ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳ ಆರೈಕೆಗಾಗಿ ತಾಲೂಕಿನ ಅಬ್ಬಿಗೇರಿಯಲ್ಲಿ ಆರಂಭಿಸಿದ ಕೂಸಿನ ಮನೆ ಶಿಶುಪಾಲನಾ ಕೇಂದ್ರ ಮಾದರಿಯಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ಅಬ್ಬಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಇರುವ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಬ್ಬಿಗೇರಿ ಗ್ರಾಮದಲ್ಲಿ ಕೂಸಿನ ಮನೆ ಬಹಳ ಚೆನ್ನಾಗಿ ನಡೆದಿದೆ. ಇಲ್ಲಿನ ಮಹಿಳಾ ಕೂಲಿ ಕಾರ್ಮಿಕರು ತಮ್ಮ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಪ್ರತಿದಿನ ಕೂಸಿನಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿ ಯಾವುದೇ ಚಿಂತೆಯಿಲ್ಲದೆ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಬಹುದು ಎಂದರು.ಈ ಮೊದಲು ಗ್ರಾಮೀಣ ಭಾಗದಲ್ಲಿ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಮಕ್ಕಳನ್ನು ಯಾರೊಡನೆ ಬಿಟ್ಟು ಹೋಗುವುದು ಎಂಬುದು ದೊಡ್ಡ ಸವಾಲಾಗಿತ್ತು. ‘ಕೂಸಿನ ಮನೆ’ ಈ ಸಮಸ್ಯೆಗೆ ಪರಿಹಾರವಾಗಿದ್ದು, ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಮಕ್ಕಳಿಗೆ ಇಲ್ಲಿ ವರ್ಣರಂಜಿತ ಕಟ್ಟಡಗಳು, ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಚಿತ್ರಗಳು, ಆಟಿಗೆ ಸಾಮನುಗಳು ಹಾಗೂ ಪೌಷ್ಟಿಕ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ಅಬ್ಬಿಗೇರಿ ಗ್ರಾಮದಲ್ಲಿ ಪ್ರತಿದಿನ 2000ಕ್ಕೂ ಅಧಿಕ ಜನರು ನರೇಗಾ ಸಾಮೂಹಿಕ ಕಾಮಗಾರಿಯಡಿ ಕೆಲಸಕ್ಕೆ ಬರುತ್ತಾರೆ. ಅದರಲ್ಲಿ ಕೆಲವು ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುತ್ತಾರೆ, ಇನ್ನು ಕೆಲವು ವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳನ್ನು ಎಲ್ಲಿ ಬಿಟ್ಟು ಹೋಗಬೇಕು ಎಂಬ ಚಿಂತೆ ಅವರನ್ನು ಕಾಡುತಿತ್ತು. ಆದರೆ ಅದಕ್ಕೆ ಪರಿಹಾರ ಎಂಬಂತೆ ಕೂಸಿನ ಮನೆ ಕಾರ್ಯ ನಿರ್ವಹಿಸುತ್ತದೆ.ಗ್ರಾಮದಲ್ಲಿ ಪ್ರತಿ ದಿನ ಕೂಸಿನ ಮನೆಗೆ 15ಕ್ಕೂ ಹೆಚ್ಚು ಮಕ್ಕಳನ್ನು ಪಾಲಕರು ಬಿಟ್ಟು ಹೋಗುತ್ತಾರೆ. ಆರೈಕೆದಾರರಾದ ಐಶ್ವರ್ಯ ದೊಡ್ಡಮನಿ, ಹಾಗೂ ಲಕ್ಷ್ಮಿ ತಲ್ಲೂರ ಸಹ ಮಕ್ಕಳನ್ನು ದಿನನಿತ್ಯ ಆಟವಾಡಿಸುತ್ತಾ ಉತ್ಕೃಷ್ಟ ಮಟ್ಟದ ಆಹಾರವನ್ನು ಮಕ್ಕಳಿಗೆ ತಿನ್ನಿಸುತ್ತಾ ಮಕ್ಕಳ ಲಾಲನೆ ಪಾಲನೆ ಮಾಡುತ್ತಾರೆ ಎಂದು ಕೂಸಿನ ಮನೆ ಆರೈಕೆದಾರ ಕಾರ್ಯ ಶ್ಲಾಘಿಸಿದರು.ಗ್ರಾಪಂ ಪಿಡಿಒ ಲೋಹಿತ ಎಂ ಮಾತನಾಡಿ, ಕಾರ್ಯ ನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೂಸಿನ ಮನೆಯನ್ನು ಕೈಲಾದ ಮಟ್ಟಕ್ಕೆ ಚೆನ್ನಾಗಿ ನೋಡಿಕೊಳ್ಳಲು ಶ್ರಮ ಪಡುತ್ತಿದ್ದೇವೆ, ಕೂಸಿನ ಮನೆಯು ನರೇಗಾ ಮಹಿಳಾ ಕಾರ್ಮಿಕರ ಸಬಲೀಕರಣಕ್ಕೆ ಮಹತ್ವದ ಕೊಡುಗೆಯಾಗಿದೆ. ಇದು ಕೇವಲ ಮಕ್ಕಳ ಆರೈಕೆಗೆ ಮಾತ್ರವಲ್ಲ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದರು.ನಮ್ಮ ಗ್ರಾಮದ ಕೂಸಿನ ಮನೆಯಿಂದ ಮಹಿಳಾ ಕೂಲಿ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗಿದೆ, ಪ್ರತಿ ದಿನ ದುಡಿಯಲಿಕ್ಕೆ ಹೋಗುವ ತಾಯಂದಿರು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಚಿಂತೆಯಿಲ್ಲದೆ ಕೆಲಸಕ್ಕೆ ಹೋಗುತ್ತಾರೆ, ಇದರಿಂದ ಬಹಳಷ್ಟು ಅನುಕೂಲವಾಗಿದೆ ಅಂತಾ ಮಹಿಳಾ ಕಾರ್ಮಿಕರು ನನ್ನ ಬಳಿ ಖುಷಿ ವ್ಯಕ್ತಪಡಿಸುತ್ತಾರೆ ಅಬ್ಬಿಗೇರಿ ಗ್ರಾಪಂ ಅಧ್ಯಕ್ಷೆ ಲಲಿತಾ ರಾಠೋಡ ಹೇಳಿದರು.
ಕೂಸಿನ ಮನೆಯಲ್ಲಿ ಮಕ್ಕಳು ಉಳಿದ ಮಕ್ಕಳ ಜೊತೆಗೆ ಸೇರಿ ಆಟ ವಾಡುತ್ತಾ, ಊಟ ಮಾಡುತ್ತಾ ಕಾಲ ಕಳೆಯುತ್ತಾರೆ. ಕೆಲಸ ಮುಗಿಸಿ ಬರುವ ಸಂದರ್ಭದಲ್ಲಿ ಮಕ್ಕಳನ್ನು ನಾವು ಮನೆಗೆ ಕರೆದುಕೊಂಡು ಹೊಗುತ್ತೇವೆ ಮಹಿಳಾ ಕೂಲಿ ಕಾರ್ಮಿಕರಾದ ರೇಖಾ ರಾಜೂರ ಹೇಳಿದರು.