ಅವೈಜ್ಞಾನಿಕ ಸದಾಶಿವ ಆಯೋಗ ವರದಿ ರದ್ದುಪಡಿಸಿ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

Reservation Conservation Union menmbers protest, opp dc office smg, dist president nanya naik, ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯಾನಾಯ್ಕ್, shimoga news

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನ್ಯಾ. ಎ.ಜೆ.ಸದಾಶಿವ ಆಯೋಗದ ಅವೈಜ್ಞಾನಿಕ ವರದಿ ರದ್ದುಪಡಿಸುವಂತೆ ಆಗ್ರಹಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪರಿಶಿಷ್ಟ ಜಾತಿಗಳ ಸಮುದಾಯದಲ್ಲಿ ಅನಗತ್ಯ ಗೊಂದಲ ಉಂಟುಮಾಡಿ ಜಾತಿ, ಜಾತಿಗಳ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿರುವ ಈ ದೋಷಪೂರಿತ ವರದಿಯನ್ನು ಹಿಂದಿನ ಸರ್ಕಾರ ಒಪ್ಪಿರಲಿಲ್ಲ. ಆದರೆ, ಸರಿಯಾದ ಸಮೀಕ್ಷೆ ನಡೆಸದೇ ಕೆಲವರ ಒತ್ತಾಸೆಗೆ ಮಣಿದು ತರಾತುರಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಈ ವರದಿಯು ಅನುಮಾನ ಮತ್ತು ಆತಂಕಕ್ಕೆ ಎಡೆಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವರದಿಯ ಬಗ್ಗೆ ಸಮಗ್ರವಾಗಿ ಏನಿದೆ ಎಂದೇ ತಿಳಿದಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಇದರಲ್ಲಿ ರಾಜಕೀಯ ಮಾಡುತ್ತಿದ್ದು, ಮಾದಿಗ ಸಮುದಾಯ ಮತ್ತು ಚಲವಾದಿ, ಭೋವಿ, ಲಂಬಾಣಿ, ಕೊರಮ, ಕೊರಚ, ದೊಂಬಿದಾಸರು, ಬುಡಗ ಜಂಗಮ, ಶಿಳ್ಳೆಕ್ಯಾತರು, ಅಲೆಮಾರಿಗಳ ಮಧ್ಯೆ ದ್ವೇಷ ಬಿತ್ತಲಾಗುತ್ತಿದೆ. ಇದು ಅಪಾಯಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳಮೀಸಲಾತಿ ಕೊಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಆದ್ದರಿಂದ ಒಳ ಮೀಸಲಾತಿ ಮಾಡುವುದನ್ನು ನಿಲ್ಲಿಸಬೇಕು. ಈ ವರದಿಯನ್ನು ಅಧಿವೇಶನದಲ್ಲಿ ಚರ್ಚೆಗೆ ಮಂಡಿಸಬಾರದು ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ಹಿಂದಿನ ಸರ್ಕಾರದಿಂದ ತಿರಸ್ಕರಿಸಲ್ಪಟ್ಟ ವರದಿಯನ್ನು ಸರ್ಕಾರ ಮತ್ತೆ ಜಾರಿಗೆ ತರುತ್ತೇವೆ ಎಂಬ ವಿಷಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯಾನಾಯ್ಕ್, ಭೋವಿ ಸಮಾಜದ ಅಧ್ಯಕ್ಷ ಎನ್.ರವಿಕುಮಾರ್, ಜಿಲ್ಲಾ ಬಂಜಾರ ಸಂಘ ಅಧ್ಯಕ್ಷ ಕೆ.ಬಿ. ಅಶೋಕ್ ನಾಯ್ಕ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್.ಜಗದೀಶ್, ಜಿಲ್ಲಾ ಸಂಚಾಲಕ ಧೀರರಾಜ್ ಹೊನ್ನವಿಲೆ, ಕುಮಾರ್ ನಾಯ್ಕ್, ವೀರಭದ್ರಪ್ಪ ಪೂಜಾರಿ, ಈರಾನಾಯ್ಕ್, ಬೂದಿಗೆರೆ ಬಸವರಾಜ್, ಆಯನೂರು ಶಿವಾನಾಯ್ಕ್, ನಾಗೇಶ್‌ ನಾಯ್ಕ್, ದೇಶಾದ್ರಿ ಹೊಸಮನಿ, ಫಕೀರಪ್ಪ ಭಜಂತ್ರಿ, ಮಹಾಲಕ್ಷ್ಮೀ, ಲೋಕೇಶ್, ಅನಿಲಕುಮಾರ್, ಪ್ರೇಮ್ ಕುಮಾರ್, ನಾಗರಾಜ್ ನಾಯ್ಕ್, ಭೋಜ್ಯಾನಾಯ್ಕ್ ಮತ್ತಿತರರು ಇದ್ದರು.

- - - ಬಾಕ್ಸ್‌ ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಂಜಾರ, ಕೊರಮ, ಕೊರಚ, ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಪ್ರತ್ಯೇಕಿಸುವ ಹುನ್ನಾರ ಕಂಡುಬರುತ್ತಿದೆ. ಇದರಲ್ಲಿ ಈ ಸಮುದಾಯಗಳನ್ನು ಮೀಸಲಾತಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಆದ್ದರಿಂದ ಆಯೋಗದ ಈ ಅವೈಜ್ಞಾನಿಕ ವರದಿ ರದ್ದುಪಡಿಸಬೇಕು

- ಪ್ರತಿಭಟನಾಕಾರರು

- - - -14ಎಸ್‌ಎಂಜಿಕೆಪಿ04:

ನ್ಯಾ. ಎ.ಜೆ.ಸದಾಶಿವ ಆಯೋಗದ ಅವೈಜ್ಞಾನಿಕ ವರದಿ ರದ್ದುಪಡಿಸುವಂತೆ ಆಗ್ರಹಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

Share this article