ವಿಜಯಪುರ: ಮನೆಯೇ ಮೊದಲ ಪಾಠಶಾಲೆ. ತಾಯಂದಿರು ಮಕ್ಕಳಿಗೆ ಜ್ಞಾನದ ಹಸಿವನ್ನು ಸೃಜಿಸಿ ನೀಗಿಸುವ ಗುರುವಾಗಬೇಕು. ಪ್ರೀತಿಯ ಜೊತೆಗೆ ಶಿಸ್ತು, ಜ್ಞಾನದ ಜೊತೆಗೆ ಸಂಸ್ಕಾರವನ್ನು ಕಲಿಸಿದಾಗ ಮಾತ್ರ ಸದೃಢ ಸಮಾಜ ಸೃಷ್ಟಿ ಸಾಧ್ಯ ಎಂದು ಅಯೋಧ್ಯಾನಗರದ ಶಿವಾಚಾರ್ಯ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ ತಿಳಿಸಿದರು.
ತಾಯಿಯು ಮನೆಯಲ್ಲಿ ನೀಡುವ ಸಂಸ್ಕಾರವೇ ಮಗುವಿನ ಜೀವನದ ದಾರಿದೀಪ. ನಾಡು-ನುಡಿ, ಆಚರಣೆಗಳನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ಮಕ್ಕಳಿಗೆ ಸಂಸ್ಕಾರದ ಸಿಂಚನವಾಗಬೇಕಾಗಿರುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದೆ ಎಂದರು.
ಬೆಂಗಳೂರಿನ ಶ್ರೀ ನಗರೇಶ್ವರ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೆ.ಎಸ್.ನಟರಾಜು ಮಾತನಾಡಿ, ಶಿವಶರಣರ ವಚನಗಳಲ್ಲಿ ಮೌಲ್ಯಗಳು ಅಡಕವಾಗಿವೆ. ಶಿವಕುಮಾರಸ್ವಾಮೀಜಿ ಸಮಾಜವನ್ನು ಮೇಲೆತ್ತಲು ಶತಮಾನಗಳ ಕಾಲ ಶ್ರಮಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಶೈಕ್ಷಣಿಕ ಕ್ರಾಂತಿಗೆ ಶ್ರಮಿಸಿದ್ದಾರೆ ಎಂದರು.ಶಿಕ್ಷಣತಜ್ಞ, ಶರಣಚಿಂತಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಯುವಪೀಳಿಗೆಯಲ್ಲಿ ಮೌಲ್ಯಗಳ ಅಧಃಪತನವಾಗುತ್ತಿದ್ದು ಶ್ಲೋಕ, ಪುರಾಣ ಕತೆಗಳ ಮೂಲಕ ಮೌಲ್ಯಗಳನ್ನು ಬೆಳೆಸುವ ಕಾರ್ಯವಾಗಬೇಕು. ಕಾನ್ವೆಂಟ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಅಕ್ಷರದ ಮೂಲಕವಲ್ಲದೇ ಆಧುನಿಕ ಮಾಧ್ಯಮಗಳ ಮೂಲಕವೂ ಸಂಸ್ಕಾರ, ಸಂಸ್ಕೃತಿ ಪ್ರಸಾರ ಮಾಡಬೇಕಾದ ಅನಿವಾರ್ಯತೆಯಿದೆ. ಶ್ಲೋಕಗುಚ್ಚ ಕೃತಿಯು ಕನ್ನಡ ಮತ್ತು ದ್ವಿಭಾಷಾ ಮಾಧ್ಯಮದಲ್ಲಿ ೧೦೮ ಶ್ಲೋಕಗಳು, ಅವುಗಳ ಒಳಾರ್ಥ, ಹಿನ್ನೆಲೆ, ಕತೆಗಳನ್ನು ಒಳಗೊಂಡಿದ್ದು ಯೂಟ್ಯೂಬ್ ಲಿಂಕ್ಗಳ ಕೋಡ್ಗಳನ್ನೂ ಒಳಗೊಂಡಿರುವುದರಿಂದ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಉತ್ತಮ ಕಾಣಿಕೆಯಾಗಿದೆ ಎಂದರು.
ಎಎಸ್ವಿ ನಗರ್ತ ವಿದ್ಯಾವರ್ಧಕ ಸಂಘದ ಖಜಾಂಚಿ ಎಂ.ಶಂಕರ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು, ಶ್ರೀ ವೀರಭದ್ರಸ್ವಾಮಿಗೋಷ್ಠಿ ಅಕ್ಕನಬಳಗ ಸೇವಾಟ್ರಸ್ಟ್ ಅಧ್ಯಕ್ಷ ವಿ.ಅನಿಲ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮ.ಸುರೇಶ್ಬಾಬು, ಖಜಾಂಚಿ ಎಂ.ಶಿವಪ್ರಸಾದ್, ಉಪಾಧ್ಯಕ್ಷೆ ಅಂಬಾಭವಾನಿ, ಶ್ರೀ ಸಾಕ್ಷಿಮುರುಘಾ ಸೇವಾ ಟ್ರಸ್ಟ್ನ ಅಧ್ಯಕ್ಷೆ ವಸುಂಧರಮ್ಮ, ಮಂತಣಿ ಮಾಸಪತ್ರಿಕೆ ಸಂಪಾದಕಿ ಸುನಂದ ರು.ಬಸಪ್ಪ, ವಿಮಲಾಂಬ, ಜೀವಿತಾ ಸುಜ್ಞಾನ್, ಅಕ್ಕನಬಳಗದ ಸದಸ್ಯರು ಪಾಲ್ಗೊಂಡಿದ್ದರು.
ವಿಜಯಪುರದಲ್ಲಿ ಪುಸ್ತಕ ಬಿಡುಗಡೆ, ಗುರುನಮನ ಕಾರ್ಯಕ್ರಮದಲ್ಲಿ ಎಎಸ್ವಿಎನ್ವಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್, ಖಜಾಂಚಿ ಶಂಕರ್, ಕೆ.ಎಸ್.ನಟರಾಜು, ಎಚ್.ಎಸ್.ರುದ್ರೇಶಮೂರ್ತಿ, ವಿ.ಅನಿಲ್ಕುಮಾರ್, ಮ.ಸುರೇಶ್ಬಾಬು, ವಸುಂದರಮ್ಮ, ಸುನಂದಾ, ಮೀನಾಕುಮಾರಿ ಮತ್ತಿತರರಿದ್ದರು.