚುಮೆಚ್ಚು ಎನ್ನುತ್ತಾರೆ ಸಂತೋಷ ಆರೇರ.ಇದನ್ನು ದೂರದ ಪಟ್ಟಣಗಳಿಗೆ ಕಳಿಸುವ ಬದಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ಸಂತೆಯಲ್ಲಿ ಹಾಗೂ ಮುಂಡಗೋಡ ಸಾಲು ಸಂತೆಯಲ್ಲಿ ಕೂತು ಮಾರುತ್ತಾರೆ. ನ್ಯೂಟ್ರಿಶಿಯಸ್ ಆಹಾರದ ಬಗೆಗೆ ಅರಿವಿದ್ದವರು ಹುಡುಕಿಕೊಂಡು ಬಂದು ಖರೀದಿಸುತ್ತಾರೆ. ಇದರ ಮಹತ್ವ ಜನರಿಗೆ ಅರಿವಾದರೆ ಇದು ದೊಡ್ಡ ಉದ್ಯಮವೇ ಆಗಬಲ್ಲದು.
ಸಣ್ಣ ಕೃಷಿ ಉದ್ಯಮ:ತಾಲೂಕಿನ ವಾಯುಗುಣಕ್ಕೆ ಕೇವಲ ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾತ್ರ ಬೆಳೆಯಲು ಸಾಧ್ಯ. ಬೇಸಿಗೆಯ ತಾಪಕ್ಕೆ ಇದು ಬೆಳೆಯಲ್ಲ. ಇದನ್ನು ವಿಶೇಷವಾಗಿ ಮಹಿಳೆಯರು ಮನೆಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಬೆಳೆದರೂ ಮನೆಯ ಖರ್ಚನ್ನು ಇದರ ಲಾಭದಲ್ಲಿ ನಿಭಾಯಿಸಬಹುದು. ಇದು ಕಷ್ಟವಿಲ್ಲದ ಸಣ್ಣ ಕೃಷಿ ಉದ್ಯಮ.ನ್ಯೂಟ್ರಿಷಿಯನ್ ಫುಡ್ :ಈ ಅಣಬೆ ಒಂದು ತರಕಾರಿ ಆಹಾರವಾಗಿ ಬಳಸುವಲ್ಲಿ ಜಾಗೃತಿ ಮೂಡಿಸಬೇಕು. ಇದು ಶುದ್ಧ ಸಸ್ಯಹಾರಿ ಎಂಬುದನ್ನು ಮನವರಿಕೆ ಮಾಡಬೇಕು. ವಿಟ್ಯಾಮಿನ್ ಡಿ ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ. ಬಿಪಿ, ಸಕ್ಕರೆ ಕಾಯಿಲೆ, ಬೊಜ್ಜು ನಿಯಂತ್ರಣಕ್ಕೆ ಒಳ್ಳೆಯ ಆಹಾರ. ತರಕಾರಿಯಂತೆ, ಸಾಂಬಾರ ಮಾಡಿ ಇದನ್ನು ಊಟಕ್ಕೆ ಬಳಸಬಹುದು. ಇದನ್ನು ಒಣಗಿಸಿ ಕೂಡ ಮಾರಬಹುದು. ಬಿಸ್ಕಿಟ್, ಹಪ್ಪಳ, ಉಪ್ಪಿಕಾಯಿ, ಚಕ್ಕಲಿ ಮಾಡಬಹುದು.