ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಭಾಸ್ಕರಾಚಾರ್ಯ ಅಧ್ಯಯನ ಪೀಠದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2026 ಉದ್ಘಾಟಿಸಿ ಮಾತನಾಡಿದ ಅವರು, ಕೊಟ್ಟರೆ ಪಡೆಯಬಹುದು ಎಂಬ ತತ್ವದೊಂದಿಗೆ, ಕುಟುಂಬ ಮತ್ತು ಸಮಾಜದಲ್ಲಿ ಪುರುಷರ ಸಹಕಾರದಿಂದ ಮಹಿಳೆಯರು ಇಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಒಳ್ಳೆಯತನವೆಂಬುವುದು ಎಂದಿಗೂ ವಿಫಲವಾಗದ ಹೂಡಿಕೆ ಎಂದರು.ಸದಾ ದಯಾಳು ಮತ್ತು ಸಹಾಯ ಮನೋಭಾವದಿಂದ ಬದುಕಬೇಕು. ಪ್ರಾರ್ಥನೆ ಮಾಡುವ ಕೈಗಳಿಗಿಂತ ಸಹಾಯ ಮಾಡುವ ಕೈಗಳು ಮಹತ್ತರವಾದವು. ಜೀವನದಲ್ಲಿ ತೃಪ್ತಿ, ಸಂತೋಷ ಮತ್ತು ಆಧ್ಯಾತ್ಮಿಕ ಶಕ್ತಿ ಅಗತ್ಯವಾಗಿದ್ದು, ಪ್ರತಿ ದಿನವೂ ಮಹಿಳಾ ದಿನವೇ ಎಂದರು.ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ-2025 ಪುರಸ್ಕೃತ ಪ್ರಕಾಶ ಗೌಡರ ಮಾತನಾಡಿ, ವಿಜ್ಞಾನದ ಅಭಿವೃದ್ಧಿಯೊಂದಿಗೆ ಸಮಾಜದಲ್ಲಿಯೂ ಹಲವು ಬದಲಾವಣೆಗಳು ಸಂಭವಿಸುತ್ತಿದ್ದು, ಇಂದು ಕೃತಕ ಬುದ್ಧಿಮತ್ತೆ ಯುಗಕ್ಕೆ ನಾವು ಕಾಲಿಟ್ಟಿದ್ದೇವೆ. ಇದರಿಂದ ಮಾನವರು ತಮ್ಮ ಕೆಲಸವನ್ನು ಕಳೆದುಕೊಳ್ಳುವುದಿಲ್ಲ. ಪ್ರಕೃತಿ ಇರುವ ವರೆಗೆ ಮಾನವ ಅಭಿವೃದ್ಧಿ ಮುಂದುವರಿಯುತ್ತದೆ ಎಂದು ಅಭಿಪ್ರಾಯಪಟ್ಟರು.ಸಿಂಡಿಕೇಟ್ ಸದಸ್ಯೆ ಡಾ.ಮಾಧುರಿ ಬಿರಾದಾರ ಮಾತನಾಡಿ, ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಮತ್ತು ಸಂಶೋಧನೆ ಮಾಡುವ ಅವಕಾಶಗಳು ಕಡಿಮೆ ಇದ್ದರೂ, ಇಂದಿನ ಕಾಲದಲ್ಲಿ ಮಹಿಳೆಯರು ವಿಜ್ಞಾನದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿದ್ದಾರೆ. ತಂತ್ರಜ್ಞಾನ, ಅಂತರಿಕ್ಷ ವಿಜ್ಞಾನ, ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ ಎಂದರು. ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿಜ್ಞಾನ ದಿನಾಚರಣೆ ಕೇವಲ ಒಂದು ದಿನದ ಸಂಭ್ರಮವಾಗದೇ ನಮ್ಮ ದಿನನಿತ್ಯದ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಮತ್ತು ಅನ್ವೇಷಿಸುವ ಹಂಬಲವು ವಿದ್ಯಾರ್ಥಿಗಳಲ್ಲಿ ಸದಾ ಜೀವಂತವಾಗಿರಬೇಕು ಎಂದರು.ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಮಹಿಳೆಯರನ್ನು ಹುರಿದುಂಬಿಸುವುದು ಅತ್ಯಂತ ಅಗತ್ಯವಾಗಿದ್ದು, ಇದರಿಂದ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಈ ಅವಕಾಶಗಳ ಮೂಲಕ ಅವರು ವಿವಿಧ ಹುದ್ದೆಗಳಲ್ಲಿ ಸಾಧನೆ ಮಾಡಬಹುದು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾತ್ರ ಅಪಾರವಾಗಿದೆ. ಸುಧಾಮೂರ್ತಿ ಅವರಂತಹ ಮಹಿಳೆಯರು ಇಂದು ಸಮಾಜಕ್ಕೆ ಸ್ಫೂರ್ತಿದಾಯಕ ವ್ಯಕ್ತಿಗಳಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಹೆಮ್ಮೆಯ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು. ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ವಿದ್ಯಾರ್ಥಿನಿಯರಿಗೆ ಅತಿಥಿಗಳಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಕಾರ್ಯದರ್ಶಿ ಪ್ರೊ.ಲಕ್ಷ್ಮೀದೇವಿ.ವೈ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಅಜೀಜ್ ಮಕಾಂದಾರ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ವಿವಿಯ ಸ್ನಾತಕ ಹಾಗೂ ಸ್ನಾತಕೋತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ.ಬಾಬು ಲಮಾಣಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಸವಿತಾ ಹುಲಮನಿ ಅತಿಥಿಯರನ್ನು ಪರಿಚಯಿಸಿದರು. ಡಾ.ಸಂಜೀವಕುಮಾರ ಗಿರಿ ರಾಷ್ಟ್ರೀಯ ವಿಜ್ಞಾನ ದಿನದ ಚಟುವಟಿಕೆಗಳ ವರದಿ ವಾಚಿಸಿದರು. ಡಾ.ನಟರಾಜ ದುರ್ಗಣ್ಣವರ ಕಾರ್ಯಕ್ರ ನಡೆಸಿಕೊಟ್ಟರು. ಡಾ.ರೋಹಿಣಿ ಭುಸನೂರಮಠ ನಿರೂಪಿಸಿದರು. ಡಾ.ಜಾಯ್ ಹೊಸಕೇರಿ ವಂದಿಸಿದರು.