ವೃತ್ತಿ ಪಾವಿತ್ರ್ಯ ಕಾಯ್ದುಕೊಳ್ಳುವಲ್ಲಿ ಶಿಕ್ಷಕ ಮೊದಲಿಗನಾಗಬೇಕು-ಗುಂಡಪಲ್ಲಿ

KannadaprabhaNewsNetwork | Published : Nov 20, 2024 12:31 AM

ಸಾರಾಂಶ

ಗುರುವೇ ದೇವರೆಂಬ ನಂಬಿಗೆ ಮಾತ್ರವಲ್ಲ ಅದು ಸತ್ಯವಾಗುವಂತೆ ಶಿಕ್ಷಕ ವೃತ್ತಿಯ ಸಾರ್ಥಕತೆ ಸಾಧ್ಯವಾದರೆ ಅದುವೇ ಮಕ್ಕಳ ಭವಿಷ್ಯಕ್ಕೆ ಸುಂದರ ರೂಪ ನೀಡಲು ಸಾಧ್ಯ ಎಂದು ಬಿಆರ್‌ಸಿ ಸಂಯೋಜನಾಧಿಕಾರಿ ಎಂ.ಎಸ್. ಗುಂಡಪಲ್ಲಿ ತಿಳಿಸಿದರು.

ಹಾನಗಲ್ಲ: ಗುರುವೇ ದೇವರೆಂಬ ನಂಬಿಗೆ ಮಾತ್ರವಲ್ಲ ಅದು ಸತ್ಯವಾಗುವಂತೆ ಶಿಕ್ಷಕ ವೃತ್ತಿಯ ಸಾರ್ಥಕತೆ ಸಾಧ್ಯವಾದರೆ ಅದುವೇ ಮಕ್ಕಳ ಭವಿಷ್ಯಕ್ಕೆ ಸುಂದರ ರೂಪ ನೀಡಲು ಸಾಧ್ಯ ಎಂದು ಬಿಆರ್‌ಸಿ ಸಂಯೋಜನಾಧಿಕಾರಿ ಎಂ.ಎಸ್. ಗುಂಡಪಲ್ಲಿ ತಿಳಿಸಿದರು.ಮಂಗಳವಾರ ಹಾನಗಲ್ಲಿನ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಯೋಜಿಸಿದ ಹಾನಗಲ್ಲ ತಾಲೂಕು ಮಟ್ಟದ ನಲಿ-ಕಲಿ ಶಿಕ್ಷಕರಿಗೆ ೫ ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿ ಪಾವಿತ್ರ್ಯ ಕಾಯ್ದುಕೊಳ್ಳುವಲ್ಲಿ ಶಿಕ್ಷಕ ಮೊದಲಿಗನಾಗಬೇಕಾಗಿದೆ. ಶೈಕ್ಷಣಿಕ ಮೊದಲ ಹಂತ ನಲಿ ಕಲಿ ಪಾಠಗಳ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಶಿಕ್ಷಕರು ಪಾಠಗಳಲ್ಲಿ ತೊಡಗಬೇಕಾಗಿದೆ. ಇದು ಬುನಾದಿ ಶಿಕ್ಷಣ. ಅದನ್ನು ಸಾರ್ಥಕಗೊಳಿಸುವುದೇ ಶಿಕ್ಷಕನ ಸವಾಲಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಮಕ್ಕಳಿಗೆ ಅಕ್ಷರದ ಜೊತೆಗೆ ಜೀವನ ಶಿಕ್ಷಣ ನೀಡಬೇಕಾಗಿದೆ. ಗುರುವಿನ ಹಿರಿಮೆ ಅರಿತರೆ ಸಮಾಜ ಉತ್ತಮ ಸಮಾಜವಾಗಬಲ್ಲದು. ಮೌಲ್ಯಯುತ ಶಿಕ್ಷಣದ ಮೂಲಕ ಎಲ್ಲವನ್ನೂ ನೀಡಬಲ್ಲ ಶಿಕ್ಷಕನಿಗೆ ಸಮಾಜ ತಿದ್ದುವ ಪ್ರಮುಖ ಜವಾಬ್ದಾರಿಯೂ ಇದೆ. ಸಾಮರಸ್ಯದ ಬದುಕು ಈಗಲೇ ಕಲಿಸಿದರೆ ನಾಳೆಯ ಪ್ರಜೆಗಳು ಉತ್ತಮ ಪ್ರಜೆಗಳಾಗಬಲ್ಲದು. ಗುರುಕುಲ ಶಿಕ್ಷಣ ಮತ್ತೆ ಬರಬೇಕಾಗಿದೆ. ಕೇವಲ ಅಕ್ಷರ ಜ್ಞಾನಕ್ಕಾಗಿ ಶಿಕ್ಷಣವಾಗಬಾರದು. ಕೇವಲ ಜ್ಞಾನದ ಬುಟ್ಟಿ ತುಂಬಿದರೆ ಸಾಲದು. ಸೌಖ್ಯ ಬದುಕಿನ ಸಾರ್ಥಕ ಶಿಕ್ಷಣವನ್ನು ನೀಡಬೇಕು ಎಂದರು.ಆಶಯ ಮಾತುಗಳನ್ನಾಡಿದ ಬಿಆರ್‌ಸಿ ಸಂಪನ್ಮೂಲ ವ್ಯಕ್ತಿ ಶಂಭುಲಿಂಗಯ್ಯ ಹಿರೇಮಠ, ಕಲಿಕೆಗೆ ಆಗಾಗ ಹೊಸ ತಿರುವು ತಿಳುವಳಿಕೆ ನೀಡುವ ಅಗತ್ಯವಿದೆ. ಹೊಸದನ್ನು ಕಲಿಯಲು ಇಂತಹ ತರಬೇತಿಗಳು ಸಹಕಾರಿ. ಎಲ್ಲ ಶಿಕ್ಷಕರು ಒಂದೆಡೆ ಸೇರಿ ಹೊಸದನ್ನು ಚಿಂತನೆಗೆ ಒಳಪಡಿಸಿದರೆ ಇನ್ನಷ್ಟು ಉತ್ತಮ ಕಲಿಕಾ ಸಾಧನ, ಯೋಚನೆಗಳು ನಮ್ಮಲ್ಲಿ ಮೂಡಲು ಸಾಧ್ಯ ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಸ್. ಗೌರಣ್ಣನವರ, ಎಸ್.ಎಸ್. ಕಾಯಕದ, ಮುರುಗೇಶ ಬಾಳೂರ, ಗೌರಮ್ಮ ಪೂಜಾರ, ಪುಷ್ಪಾವತಿ, ಲಕ್ಷ್ಮೀ ಓಂಕಾರಿ, ಜ್ಯೋತಿ ಸುರಳೇಶ್ವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article