ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಿಜೆಪಿ ಸರ್ಕಾರದಿಂದ ಲಂಬಾಣಿ ಸಮುದಾಯಕ್ಕೆ ಭರಪೂರ ಯೋಜನೆ

KannadaprabhaNewsNetwork | Published : Apr 29, 2024 1:36 AM

ಬಿಜೆಪಿ ಅಧಿಕಾರಾವಧಿಯಲ್ಲಿ ಲಂಬಾಣಿ ಸಮುದಾಯಕ್ಕೆ ಭರಪೂರ ಅಭಿವೃದ್ಧಿ ಯೋಜನೆಗಳು ತಲುಪಿದ್ದು ಎಲ್ಲ ಕಾಲದಲ್ಲಿಯೂ ಬಿಜೆಪಿ ಪರವಾಗಿ ನಮ್ಮ ಸಮುದಾಯ ನಿಲ್ಲಬೇಕು ಎಂದು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮನವಿ ಮಾಡಿದರು.

ಹಾನಗಲ್ಲ: ಬಿಜೆಪಿ ಅಧಿಕಾರಾವಧಿಯಲ್ಲಿ ಲಂಬಾಣಿ ಸಮುದಾಯಕ್ಕೆ ಭರಪೂರ ಅಭಿವೃದ್ಧಿ ಯೋಜನೆಗಳು ತಲುಪಿದ್ದು, ಎಲ್ಲ ಕಾಲದಲ್ಲಿಯೂ ಬಿಜೆಪಿ ಪರವಾಗಿ ನಮ್ಮ ಸಮುದಾಯ ನಿಲ್ಲಬೇಕು ಎಂದು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮನವಿ ಮಾಡಿದರು.ಶನಿವಾರ ಹಾನಗಲ್ಲಿನಲ್ಲಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ ೧೪ ತಾಂಡಾಗಳಿಗೆ ಸಮುದಾಯ ಭವನ ನೀಡಿದ ಶ್ರೇಯಸ್ಸು ಬಿಜೆಪಿ ಸರಕಾರದ್ದು. ಎಲ್ಲ ಹಂತದಲ್ಲಿ ಲಂಬಾಣಿ ಸಮುದಾಯದ ಶಿಕ್ಷಣ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸಿ ನೀಡಿದ ಬಿಜೆಪಿಯಿಂದ ಮಾತ್ರ ನಮ್ಮ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಮಕ್ಕಳಿಗೆ ತೀರ ಕಷ್ಟದಲ್ಲಿಯೂ ಉತ್ತಮ ವಿದ್ಯಾಭ್ಯಾಸ ನೀಡಿದ ಸಮುದಾಯ ಲಂಬಾಣಿ ಸಮುದಾಯ. ಅಂತಹ ಜಾಗೃತಿ ನಿಮ್ಮಲ್ಲಿದೆ. ದೇಶದ ಹಿತಕ್ಕೆ ಸದಾ ಸಕ್ರೀಯ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಮ್ಮ ಕ್ಷೇತ್ರದ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡೋಣ. ನೀವೆಲ್ಲ ಬುದ್ಧಿವಂತರು ಬಿಜೆಪಿ ಹಾಗೂ ಕಾಂಗ್ರೇಸ್ಸಿನ ಕೆಲಸಗಳನ್ನು ತಾಳೆ ಮಾಡಿ ನೋಡಿ. ಜನ ಹಿತ ಎಂದರೆ ಅದು ಬಿಜೆಪಿ ಮಾತ್ರ ಎಂದರು.ಮಾಜಿ ಶಾಸಕ, ಬಂಜಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ನಾಯಕ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ ಎಂದರು.ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ಲಂಬಾಣಿ ಸಮುದಾಯಕ್ಕೆ ನನ್ನ ಅಧಿಕಾರದಲ್ಲಿ ಮಾಡಿದ ಕೆಲಸಗಳು ಈಗ ಮಾತನಾಡುತ್ತಿವೆ. ನಿಮ್ಮ ಮಕ್ಕಳಿಗಾಗಿ ಹಾಸ್ಟೆಲ್, ನಿಮಗಾಗಿ ಲಕ್ಷ ಮನೆಗಳು, ತಾಂಡಾ ಅಭಿವೃದ್ಧಿ ಸೇರಿದಂತೆ ಎಲ್ಲ ಸೌಲಭ್ಯವನ್ನು ಒದಗಿಸಲು ನಮ್ಮ ಸರಕಾರದಲ್ಲಿ ಸಾಧ್ಯವಾಗಿದೆ. ಮೋದಿಜಿ ಬೆಂಬಲಿಸಲು ಬಿಜೆಪಿಗೆ ಮತ ನೀಡಿ ಎಂದರು.ಮಾಜಿ ಸಚಿವ ಮನೋಹರ ತಹಶೀಲ್ದಾರ, ಮಾಜಿ ಶಾಸಕ ಶಿವರಾಜ ಸಜ್ಜನವರ, ಭೋಜರಾಜ ಕರೂದಿ, ಬಿ.ಎಸ್.ಅಕ್ಕಿವಳ್ಳಿ, ಮಾಲತೇಶ ಸೊಪ್ಪಿನ, ಬಸವರಾಜ ಹಾದಿಮನಿ ಹಾಗೂ ಬಂಜಾರ ಸಮುದಾಯದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.