ಸನ್ಮಾನ । ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ ಅಡಗಂಟಿ ಗ್ರಾಮದ ಪ್ರವೀಣ । ವಾಲ್ಮೀಕಿ ಭವನದಿಂದ ಬಸ್ ನಿಲ್ದಾಣದ ವರೆಗೆ ಭವ್ಯ ಮೆರವವಣಿಗೆ
ಭಾರತೀಯ ಸೇನೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತವರಿಗೆ ಆಗಮಿಸಿದ ಅಡಗಂಟಿ ಗ್ರಾಮದ ಯೋಧ ಪ್ರವೀಣ ಅವರಿಗೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡು ಶಿರಾಳಕೊಪ್ಪದಲ್ಲಿ ಸನ್ಮಾನ ನೀಡಲಾಯಿತು.
ಶಿರಾಳಕೊಪ್ಪ ಹತ್ತಿರದ ಅಡಗಂಟಿ ಗ್ರಾಮದ ಯುವಕ ಪ್ರವೀಣ ಕಳೆದ ೧೬ ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಗುರುವಾರ ಮಧ್ಯಾಹ್ನ ಆಗಮಿಸುತ್ತಿದ್ದಂತೆಯೇ ಪಟ್ಟಣದ ವಾಲ್ಮೀಕಿ ಭವನದಿಂದ ಮೆರವವಣಿಗೆಯಲ್ಲಿ ಬಸ್ ನಿಲ್ದಾಣ ವೃತ್ತಕ್ಕೆ ಕರೆತರಲಾಯಿತು.ಶಿರಾಳಕೊಪ್ಪ ಸೇರಿದಂತೆ ಸುತ್ತಮುತ್ತಲ ಹಲವಾರು ಗ್ರಾಮಗಳ ಯುವಕರು ಪಟಾಕಿ ಸಿಡಿಸಿ ಹೂವು ಎರಚಿ ತೆರೆದ ವಾಹನದಲ್ಲಿ ಡಿಜೆಯೊಂದಿಗೆ ಕರೆತಂದಾಗ ಯುವಕರ ಉತ್ಸಾಹ ಇಮ್ಮಡಿ ಆಯಿತು.
ನಂತರ ಮಾತನಾಡಿದ ನಾಗರಾಜ ಗೌಡ, ಕುಗ್ರಾಮ ಅಡಗಂಟಿಯ ಯುವಕ ಸೇನೆಯಲ್ಲಿ ಸೇವೆ ಸಲ್ಲಿಸಿ ನಮ್ಮ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಭಾರತ ಮಾತೆಯ ಸೇವೆ ಸಲ್ಲಿಸಲು ಸೇನೆಗೆ ಸೇರ್ಪಡೆ ಆಗಿ ಎಂದರೆ ನಮ್ಮ ಮನೆಗಳಲ್ಲಿ ಮಕ್ಕಳನ್ನು ಕಳಿಸಲು ಹಿಂದೆ ಮುಂದೆ ನೋಡುತ್ತಾರೆ. ಸೈನ್ಯಕ್ಕೆ ಸೇರಿಸಿ ಅಂದರೆ ಮಕ್ಕದ ಮನೆಯವರ ಕಡೆ ಬೊಟ್ಟು ತೋರಿಸುವ ನಾವು ಯುವಕರನ್ನು ಸೇನೆಗೆ ಸೇರಲು ಪ್ರೋತ್ಸಾಹಿಸಿ ದೇಶ ಸೇವೆ ಮಾಡಲು ಕಳಿಸಿಕೊಡುವ ಕಾರ್ಯವನ್ನು ಮಾಡಬೇಕು ಎಂದರು.
ಪುರಸಭೆ ಸದಸ್ಯರು, ಪುರಸಭೆ ಮಾಜಿ ಅಧ್ಯಕ್ಷ ಟಿ.ರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಚೆನ್ನವೀರ ಶೆಟ್ಟಿ, ಮಾಜಿ ಪುರಸಭೆ ಸದಸ್ಯ ತಡಗಣಿ ಮಂಜಣ್ಣ ಪ್ರಮುಖರಾದ ಸಂತೋಷ, ರಾಘವೇಂದ್ರ, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಯುವರಾಜ್, ಚಂದ್ರಶೇಖರ ಮಂಚಾಲಿ ಪಟ್ಟಣದ ನೂರಾರು ನಾಗರಿಕರು, ಗ್ರಾಮಸ್ಥರು ಹಾಜರಿದ್ದರು.