ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಡ್ಯಕನ್ನಡಿಗರ ಜೀವನಾಡಿಯೂ, ಬದುಕಿನ ಬಾವನಾಡಿಯೂ ಆಗಿರುವ ದಕ್ಷಿಣ ಗಂಗೆ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ ಮಾತೆಗೆ ಆರತಿ ಮಾಡುವ ಹೊಸ ಧಾರ್ಮಿಕ ಸಂಪ್ರದಾಯಕ್ಕೆ ಸರ್ಕಾರ ಮುಂದಾಗಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಕಾವೇರಿಯನ್ನು ಹಳೇ ಮೈಸೂರು ಪ್ರಾಂತ್ಯದ ಜನ ವಿಶೇಷವಾಗಿ ರೈತರು ಬಹುಕಾಲದಿಂದಲೂ ತಮ್ಮ ಬದುಕಿನ ಭಾಗವಾಗಿ, ಅನ್ನದ ಹಸಿರಾಗಿ ಕಂಡುಕೊಂಡು ಬಂದಿದ್ದು, ಇದನ್ನು ಧಾರ್ಮಿಕ ಶಕ್ತಿಯಾಗಿ ಪರಿವರ್ತಿಸುವ ಮತ್ತು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ನಡೆದಂತೆ ಕಂಡುಬರುತ್ತಿವೆ.ಈ ಹಿಂದಿನ ಬಿಜೆಪಿ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಮತದ ಉದ್ದೇಶವನ್ನಿಟ್ಟುಕೊಂಡು ಮಹದೇಶ್ವರ ಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿ ರಾಜಕೀಯವಾದ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿ ವಿಫಲವಾದ ಬೆನ್ನಲ್ಲೇ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೂಡ ಸ್ಥಳೀಯವಾಗಿ ಕಾವೇರಿ ಆರತಿಯ ಮೂಲಕ ಹೊಸ ಧಾರ್ಮಿಕ ಪರಂಪರೆ ಹುಟ್ಟುಹಾಕಿ ಮಂಡ್ಯ ಮತ್ತಿತರ ಜಿಲ್ಲೆಯ ಜನರನ್ನು ಸೆಳೆಯುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.ಕಳೆದ ಕೆಲವು ವರ್ಷಗಳಿಂದಲೂ ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಶಾಶ್ವತಿ ಧಾರ್ಮಿಕ ಸಮಿತಿ ಮಾತ್ರವೇ ಕಾವೇರಿ ಆರತಿಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಉತ್ತರದ ಗಂಗಾರತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡ ನಂತರ ದಕ್ಷಿಣ ಗಂಗೆಯಾದ ಕಾವೇರಿ ಆರತಿ ನಡೆಸುವ ಬಗ್ಗೆ ಸ್ಥಳೀಯ ಪ್ರತಿನಿಧಿಗಳು ಹೆಚ್ಚು ಆಸಕ್ತಿಯನ್ನು ವಹಿಸುತ್ತಿರುವುದು ಮೇಲ್ನೋಟಕ್ಕೆ ಸರಿ ಎನಿಸಿದರೂ, ವಾಸ್ತವವಾಗಿ ಶುದ್ಧ ಕಾವೇರಿ ದಿನದಿಂದ ದಿನಕ್ಕೆ ವಿಷಯುಕ್ತ ವಸ್ತುಗಳಿಂದ ಮಲಿನಗೊಳ್ಳುತ್ತಾ ತನ್ನ ಪಾವಿತ್ರತೆಯನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಗಂಭೀರ ಚಿಂತನೆ ನಡೆಸಿ ಗಂಗಾಶುದ್ಧಿಯ ಮಾದರಿಯಲ್ಲೇ ಕಾವೇರಿ ಶುದ್ಧಿಯ ಪ್ರಕ್ರಿಯೆಯನ್ನು ಆರಂಭಿಸದಿರುವುದು ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ.ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿಯನ್ನು ಸರ್ಕಾರ ನಡೆಸುವುದರ ಬಗ್ಗೆ ಸಾರ್ವಜನಿಕವಾಗಿ ಹರ್ಷ ವ್ಯಕ್ತವಾಗಿದ್ದರೂ, ಮೂಲಭೂತವಾಗಿ ಕಾವೇರಿ ಸ್ವಚ್ಚತೆ ನೀರಿನ ಜಾಗೃತಿ, ನೀರಿನ ಬಳಕೆ ಇಂತಹ ಕಾರ್ಯಕ್ರಮಗಳ ಬಗ್ಗೆ ಮುತುವರ್ಜಿ ವಹಿಸದೆ ಕೇವಲ ಸಾಂಕೇತಿಕ ಆರತಿಗಳ ಮೂಲಕ ಜನಮನ ಸೆಳೆಯುವ ಪ್ರಯತ್ನಗಳನ್ನು ನಡೆಸುತ್ತಿರುವುದೂ ಕೂಡ ನಾಗರೀಕರ ಆಕ್ಷೇಪಕ್ಕೆ ಕಾರಣವಾಗಿದೆ.
ಮೈಸೂರು ನಗರ ಸೇರಿದಂತೆ ಶ್ರೀರಂಗಪಟ್ಟಣದ ತ್ಯಾಜ್ಯ, ಒಳಚರಂಡಿ ನೀರೆಲ್ಲವೂ ಕಾವೇರಿ ನದಿಯನ್ನು ಸೇರುತ್ತಿದೆ. ತ್ಯಾಜ್ಯ ನೀರನ್ನು ಸಂಸ್ಕರಿಸಿದ ನಂತರ ನದಿಗೆ ಹರಿಸಬೇಕಿದ್ದರೂ ನೇರವಾಗಿಯೇ ತ್ಯಾಜ್ಯ ನೀರು ನದಿ ಸೇರುತ್ತಿದ್ದರೂ ಸರ್ಕಾರ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ಅದನ್ನು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕ್ರಮಗಳನ್ನೇ ಅನುಸರಿಸುತ್ತಿಲ್ಲವೆಂಬ ಮಾತುಗಳು ಸಂಘಟನೆಗಳು ಹಾಗೂ ಜನರಿಂದಲೇ ಕೇಳಿಬರುತ್ತಿದೆ.ಕಾವೇರಿ ನದಿಯ ಪಾವಿತ್ರ್ಯತೆಯನ್ನು ಕಾಪಾಡುವುದಕ್ಕೆ ಮೊದಲು ಸರ್ಕಾರ ಹಣ ಬಿಡುಗಡೆ ಮಾಡಿ ಶುದ್ಧೀಕರಣಕ್ಕೆ ಮೊದಲ ಆದ್ಯತೆ ನೀಡಲಿ. ದಕ್ಷಿಣ ಗಂಗೆಯನ್ನು ಅಕ್ಷರಶಃ ಪವಿತ್ರನದಿಯಾಗಿ, ಜೀವನದಿಯಾಗಿ ಉಳಿಸಿಕೊಳ್ಳುವುದಕ್ಕೆ ಕಾರ್ಯಯೋಜನೆ ರೂಪಿಸಿ ಜಾರಿಗೊಳಿಸಿ ಯಶಸ್ವಿಯಾದ ನಂತರ ಕಾವೇರಿಗೆ ಆರತಿ ಮಾಡುವುದರಿಂದ ಅದರ ಶ್ರೇಷ್ಠತೆಯೂ ಹೆಚ್ಚುತ್ತದೆ ಎನ್ನುವುದು ಬಹುತೇಕರು ವ್ಯಕ್ತಪಡಿಸುತ್ತಿರುವ ಭಾವನೆಯಾಗಿದೆ.ಮೈಸೂರಿನಿಂದ ಶ್ರೀರಂಗಪಟ್ಟಣ ಸೇರುವ ನಾಲೆಗಳ ಮೂಲಕವೂ ತ್ಯಾಜ್ಯಯುಕ್ತ ರಾಸಾಯನಿಕ ವಸ್ತುಗಳು, ಕಸ ಸೇರಿದಂತೆ ಇನ್ನಿತರ ಕಲ್ಮಶಗಳು ನದಿಯ ಒಡಲು ಸೇರುತ್ತಿವೆ. ಎಲ್ಲೂ ಸಹ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿರುವುದು ಕಂಡುಬರುವುದೇ ಇಲ್ಲ. ಈ ತ್ಯಾಜ್ಯ ನೀರನ್ನು ಸಂಸ್ಕರಿಸಿ ನದಿಗೆ ಬಿಡುವಂತೆ ಮಾಡುವುದಕ್ಕೆ ಸರ್ಕಾರ ಮುತುವರ್ಜಿ ವಹಿಸಬೇಕು. ಎಲ್ಲೆಲ್ಲಿಂದ ಕಾವೇರಿ ನದಿಗೆ ತ್ಯಾಜ್ಯ ನೀರು ಸೇರುತ್ತಿದೆ ಎಂಬ ಬಗ್ಗೆ ಸ್ಥಳ ಗುರುತಿಸಿ ಅಲ್ಲಿ ಸಂಸ್ಕರಣೆ ಮಾಡುವುದಕ್ಕೆ ಯೋಜನೆಗಳನ್ನು ಕೈಗೆತ್ತಿಕೊಂಡು ನದಿ ಮಲಿನಗೊಳ್ಳುವುದನ್ನು ತಡೆಯುವುದಕ್ಕೆ ಮೊದಲ ಪ್ರಾಧಾನ್ಯತೆ ನೀಡುವುದು ಪ್ರಸ್ತುತ ಹೆಚ್ಚು ಅವಶ್ಯ ಎನ್ನುವುದು ಜನರ ಅಭಿಮತವಾಗಿದೆ.ಕಾರ್ತೀಕ ಮಾಸದಲ್ಲಿ ಕಾವೇರಿ ಆರತಿ?
ಉತ್ತರದ ಗಂಗಾರತಿ ಮಾದರಿಯಲ್ಲಿ ದಕ್ಷಿಣದ ಕಾವೇರಿ ನದಿಗೆ ಕಾವೇರಿ ಆರತಿ ಮಾಡಲು ರಾಜ್ಯಸರ್ಕಾರ ಮುಂದಾಗಿದೆ. ಈಗಾಗಲೇ ಹೃಷಿಕೇಶ ಮತ್ತು ವಾರಾಣಸಿಗೆ ತೆರಳಿ ಗಂಗಾರತಿ ಬಗ್ಗೆ ಸಚಿವರ ತಂಡ ಅಧ್ಯಯನ ಮಾಡಿಕೊಂಡು ಬಂದಿದೆ. ಮುಂಬರುವ ಡಿಸೆಂಬರ್ ತಿಂಗಳಲ್ಲಿ ಕಾವೇರಿ ನದಿಗೆ ಆರತಿ ಮಾಡುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದೆ.ಶ್ರೀರಂಗಪಟ್ಟಣ ದಸರಾ ಸಮಯದಲ್ಲೇ ಕಾವೇರಿ ನದಿಗೆ ಆರತಿ ಮಾಡುವುದಕ್ಕೆ ಮೊದಲು ನಿರ್ಧರಿಸಿತ್ತಾದರೂ ಪೂರ್ವಸಿದ್ಧತೆ, ಸೌಲಭ್ಯಗಳ ಕೊರತೆಯಿಂದ ಅದನ್ನು ತುಲಾಮಾಸದವರೆಗೆ ಮುಂದೂಡಲಾಗಿದೆ.ಶ್ರೀರಂಗಪಟ್ಟಣ ದಸರಾ ಸಮಯದಲ್ಲಿ ಸಾಂಕೇತಿಕವಾಗಿ ಆರು ದಿನಗಳ ಕಾಲ ನಡೆದ ಕಾವೇರಿ ಆರತಿ ಸರ್ಕಾರದ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮವಾಗಿರಲಿಲ್ಲ. ಅದು ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ನಡೆಸಿದ ಕಾರ್ಯಕ್ರಮವಾಗಿತ್ತು. ಈ ಸಮಿತಿ ಕಳೆದ ಹಲವು ವರ್ಷಗಳಿಂದ ಕಾವೇರಿ ಆರತಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ದಸರಾ ವೇಳೆ ಕಾರ್ಯಕ್ರಮ ಆಯೋಜಿಸದೆ ತುಲಾ ಮಾಸದಲ್ಲಿ ನಡೆಸುತ್ತಿದ್ದರು. ಈ ಬಾರಿ ಜಿಲ್ಲಾಡಳಿತದ ಕೋರಿಕೆ ಮೇರೆಗೆ ದಸರಾ ಸಮಯದಲ್ಲಿ ಆಯೋಜಿಸಿದ್ದರೂ ಜಿಲ್ಲಾಡಳಿತದಿಂದ ಪೂರಕ ಸಹಕಾರ ದೊರೆಯಲೇ ಇಲ್ಲ.ಜನರಲ್ಲಿ ಪೂಜನೀಯ ಭಾವನೆ ಇಲ್ಲ:
ಕಾವೇರಿ ನದಿ ದಕ್ಷಿಣದ ಗಂಗೆ ಎಂಬ ಖ್ಯಾತಿಗೂ ಪಾತ್ರವಾಗಿದೆ. ಪವಿತ್ರನದಿ ಎಂಬ ನಂಬಿಕೆಯೂ ಜನರಲ್ಲಿದೆ. ಆದರೆ, ಜೀವನದಿಯಾಗಿ ಕಾವೇರಿಯನ್ನು ಕಂಡಿರುವ ಜನರು ಧಾರ್ಮಿಕ ಭಾವನೆಯಿಂದ ಪೂಜಿಸುವಷ್ಟರ ಮಟ್ಟಿಗೆ ಎಂದಿಗೂ ತಮ್ಮ ಭಾವನಾತ್ಮಕತೆಯನ್ನು ಪ್ರದರ್ಶಿಸಿದವರಲ್ಲ. ಆ ಭಾವನೆ ಈ ಭಾಗದ ಜನರಿಗಿದ್ದಿದ್ದರೆ ನದಿ ಮಾಲಿನ್ಯಗೊಳ್ಳುವುದಕ್ಕೆ ಅವಕಾಶವನ್ನೇ ನೀಡುತ್ತಿರಲಿಲ್ಲ. ಆ ಭಾವನೆಯನ್ನು ಜನರಲ್ಲಿ ಮೂಡಿಸುವ ಪ್ರಯತ್ನವನ್ನೂ ಯಾರೂ ಮಾಡದಿರುವುದೂ ಕೂಡ ನದಿ ಮಾಲಿನ್ಯಗೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.ಕಾವೇರಿ ಆರತಿ ಮಾಡಲು ಮುಂದಾದ ಸರ್ಕಾರ ಕೂಡ ಮೊದಲಿಗೆ ನದಿ ಶುದ್ಧೀಕರಣಕ್ಕೆ ಒತ್ತು ನೀಡಿ ಜನರಲ್ಲಿ ಕಾವೇರಿ ನದಿಯ ಬಗ್ಗೆ ಜನರಲ್ಲಿ ಪೂಜನೀಯ ಭಾವನೆ ಮೂಡುವಂತೆ ಮಾಡುವುದಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕಿದೆ. ನದಿ ಪಾತ್ರದ ಹಳ್ಳಿಯ ಜನರೆಲ್ಲರನ್ನೂ ಕಾವೇರಿ ಆರತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಕಾವೇರಿ ಆರತಿ ನಡೆಯುವ ಮಾಸದಲ್ಲಿ ಹೊಸ ಸಂಸ್ಕೃತಿಯನ್ನು ಆ ಭಾಗದಲ್ಲಿ ಹುಟ್ಟುಹಾಕಬೇಕು. ಮೊದಲು ಈ ಭಾಗದ ಜನರು ಕಾವೇರಿ ಆರತಿಗೆ ಆಕರ್ಷಿತರಾಗುವಂತೆ ಮಾಡಿದರೆ ಆ ಸಂಪ್ರದಾಯ, ಸಂಸ್ಕೃತಿನಿರಂತತೆ ಕಾಯ್ದುಕೊಂಡರೆ ನಂತರದ ದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುವುದು ಎನ್ನುವುದು ಹಲವರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯವಾಗಿದೆ.ಕಾವೇರಿ ಆರತಿ ನಡೆಸುವ ಶ್ರೀರಂಗಪಟ್ಟಣದ ಸ್ನಾನಘಟ್ಟವನ್ನು 50 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಶ್ರೀರಂಗನಾಥಸ್ವಾಮಿ ಪಾದ ತೊಳೆದ ನೀರು ಅಲ್ಲಿ ಸೇರುವುದರಿಂದ ಆ ಪವಿತ್ರ ಜಾಗವನ್ನೇ ಕಾವೇರಿ ಆರತಿಗೆ ಆಯ್ಕೆ ಮಾಡುವುದಕ್ಕೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಒಂದು ದಿನದ ಆರತಿಗೆ 25 ಸಾವಿರ ಖರ್ಚು..!ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕಾವೇರಿ ಆರತಿಯನ್ನು ವಾರದಲ್ಲಿ ಮೂರು ದಿನ ಮಾಡುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಆದರೆ, ಕಾವೇರಿ ಆರತಿಯನ್ನು ಮಾಡುವುದಕ್ಕೆ ಒಂದು ದಿನಕ್ಕೆ 25 ಸಾವಿರ ರು. ಖರ್ಚು ಬೀಳಲಿದೆ. ಆರತಿ ಬೆಳಗುವವರಿಗೆ ವಸತಿ, ಸಂಭಾವನೆ, ತುಪ್ಪ, ಎಣ್ಣೆ, ದೀಪ ಸೇರಿದಂತೆ ಇತರೆ ಖರ್ಚುಗಳು ಅದರಲ್ಲಿ ಸೇರಿರುತ್ತವೆ. ಏನಿಲ್ಲವೆಂದರೂ ತಿಂಗಳಿಗೆ 3.50 ಲಕ್ಷ ರು. ಸರ್ಕಾರ ತನ್ನ ಬೊಕ್ಕಸದಿಂದ ನೀಡಬೇಕಿರುತ್ತದೆ. ಒಮ್ಮೆ ಕಾವೇರಿ ಆರತಿ ಮಾಡಿ ನಿಲ್ಲಿಸುವಂತೆಯೂ ಇಲ್ಲ. ಅದು ನಿರಂತರತೆಯನ್ನು ಕಾಯ್ದುಕೊಂಡು ಬಂದಾಗಷ್ಟೇ ಅದಕ್ಕೆ ಹೆಚ್ಚಿನ ಪಾವಿತ್ರ್ಯತೆಯನ್ನೂ ಪಡೆದುಕೊಳ್ಳುತ್ತದೆ. ಇದನ್ನು ರಾಜಕೀಯ ದೃಷ್ಟಿಯಿಂದಷ್ಟೇ ನೋಡುವುದಾದರೆ ಕಾವೇರಿ ಹೆಸರಿಗಷ್ಟೇ ದಕ್ಷಿಣ ಗಂಗೆಯಾಗಿ ಉಳಿಯುತ್ತಾಳೆ. ಮಲಿನವಾಗಿಯೇ ಹರಿಯುತ್ತಿರುತ್ತಾಳೆ.ಕಾವೇರಿ ಆರತಿಗೂ ಮುನ್ನ ಕಾವೇರಿ ನದಿಯನ್ನು ಶುದ್ಧೀಕರಣ ಮಾಡುವುದು ಸೂಕ್ತ. ತೀರ್ಥರೂಪಿಣಿ, ದಕ್ಷಿಣ ಗಂಗೆ ಎಂದೆಲ್ಲಾ ಕರೆಯಲ್ಪಡುತ್ತಿದ್ದರೂ ಈ ಭಾಗದ ಜನರಿಗೆ ನದಿಯ ಬಗ್ಗೆ ಪೂಜನೀಯ ಭಾವನೆ ಇಲ್ಲ. ಅದರಿಂದಾಗಿಯೇ ತ್ಯಾಜ್ಯವೆಲ್ಲವೂ ಕಾವೇರಿ ಒಡಲನ್ನು ನಿರಾತಂಕವಾಗಿ ಸೇರುತ್ತಿದೆ. ಕಾವೇರಿ ಆರತಿ ಎಷ್ಟು ಅಗತ್ಯವೋ ನದಿಯ ಸ್ವಚ್ಛತೆ, ಶುದ್ಧೀಕರಣ ಅದಕ್ಕಿಂತ ಹೆಚ್ಚು ಅವಶ್ಯ.
- ಡಾ.ಭಾನುಪ್ರಕಾಶ್ ಶರ್ಮಾ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ