ಕನ್ನಡಪ್ರಭ ವಾರ್ತೆ ಮೂಡಲಗಿ
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಪ್ರಧಾನಿಯ ಸಂಕಲ್ಪ ಈಡೇರಲು ಸಹಕಾರ ರಂಗ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದರ ಜೊತೆಗೆ ಬಡವರ, ದೀನದಲಿತರ ಆರ್ಥಿಕ ಏಳ್ಗೆಗೆ ಶ್ರಮಿಸಬೇಕಿದೆ. ಸಶಕ್ತ ಭಾರತ ನಿರ್ಮಾಣಕ್ಕೆ ಸಹಕಾರ ಸಂಸ್ಥೆಗಳು ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಹಕಾರಿ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಹೇಳಿದರು.ಶನಿವಾರ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ 22ನೇ ಸರ್ವ ಸಾಧಾರಣ ಸಭೆಗೆ ಚಾಲನೆ ನೀಡಿ ಮಾತನಾಡಿ, ಸಶಕ್ತ ಭಾರತದ ನಿರ್ಮಾಣದ ಸಂಕಲ್ಪದೆಡೆಗೆ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಸ್ಥೆ ತನ್ನ ಅಳಿಲು ಸೇವೆ ಸಲ್ಲಿಸಲು ಕಟಿಬದ್ಧವಾಗಿದೆ ಎಂದರು.
ಸಹಕಾರಿ ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದಿದ್ದು, ಸಂಘದಲ್ಲಿ 12254 ಸದಸ್ಯರಿದ್ದು, ₹20.12 ಲಕ್ಷ ಷೇರು ಬಂಡವಾಳ ಹಾಗೂ ₹6.96 ಕೋಟಿ ಕಾಯ್ದಿಟ್ಟ ನಿಧಿ ಹೊಂದಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ₹71.10 ಕೋಟಿ ಠೇವು ಸಂಗ್ರವಾಗಿದೆ.ಸಹಕಾರಿಯಿಂದ ಇದುವರೆಗೆ ಮಹಿಳೆಯರಿಗೆ ಕಿರುಸಾಲ, ಗ್ರಾಹಕರಿಗೆ ಪಿಗ್ಮಿಸಾಲ ಸೇರಿದಂತೆ ₹66.71 ಕೋಟಿ ಸಾಲ ವಿತರಿಸಲಾಗಿದೆ. ₹8.89 ಕೋಟಿ ಬ್ಯಾಂಕ ಮತ್ತು ಇನ್ನಿತರ ಸಂಘಗಳಲ್ಲಿ ಗುಂತಾವಣೆ ಮಾಡಲಾಗಿದ್ದು, ₹78.26 ಕೋಟಿ ದುಡಿಯುವ ಬಂಡವಾಳ ಹೊಂದಿ ₹318 ಕೋಟಿ ವಹಿವಾಟು ಹೊಂದಿದೆ. ಸದಸ್ಯರಿಗೆ ಶೇ.20ರಷ್ಟು ಲಾಭಾಂಶ ವಿತರಿಸಲಾಗಿದೆ ಎಂದರು.
ಸಹಕಾರಿಯ ಉಪಾಧ್ಯಕ್ಷ ಶ್ರೀಶೈಲ ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಪ್ಪ ಗೊಸಬಾಳ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಸೋಮಲಿಂಗ ಹಡಿಗನಾಳ, ಸಲಹಾ ಸಮಿತಿ ಅಧ್ಯಕ್ಷರಾದ ಈರಪ್ಪ ದೇಯನ್ನವರ, ರಾಜು ಕತ್ತಿ, ಮಾಯಪ್ಪ ಬಾನಸಿ, ನಿಂಗಪ್ಪ ನೀಲನ್ನವರ, ಶ್ರೀಕಾಂತ ಕರೆಪ್ಪಗೋಳ, ಗಣೇಶ ಗಾಣಿಗ, ರಾಮಚಂದ್ರ ಕೊಡ್ಲಿ, ಹಿರಿಯ ವ್ಯವಸ್ಥಾಪಕ ಹಣಮಂತ ಕಲಕುಟ್ರಿ ಸೇರಿದಂತೆ ಅನೇಕ ಸಹಕಾರಿಗಳು ಭಾಗವಹಿಸಿದ್ದರು. ಹಿರಿಯ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಸ್ವಾಗತಿಸಿ, ನಿರೂಪಿಸಿದರು, ಸುರೇಶ ಮಠದ ವಾರ್ಷಿಕ ವರದಿ ಓದಿದರು. ಶಿವಾನಂದ ಕುಂಬಾರ ವಂದಿಸಿದರು.ಸಹಕಾರಿಯ ಗ್ರಾಹಕರಿಗೆ ಮಹಾಲಕ್ಷ್ಮೀ ಕಿರುಸಾಲ ಯೋಜನೆ ಸೇರಿ ಅನೇಕ ಸೌಲಭ್ಯ ನೀಡಲಾಗಿದೆ. ಕಲ್ಲೋಳಿಯಲ್ಲಿ ನಿರ್ಮಿಸುತ್ತಿರುವ ಪ್ರಧಾನ ಕಚೇರಿಯ ಕಟ್ಟಡ ಮುಕ್ತಾಯ ಹಂತಕ್ಕೆ ತಲುಪಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಯಾದವಾಡ ಗ್ರಾಮದಲ್ಲಿ ಸಹಕಾರಿಯ ನೂತನ 3ನೇ ಶಾಖೆ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
-ಸತೀಶ ಕಡಾಡಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ