ಅಯೋಧ್ಯೆಗೆ ಪಾದಯಾತ್ರೆ ಹೊರಟ ಹುಬ್ಬಳ್ಳಿ ಯುವಕ

KannadaprabhaNewsNetwork | Published : Jan 12, 2024 1:45 AM

ಸಾರಾಂಶ

ಡಿ.22ರಂದು ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ದರ್ಶನ ಪಡೆದು ಮಠದಿಂದ ಈ ಯಾತ್ರೆ ಪ್ರಾರಂಭಿಸಿದರು. ಊಟ, ವಸತಿ ಬಗ್ಗೆ ಚಿಂತಿಸದೆ, ಕೈಯಲ್ಲಿ ಕರ್ನಾಟಕ ಧ್ವಜ ಹಿಡಿದು, ಕೊರಳಿನಲ್ಲಿ ಕೇಸರಿ ಬಣ್ಣದ ಶಾಲು ಹಾಕಿಕೊಂಡು ನಡೆದು ನಡೆದು ಪಾದಗಳಲ್ಲಿ ಬೊಬ್ಬೆ ಬಂದು, ಆರೋಗ್ಯದಲ್ಲಿ ಏರುಪೇರಾದರೂ ಶ್ರೀರಾಮ ಜಪ ಮಾಡುತ್ತ, ಅಲ್ಲಲ್ಲಿ ಮಠ-ಮಂದಿರಗಳಲ್ಲಿ ನೀಡುವ ಪ್ರಸಾದ ಸೇವಿಸುತ್ತ ದೃಢ ಮನಸ್ಸಿನಿಂದ ಮುನ್ನಡೆದಿದ್ದಾರೆ.

ಈರಪ್ಪ ನಾಯ್ಕರ್‌ ಹುಬ್ಬಳ್ಳಿ

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಮಂದಿರ ಉದ್ಘಾಟನೆ ದಿನ ಸಮೀಪಿಸುತ್ತಿದೆ. ಹುಬ್ಬಳ್ಳಿಯ ಯುವಕನೊಬ್ಬ 1,799 ಕಿಮೀ ದೂರದಲ್ಲಿರುವ ತನ್ನ ಆರಾಧ್ಯದೈವ ಶ್ರೀರಾಮಚಂದ್ರನ ದರ್ಶನಕ್ಕಾಗಿ ಪಾದಯಾತ್ರೆ ಹೊರಟಿದ್ದಾನೆ.

ಇಲ್ಲಿನ ಆನಂದ ನಗರದ ಸಮೀಪ ಘೋಡಕೆ ಪ್ಲಾಟ್‌ನ ಮಲ್ಲೇಶ್ವರ ನಗರದಲ್ಲಿ ತನ್ನ ತಾಯಿ, ಅಕ್ಕಂದಿರೊಂದಿಗೆ ವಾಸವಾಗಿರುವ ಈ ಯುವಕನ ಹೆಸರು ''''''''ಮನೋಜ್ ಅರ್ಕಾಟ್''''''''. ಖಾಸಗಿ ಮಳಿಗೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮನೋಜ್ ಶ್ರೀರಾಮನ ಪರಮಭಕ್ತ.

ತಾಯಿ-ಅಕ್ಕನ ಆಶೀರ್ವಾದ: ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುವುದಾಗಿ ತಿಳಿಸಿದಾಗ ಮನೆಯಲ್ಲಿ ಅಷ್ಟು ದೂರ ಒಬ್ಬನೇ ಹೋಗುವುದು ಬೇಡ ಎಂದು ತಾಯಿ ನೀಲಾ ಅರ್ಕಾಟ್ ಹೇಳಿದರು. ಆದರೂ ಕೊನೆಗೆ, ಆ ದೇವರ ಇಚ್ಛೆಯಂತೆ ಆಗಲಿ ಎಂದು ಯಾತ್ರೆಗೆ ಕಳುಹಿಸಿಕೊಟ್ಟರು.

ಡಿ.22ರಂದು ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ದರ್ಶನ ಪಡೆದು ಮಠದಿಂದ ಈ ಯಾತ್ರೆ ಪ್ರಾರಂಭಿಸಿದರು. ಊಟ, ವಸತಿ ಬಗ್ಗೆ ಚಿಂತಿಸದೆ, ಕೈಯಲ್ಲಿ ಕರ್ನಾಟಕ ಧ್ವಜ ಹಿಡಿದು, ಕೊರಳಿನಲ್ಲಿ ಕೇಸರಿ ಬಣ್ಣದ ಶಾಲು ಹಾಕಿಕೊಂಡು ನಡೆದು ನಡೆದು ಪಾದಗಳಲ್ಲಿ ಬೊಬ್ಬೆ ಬಂದು, ಆರೋಗ್ಯದಲ್ಲಿ ಏರುಪೇರಾದರೂ ಶ್ರೀರಾಮ ಜಪ ಮಾಡುತ್ತ, ಅಲ್ಲಲ್ಲಿ ಮಠ-ಮಂದಿರಗಳಲ್ಲಿ ನೀಡುವ ಪ್ರಸಾದ ಸೇವಿಸುತ್ತ ದೃಢ ಮನಸ್ಸಿನಿಂದ ಮುನ್ನಡೆದಿದ್ದಾರೆ.

ಅಯೋಧ್ಯೆ ವರೆಗೆ ನಡಿಗೆ: ಮನೋಜ್‌ ದಿನಕ್ಕೆ 60 ಕಿಮೀ ದೂರ ಕ್ರಮಿಸುವ ಗುರಿ ಹೊಂದಿದ್ದರು. ಮೊದಲ ದಿನ ಸುಮಾರು 92 ಕಿಮೀ ವರೆಗೆ ಬರಿಗಾಲಲ್ಲಿ ನಡೆಯುತ್ತಾರೆ. ಹೀಗೆ 7 ದಿನ 80ರಿಂದ 90 ಕಿಮೀ ನಡೆದು ಮುಂದೆ ನಿಯಮವನ್ನು ಹಾಕಿಕೊಂಡು ಬೆಳಗಿನ ಜಾವ 4 ಗಂಟೆಗೆ ಪಾದಯಾತ್ರೆ ಆರಂಭಿಸಿ 11.30ಕ್ಕೆ ಸ್ವಲ್ಪ ವಿಶ್ರಾಂತಿ ಪಡೆದು, ಪುನಃ ಮಧ್ಯಾಹ್ನ 3 ಗಂಟೆಗೆ ನಡಿಗೆ ಪ್ರಾರಂಭಿಸಿ ರಾತ್ರಿ 11 ಗಂಟೆ ವರೆಗೆ ದಣಿಯದೆ ಶ್ರೀರಾಮನನ್ನು ಜಪಿಸುತ್ತ ಸಾಗುತ್ತಿದ್ದೇನೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.

ಸಾಗಿದ ಮಾರ್ಗ: ಹುಬ್ಬಳ್ಳಿಯಿಂದ ಹೊರಟವರು ನವಲಗುಂದ, ಬಾಗಲಕೋಟೆ, ವಿಜಯಪುರ ದಾಟಿ, ಮಹಾರಾಷ್ಟ್ರದ ನಾಗಪುರ, ಸೋಲಾಪುರ, ತುಳಜಾಪುರ, ಲಾಥೋರ್, ಯೋಥ್ಮಲಾ ಮೂಲಕ ಸಾಗಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶದ ಮೂಲಕ ಅಯೋಧ್ಯೆ ತಲುಪಲಿದ್ದಾರೆ. ಈ ವರೆಗೆ 1380 ಕಿಮೀ ನಡೆದಿದ್ದಾರೆ.

ದಾರಿ ಹೋಕರು, ಸ್ಥಳೀಯರು ಇವರ ನಡೆ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತ ಕೆಲವರು ಸನ್ಮಾನ ಮಾಡಿದರು. ಇನ್ನೂ ಕೆಲವರು ಉಪಹಾರ, ವಸತಿ ವ್ಯವಸ್ಥೆ ಕಲ್ಪಿಸಿದರು. ಇನ್ನೂ ಕೆಲವರು ಉತ್ಸಾಹದ ಮಾತುಗಳನ್ನಾಡಿ ಪ್ರೇರಣೆ ನೀಡಿದ್ದಾರೆ.

ತಮ್ಮ ಆಡುಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ನಿತ್ಯದ ಚಟುವಟಿಕೆ ವಿಡಿಯೋ ಪೋಸ್ಟ್ ಹಾಕುತ್ತಿದ್ದಾರೆ. ಈ ವಿಡಿಯೋ ತುಣುಕುಗಳನ್ನು ವೀಕ್ಷಿಸಿದ ಜನರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಗೆ ಗೊತ್ತಿಲ್ಲದ್ದ ಊರಿನಲ್ಲಿ ಶ್ರೀರಾಮ ಜಪ ಮಾಡಿ. ತನ್ನ ಪರಿಚಯ ಮಾಡಿಕೊಂಡು ಸಾಗುತ್ತಿರುವ ಯುವಕನ ನಡೆಗೆ ಜನರು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜ. 22ರಂದು ಅಯೋಧ್ಯಯಲ್ಲಿ ಶ್ರೀರಾಮನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅಂದು ದರ್ಶನ ಪಡೆಯಲು ಆಗದಿದ್ದರೆ ಯಾವಾಗ ದರ್ಶನಕ್ಕೆ ಅವಕಾಶ ದೊರೆಯುವುದೇ ಅಲ್ಲಿಯ ವರೆಗೂ ಅಲ್ಲಿಯೇ ಇದ್ದು ದರ್ಶನ ಪಡೆದು ಮರಳುವೆ ಎಂದು ಅಯೋಧ್ಯೆಗೆ ಪಾದಯಾತ್ರೆ ಮೂಲಕ ಹೊರಟ ಹುಬ್ಬಳ್ಳಿ ಯುವಕ ಮನೋಜ್‌ ಅರ್ಕಾಟ್‌ ಹೇಳಿದರು.

Share this article