ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅರುಣ ಯೋಗಿರಾಜಗೆ ಅಭಿನವ ಅಮರಶಿಲ್ಪಿ ಬಿರುದು

KannadaprabhaNewsNetwork | Published : Mar 5, 2024 1:33 AM

ರಾಮನ ಮೂರ್ತಿ ನಾನು ಮಾಡಿಲ್ಲ. ರಾಮನೇ ನನ್ನ ಕೈಯಿಂದ ಮಾಡಿಸಿಕೊಂಡಿದ್ದಾರೆ. ನಾನು ನೆಪವಷ್ಟೇ. ರಾಮನೇ ಅವಕಾಶ ನೀಡಿದ್ದಾರೆ. ನಮ್ಮ ಕುಟುಂಬ ಐದು ತಲೆಮಾರಿನಿಂದ ಶಿಲ್ಪ ಕೆತ್ತನೆ ಮಾಡುತ್ತಿದೆ.

ಕಾರವಾರ:

ಇಲ್ಲಿನ ಸಾಗರದರ್ಶನ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದಾಂಡೇಲಿಯ ಡಾ. ಹಿರೇಮಠ ಫೌಂಡೇಶನ್, ಸನಾತನ ಧರ್ಮ ರಕ್ಷಣಾ ವೇದಿಕೆಯಿಂದ ಅಯೋಧ್ಯೆ ರಾಮಮಂದಿರ ರಾಮಲಲ್ಲಾ ಮೂರ್ತಿ ಕೆತ್ತಿದ ಅರುಣ ಯೋಗಿರಾಜ ಅವರಿಗೆ ಅಭಿನವ ಅಮರಶಿಲ್ಪಿ ಬಿರುದು ನೀಡಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿದ ಅರುಣ, ರಾಮನ ಮೂರ್ತಿ ನಾನು ಮಾಡಿಲ್ಲ. ರಾಮನೇ ನನ್ನ ಕೈಯಿಂದ ಮಾಡಿಸಿಕೊಂಡಿದ್ದಾರೆ. ನಾನು ನೆಪವಷ್ಟೇ. ರಾಮನೇ ಅವಕಾಶ ನೀಡಿದ್ದಾರೆ. ನಮ್ಮ ಕುಟುಂಬ ಐದು ತಲೆಮಾರಿನಿಂದ ಶಿಲ್ಪ ಕೆತ್ತನೆ ಮಾಡುತ್ತಿದೆ. ಹಿರಿಯರ ಪುಣ್ಯದಿಂದ ರಾಮನಮೂರ್ತಿ ಕೆತ್ತನೆ ಮಾಡುವ ಅವಕಾಶ ಸಿಕ್ಕಿದೆ ಎಂದು ಅಭಿಪ್ರಾಯಿಸಿದರು.

ನಿಮ್ಮ ಪ್ರೀತಿ, ಆಶೀರ್ವಾದದಿಂದ ನನಗೆ ನೀಡಿದ ಬಹುದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಭಾರತೀಯರ ಕನಸು ನನಸಾಗಿದೆ. ಭವ್ಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಹೃದಯ ತುಂಬಿಬಂತು. ಜೂನ್‌ನಲ್ಲಿ ಮೊದಲ ಮೂರ್ತಿ ಕೆತ್ತನೆ ಆರಂಭವಾಗಿತ್ತು. ಅದರಲ್ಲಿ ದೋಷವಿದ್ದ ಕಾರಣ ಪುನಃ ಮತ್ತೊಂದು ಮೂರ್ತಿ ಕೆತ್ತನೆ ಮಾಡಬೇಕಾಯಿತು. ಭವ್ಯವಾದ ಮೂರ್ತಿ ತಯಾರಾಗಲು ರಾಮನ ಆಶೀರ್ವಾದವೇ ಕಾರಣವಾಗಿದೆ ಎಂದರು.ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿ, ಅರುಣ ಅವರನ್ನು ನೋಡಿ ರಾಮನ ಪ್ರತಿರೂಪ ದರ್ಶನ ಆದಂತಾಗಿದೆ. ಡಾ. ಹಿರೇಮಠ ಫೌಂಡೇಶನ್ ಯೋಗ್ಯ ಬಿರುದು ನೀಡಿದೆ. ಅರುಣ ಅವರಿಂದ ಅಯೋಧ್ಯೆಯಂತೆ ಕಾಶಿ, ಮಥುರಾಕ್ಕಾಗಿ ಮೂರ್ತಿ ಕೆತ್ತನೆ ಮಾಡುವ ಕೆಲಸವಾಗಬೇಕು ಎಂದು ಹೇಳಿದರು.ರಾಮಮಂದಿರ ನಿರ್ಮಾಣಕ್ಕೆ ೫೦೦ ವರ್ಷ ಹಿಡಿಯಿತು. ೭೦ ಯುದ್ಧ ನಡೆಯಿತು. ಸ್ವಾತಂತ್ರ್ಯ ಸಿಕ್ಕ ಬಳಿಕವೂ ರಾಮನಿಗೆ ಅಯೋಧ್ಯೆಗೆ ಪ್ರವೇಶಿಸಲು ಆಗಿಲ್ಲ. ನ್ಯಾಯಾಲಯಕ್ಕೆ ಹೋಗಬೇಕಾಯಿತು. ಈ ದೇಶದ ಮಣ್ಣಿನ ಕಣ ಕಣದಲ್ಲಿ ರಾಮನಿದ್ದಾನೆ. ಮರ್ಯಾದ ಪುರುಷೋತ್ತಮನ ಜನ್ಮಸ್ಥಾನಕ್ಕೆ ನಾವು ಸಾಕ್ಷಿ ಕೊಡಬೇಕಾಗಿ ಬಂದಿದ್ದು ದುರ್ದೈವವಾಗಿದೆ ಎಂದು ಮುತಾಲಿಕ್‌ ಬೇಸರ ವ್ಯಕ್ತಪಡಿಸಿದರು.೨ನೇ ಛತ್ರಪತಿ ಶಿವಾಜಿ ಮಹಾರಾಜರಾಗಿ ನರೇಂದ್ರ ಮೋದಿ ಬಂದರು. ರಾಮಮಂದಿರ ನಿರ್ಮಾಣದ ಸಂಕಲ್ಪ ಮಾಡಿದರು. ಮಂದಿರದ ಉದ್ಘಾಟನೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಆಮಂತ್ರಣ ನೀಡಿದರೆ ಬಹಿಷ್ಕಾರ ಹಾಕಿದರು. ನಾಚಿಕೆ ಆಗಬೇಕು ಎಂದ ಮುತಾಲಿಕ್‌, ೭೦ ವರ್ಷ ನೀವು ಪಾಪ ಮಾಡಿದ್ದೀರಿ. ಅದನ್ನು ತೊಳೆದುಕೊಳ್ಳಲು ಅವಕಾಶವಿತ್ತು. ಈಗ ೭೦೦ ವರ್ಷ ಕಳೆದರೂ ನಿಮ್ಮ ಪಾಪ ತೊಳೆಯಲು ಸಾಧ್ಯವಿಲ್ಲ. ಮೋದಿ ೧೧ ದಿನ ಉಪವಾಸ ಮಾಡಿ ಸಂಪ್ರದಾಯದ ಪ್ರಕಾರ ಶಾಸ್ತ್ರೋಕ್ತವಾಗಿ ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಹಣೆಗೆ ಭಸ್ಮ ಹಚ್ಚಿ ಪೂಜೆ ಮಾಡಿದ ಮೋದಿ ಒಬ್ಬರೆ ಆಗಿದ್ದಾರೆ. ಹಿಂದೆ ಇದ್ದ ಪ್ರಧಾನಿಗಳು ಅಜ್ಮೀರದ ಮಸೀದಿಗೆ ಹೋಗಿ ಚಾದರ ಹಾಕುತ್ತಿದ್ದರು. ಧರ್ಮ ಉಳಿಯಬೇಕಾದರೆ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಕರೆ ನೀಡಿದರು.ಇದೇ ವೇಳೆ ವಿವಿಧ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರನ್ನು ಗೌರವಿಸಲಾಯಿತು. ಡಾ. ಹಿರೇಮಠ ಫೌಂಡೇಶನ್‌ನ ಡಾ. ವಿಶ್ವನಾಥ ಹಿರೇಮಠ, ಸನಾತನ ಧರ್ಮ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಡಾ. ಗಜೇಂದ್ರ ನಾಯ್ಕ, ನಾಗಸಾಧುಗಳು ಇದ್ದರು.