ಬೀದಿನಾಯಿ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಕ್ರಮ

KannadaprabhaNewsNetwork | Published : Jan 6, 2025 1:01 AM

ಪಟ್ಟಣದಲ್ಲಿನ ಒಟ್ಟು 700ಕ್ಕೂ ಹೆಚ್ಚು ಬೀದಿನಾಯಿಗಳ ನಿಯಂತ್ರಣಕ್ಕೆ ನಾಯಿಗಳ ಸಂತಾನ ನಿಯಂತ್ರಣ ಶಸ್ತಚಿಕಿತ್ಸೆ ಕ್ರಮ ಕೈಗೊಳ್ಳಲಾಗುವುದು.

ಹಗರಿಬೊಮ್ಮನಹಳ್ಳಿ; ಪಟ್ಟಣದಲ್ಲಿನ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ₹8 ಲಕ್ಷ ಅಂದಾಜು ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ತಿಳಿಸಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಬೀದಿನಾಯಿಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದಲ್ಲಿನ ಒಟ್ಟು 700ಕ್ಕೂ ಹೆಚ್ಚು ಬೀದಿನಾಯಿಗಳ ನಿಯಂತ್ರಣಕ್ಕೆ ನಾಯಿಗಳ ಸಂತಾನ ನಿಯಂತ್ರಣ ಶಸ್ತಚಿಕಿತ್ಸೆ ಕ್ರಮ ಕೈಗೊಳ್ಳಲಾಗುವುದು. ಕೆಲ ಗ್ರಾಪಂಗಳಿಂದಲೂ ಬೀದಿ ನಾಯಿಗಳನ್ನು ಪಟ್ಟಣದಲ್ಲಿ ಬಿಟ್ಟ ಪರಿಣಾಮ ನಾಯಿಗಳ ಸಂಖ್ಯೆ ಹೆಚ್ಚಿದೆ. ಈಗಾಗಲೇ 2 ಬಾರಿ ಟೆಂಡರ್ ಪ್ರಕಟಿಸಿದರೂ ಬೀದಿನಾಯಿಗಳನ್ನು ಹಿಡಿಯಲು ಮುಂದೆ ಬಾರದಾಗಿದ್ದಾರೆ. ಇದೀಗ ನಿಯಂತ್ರಣ ಕ್ರಮವನ್ನು ಪಶುಸಂಗೋಪನೆ ಇಲಾಖೆಗೆ ವಹಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರತಿ ವಾರ್ಡ್ಗಳಲ್ಲಿ ಕೈಗೊಳ್ಳಬಹುದಾದ ಕ್ರಮ ಅಂತಿಮಪಡಿಸಲಾಗುವದು ಎಂದು ತಿಳಿಸಿದರು.

ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೂರಪ್ಪ ಮಾತನಾಡಿ, ಪುರಸಭೆಯಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ನಿಯಂತ್ರಣ ಕ್ರಮಕ್ಕೆ ಚಾಲನೆ ನೀಡಲಾಗುವುದು. ಗಂಡುನಾಯಿಗಳಿಗೆ ₹3 ಸಾವಿರ, ಹೆಣ್ಣುನಾಯಿಗಳಿಗೆ ₹2 ಸಾವಿರ ಮೊತ್ತ ಸಂತಾನ ತಡೆ ಶಸ್ತ್ರಚಿಕಿತ್ಸೆಗೆ ತಗುಲುತ್ತದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ಮಾತನಾಡಿ, ಬೀದಿನಾಯಿಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಚಿಕನ್ ಅಂಗಡಿ ಮಾಲೀಕರ ಸಭೆ ನಡೆಸಿ ನಿರ್ವಹಣೆ ಕ್ರಮ ಸೂಚಿಸಲಾಗುವುದು. ಬೀದಿನಾಯಿಗಳಿಗೆ ಕೈಗೊಳ್ಳಲಾಗುವ ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಕ್ರಮಕ್ಕೆ ಪ್ರಾಣಿದಯಾ ಸಂಘದಿಂದಲೂ ಸಹಕಾರ ಅಗತ್ಯ ಎಂದರು.

ಪರಿಸರ ನಿಯಂತ್ರಣಾಕಾರಿ ಜಗದೀಶ್ ಹಿರೇಮಠ್, ಪುರಸಭೆ ಸದಸ್ಯರಾದ ರಾಜೇಶ್ ಬ್ಯಾಡಿಗಿ, ಬಾಳಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗುಂಡ್ರ ಹನುಮಂತಪ್ಪ, ಮಾಜಿ ಸದಸ್ಯ ಸೆರೆಗಾರ ಹುಚ್ಚಪ್ಪ, ಮುಖಂಡರಾದ ವಿಜಯಕುಮಾರ್, ಸಿಖಂದರ್ ಖಾನ್ ಇತರರಿದ್ದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ಬೀದಿನಾಯಿಗಳ ನಿಯಂತ್ರಣದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಮಾತನಾಡಿದರು.