ಪ್ರಪಂಚದಲ್ಲಿ ಯುದ್ಧ ತಿಳಿಗೊಂಡು ಶಾಂತಿ ನೆಲೆಸಲು ವಿಶೇಷ ಪ್ರಾರ್ಥನೆ: ರೆವರೆಂಡ್ ಪ್ರವೀಣ್

KannadaprabhaNewsNetwork |  
Published : Mar 30, 2026, 12:15 AM IST
 ಸಿಕೆಬಿ-1ಕರ್ಜೂರ ಗರಿಗಳ ಹಬ್ಬದ ಅಂಗವಾಗಿ ನಗರದ ಸಿಎಸ್‌ಐ ಕ್ರೈಸ್ಟ್ ಚರ್ಚಿನ ಮಕ್ಕಳು ಏಸು ಸ್ವಾಮಿ ಕತ್ತೆಯನ್ನು ಏರಿಬರುವ ಮೆರವಣಿಗೆಯನ್ನು ನಡೆಸಿದರು         ಸಿಕೆಬಿ-2 ಕರ್ಜೂರ ಗರಿಗಳ ಹಬ್ಬದ ಅಂಗವಾಗಿ ನಗರದ ಸಿಎಸ್‌ಐ ಕ್ರೈಸ್ಟ್ ಚರ್ಚಿನ ಮಕ್ಕಳು ಏಸು ಕ್ರಿಸ್ತನು ಶಿಲುಬೆಯನ್ನು ಹೊತ್ತು ಸಾಗುವ ಮೆರವಣಿಗೆಯನ್ನು ನಡೆಸಿದರು | Kannada Prabha

ಸಾರಾಂಶ

ಇದೇ ಸಂದರ್ಭದಲ್ಲಿ ಚರ್ಚಿನ ಮಕ್ಕಳು ಏಸು ಸ್ವಾಮಿ ಕತ್ತೆಯನ್ನು ಏರಿಬರುವ, ಏಸು ಕ್ರಿಸ್ತನು ಶಿಲುಬೆಯನ್ನು ಹೊತ್ತು ಸಾಗುವುದು, ಅವರನ್ನು ಹಿಂಬಾಲಿಸುವ ಏಸುವಿನ ಅನುಯಾಯಿ ಪಾತ್ರಗಳ ವೇಷಭೂಷಣಗಳನ್ನು ತೊಟ್ಟು ಸಾಗಿದ ದೃಶ್ಯ ಜನರ ಮನಸೂರೆಗೊಂಡಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಪಂಚದಲ್ಲಿ ತಲೆದೂರಿರುವ ಯುದ್ಧದ ವಾತಾವರಣವು ತಿಳಿಗೊಂಡು ಶಾಂತಿ ನೆಲೆಸಲಿ ಎಂಬುದಾಗಿ ಕರ್ಜೂರ ಗರಿಗಳ ಹಬ್ಬದಲ್ಲಿ ಪ್ರಾರ್ಥಿಸಲಾಯಿತು ಎಂದು ಸಿಎಸ್‌ಐ ಕ್ರೈಸ್ಟ್ ಚರ್ಚಿನ ಸಭಾಪಾಲಕ ರೆವರೆಂಡ್ ಪ್ರವೀಣ್ ತಿಳಿಸಿದರು.

ಸಿಎಸ್‌ಐ ಕ್ರೈಸ್ಟ್ ಚರ್ಚಿನ ವತಿಯಿಂದ ಭಾನುವಾರ ಆಯೋಜಿಸಿದ್ದ ಕರ್ಜೂರ ಗರಿಗಳ ಹಬ್ಬ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಶಾಂತಿಧೂತ ಏಸುಕ್ರಿಸ್ತನು ಯುದ್ಧದ ಸಂಕೇತವಾದ ಕುದುರೆಯನ್ನು ಏರದೆ ಶಾಂತಿಗೆ ಹೆಸರಾದ ಕತ್ತೆಯ ಮರಿಯನ್ನು ಏರಿ ಕುಳಿತು ಜೆರೋಸಲೇಮನ್ನು ಶಾಂತಿ ಧೂತನಾಗಿ ಪ್ರವೇಶ ಮಾಡಿದ್ದನು ಎಂದರು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಡೆದಿರುವ ಈ ಘಟನೆಯನ್ನು ಇಂದಿಗೂ ಸಹ ಪ್ರಪಂಚದ ಎಲ್ಲಾ ದೇಶಗಳಲ್ಲೂ ಕರ್ಜೂರದ ಗರಿಗಳ ಹಬ್ಬ ಅಥವಾ ಫಾಮ್ ಸಂಡೆ ಎಂದು ಆಚರಿಸುತ್ತಾ ಬರಲಾಗುತ್ತಿದೆ, ಈ ಬಾರಿಯ ಪ್ರಾರ್ಥನೆಗಳಲ್ಲಿ ಪ್ರಪಂಚದಲ್ಲಿ ತಲೆದೂರಿರುವ ಅಶಾಂತಿ ತೊಲಗಿ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದು ಸಭಾಪಾಲಕರಾದ ಘನ ಪ್ರವೀಣ್ ತಿಳಿಸಿದರು.

ಕರ್ಜೂರ ಗರಿಗಳ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಭಾನುವಾರ ಆರಂಭಗೊಂಡಿದೆ. ಏಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರೋಸಲೇಮ್ ಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು ‘ಆಲಿವ್’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರ ಮಾಡಿ ಕೊಂಡಿದ್ದರೆಂದು ಬೈಬಲ್ ಉಲ್ಲೇಖಿಸಿದೆ. ಇದರ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಭಾನುವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಭಾನುವಾರ ಬಲಿ ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ಆಶೀರ್ವಚಿಸಿ ಬಳಿಕ ಅವುಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ಕ್ರೈಸ್ತ ಬಾಂಧವರು, ಏಸು ಕ್ರಿಸ್ತರಿಗೆ ಜೈಕಾರ ಕೂಗುತ್ತಾ ಚರ್ಚ್‌ನ ಒಳಗೆ ಪ್ರವೇಶಿಸಿದರು. ನಂತರ ಏಸು ಕ್ರಿಸ್ತರನ್ನು ಶಿಲುಬೆಗೇರಿಸುವ ಶಿಕ್ಷೆ ವಿಧಿಸುವಲ್ಲಿಂದ ಹಿಡಿದು ಅವರು ಶಿಲುಬೆಗೇರಿ ಅಲ್ಲಿ ಮರಣವನ್ನಪ್ಪಿ, ದೇಹವನ್ನು ಸಮಾಧಿ ಮಾಡುವಲ್ಲಿ ತನಕದ ಕಥಾನಕವನ್ನು ಬೈಬಲ್‌ನಿಂದ ವಾಚಿಸಲಾಯಿತು. ಬಳಿಕ ಧರ್ಮಗುರುಗಳಿಂದ ಪ್ರವಚನ ನಡೆಯಿತು.

ಎಂದಿನಂತೆ ಪ್ರಾರ್ಥನೆಯ ನಂತರ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಸಿಎಸ್‌ಐ ಕ್ರೈಸ್ಟ್ ಚರ್ಚಿನ ಸಾವಿರಾರು ಸದಸ್ಯರು ಹೋಸನ್ನ ಹೋಸನ್ನ ಎಂದು ಕೂಗುತ್ತಾ, ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಇದೇ ಸಂದರ್ಭದಲ್ಲಿ ಚರ್ಚಿನ ಮಕ್ಕಳು ಏಸು ಸ್ವಾಮಿ ಕತ್ತೆಯನ್ನು ಏರಿಬರುವ, ಏಸು ಕ್ರಿಸ್ತನು ಶಿಲುಬೆಯನ್ನು ಹೊತ್ತು ಸಾಗುವುದು, ಅವರನ್ನು ಹಿಂಬಾಲಿಸುವ ಏಸುವಿನ ಅನುಯಾಯಿ ಪಾತ್ರಗಳ ವೇಷಭೂಷಣಗಳನ್ನು ತೊಟ್ಟು ಸಾಗಿದ ದೃಶ್ಯ ಜನರ ಮನಸೂರೆಗೊಂಡಿತು.

ಮೆರವಣಿಗೆಯಲ್ಲಿ ಚರ್ಚಿನ ಕಾರ್ಯದರ್ಶಿ ವಿ.ದಾಸ್, ಖಜಾಂಚಿ ಹೆನ್ರಿ ಪ್ರಸನ್ನ ಕುಮಾರ್, ಸಭಾಪಾಲನ ಸಮಿತಿ ಸದಸ್ಯ ಜೆ.ಕಿರಣ್‌ ವಿಕ್ಟರ್, ಸ್ವಾಮಿ ದಾಸ್, ಆದರ್ಶ್, ರಾಜಶೇಖರ್, ಸಂದೀಪ್, ಪಾಲ್, ಶಶಿಕಲಾ ಸೈಮನ್, ಸಭೆಯ ಹಿರಿಯರಾದ ಎಸ್.ವಿನ್‌ಸ್ಟನ್ ಕೆನಡಿ, ದೇವದಾಸ್, ಎಎಸ್‌ಐ ಮೋಹನ್, ಫ್ಲಾರೆನ್ಸ್ ನೈಟಿಂಗೇಲ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒತ್ತಡರಹಿತ ಜೀವನಕ್ಕಾಗಿ ದೈಹಿಕ ಚಟುವಟಿಕೆ ಅಗತ್ಯ: ಡಾ.ಮೇಘನಾ
ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಮಹಿಳೆಯರ ಸಾಧನೆ ಉತ್ತಮ: ಶಾಸಕ ಜಿ.ಎಚ್. ಶ್ರೀನಿವಾಸ್