ಚನ್ನಪಟ್ಟಣ: ಮೂರು ಬಾರಿ ಕಾಂಗ್ರೆಸ್ ತೊರೆದು ಪಕ್ಷಕ್ಕೆ ಮರಳಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತೆ ಮಾತೃಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್ನ ಅಚ್ಚರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
3ನೇ ಬಾರಿ ಕೈಹಿಡಿದ ಸೈನಿಕ:
೧೯೯೯ರಲ್ಲಿ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಯೋಗೇಶ್ವರ್ ಆ ವರ್ಷ ನಡೆದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ನಿರಾಕರಿಸಿ ಮಾಜಿ ಶಾಸಕ ಸಾದತ್ ಅಲಿಖಾನ್ ಅವರಿಗೆ ಮಣೆ ಹಾಕಿತ್ತು. ಕಾಂಗ್ರೆಸ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಯೋಗೇಶ್ವರ್ ನಂತರ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.ಆನಂತರ ನಡೆದ ೨೦೦೪ ಮತ್ತು ೨೦೦೮ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಶಾಸಕರು ಎನ್ನಿಸಿದ್ದರು. ೨೦೦೯ರಲ್ಲಿ ನಡೆದ ರಾಜ್ಯರಾಜಕೀಯ ವಿದ್ಯಾಮಾನದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡರು. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋತರು. ಅದೇ ವರ್ಷ ತಮ್ಮಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಜೆಡಿಎಸ್ನ ಎಂ.ಸಿ.ಅಶ್ವತ್ಥ್ ಎದುರು ಸೋತರು. ೨೦೧೧ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾದ ಎಂ.ಸಿ.ಅಶ್ವತ್ಥ್ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ನ ಸಿಂ.ಲಿಂ.ನಾಗರಾಜು ಅವರ ವಿರುದ್ಧ ಗೆದ್ದು ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾದರು.
೨೦೧೩ರ ವಿಧಾನಸಭೆ ಚುನಾವಣೆ ವೇಳೆಗೆ ಅವರು ಕಾಂಗ್ರೆಸ್ಗೆ ಮರಳಿದರಾದರೂ, ಅವರಿಗೆ ಕಡೆ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು. ಆಗ ದೆಹಲಿಗೆ ತೆರಳಿದ ಅವರು ಸಮಾಜವಾದಿ ಪಕ್ಷದ ಸೈಕಲ್ ಏರಿ ಬಂದು ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆ ನಂತರ ಅವರು ಕಾಂಗ್ರೆಸ್ ಸಹಸದಸ್ಯರಾಗಿ ಗುರುತಿಸಿಕೊಂಡರು. ಇನ್ನು ೨೦೧೮ ಹಾಗೂ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕುಮಾರಸ್ವಾಮಿ ವಿರುದ್ಧ ಪರಾಜಿತರಾದರು.
ಇದೀಗ ಚನ್ನಪಟ್ಟಣ ಉಪಚುನಾವಣೆಯ ವೇಳೆಗೆ 3ನೇ ಬಾರಿಗೆ ಸೈನಿಕ ಕೈಹಿಡಿದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್ಗೆ ನೇಮಕಗೊಂಡಿದ್ದ ಅವರು, ತಮ್ಮ ಸದಸ್ಯತ್ವದ ಅವಧಿ ಇನ್ನು ಒಂದುವರೆ ವರ್ಷ ಇರುವ ಮಧ್ಯೆಯೇ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
2 ಬಾರಿ ಕೈಕೊಟ್ಟ ಕಾಂಗ್ರೆಸ್!
ಬಾಕ್ಸ್...............
ಇನ್ನು ೨೦೨೩ರಲ್ಲಿ ನಡೆದಿದ್ದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ವೇಳೆ ಸಹ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವಂತೆ ಯೋಗೇಶ್ವರ್ಗೆ ಆಫರ್ ನೀಡಲಾಗಿತ್ತು. ಆದರೆ, ಈ ಅವಕಾಶವನ್ನು ನಿರಾಕರಿಸಿದ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದ ಅವರು ಪ್ರಚಾರ ನಡೆಸುವ ವೇಳೆ ಪ್ರಸ್ತುತ ಶಾಸಕ, ಆಗಿನ ಮದ್ದೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉದಯ್ ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಯೋಗೇಶ್ವರ್ಗೆ ಆಫರ್ ಹೊತ್ತು ತಂದಿದ್ದರು. ಆದರೆ, ಇದನ್ನು ತಿರಸ್ಕರಿಸಿದ್ದ ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಗೊಂದಲಕ್ಕೆ ತೆರೆ!
ಕಳೆದ ಮೂರು ದಿನಗಳಿಂದ ಕ್ಷೇತ್ರದ ಎನ್ಡಿಎ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುರಿತು ಸಾಕಷ್ಟು ಗೊಂದಲಗಳು ನಡೆದಿದ್ದವು. ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಯೋಗೇಶ್ವರ್ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿತ್ತು. ಜೆಡಿಎಸ್ನಿಂದ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ನೀಡಿದ್ದ ಆಫರ್ ಅನ್ನು ನಿರಾಕರಿಸಿದ್ದ ಸಿಪಿವೈ, ಬಿಜೆಪಿ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದರು. ಇದೇ ವೇಳೆ ಅವರು ಪಕ್ಷೇತರರಾಗಿ, ಎಸ್.ಪಿ., ಬಿಎಸ್ಪಿ ಸೇರಿದಂತೆ ಬೇರೆ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂದು ಸಾಕಷ್ಟು ವದಂತಿಗಳು ಹರಡಿದ್ದವು. ಕೊನೆಗೆ ಸಿಪಿವೈ ಕಾಂಗ್ರೆಸ್ಗೆ ಸೇರಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಪೊಟೋ೨೩ಸಿಪಿಟಿ೧,೨:
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.