ಹಾನಗಲ್ಲ: ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಜಾಮೀನು ಪಡೆದು ಸಂಭ್ರಮಾಚರಣೆ ನಡೆಸಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಈ ಆರೋಪಿತರ ಜಾಮೀನು ರದ್ದುಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಸ್. ರೇಣುಕಾ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸೋಮವಾರ ಪಟ್ಟಣದ ಎನ್ಸಿಜೆಸಿ ಕಾಲೇಜಿನಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ನ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ, ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಏಳು ಆರೋಪಿಗಳು ಜಾಮೀನು ಪಡೆದ ನಂತರ ಹಾವೇರಿಯಿಂದಲೇ ಅಕ್ಕಿಆಲೂರುವರೆಗೆ ತಮ್ಮ ಬೆಂಬಲಿಗರೊಂದಿಗೆ ಕಾರು, ಬೈಕ್ಗಳಲ್ಲಿ ಸಂಭ್ರಮಾಚರಣೆ ಮಾಡಿರುವುದು ಆಘಾತಕಾರಿಯಾಗಿದೆ. ಸಾಮೂಹಿಕ ಅತ್ಯಾಚಾರ ಆರೋಪಿಗಳು, ದೇಶದ ಪರವಾದ ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಬಂಧನವಾಗಿ ಬಿಡುಗಡೆ ಹೊಂದಿರುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ, ಪ್ರಕರಣದಿಂದ ಇನ್ನೂ ಮುಕ್ತವಾಗದಿದ್ದರೂ ಸಂಪೂರ್ಣ ಪ್ರಕರಣವೇ ಖುಲಾಸೆಯಾದ ರೀತಿಯಲ್ಲಿ ವರ್ತಿಸಿರುವುದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ರೀತಿಯ ವರ್ತನೆ ತೋರಿದ ವ್ಯಕ್ತಿಗಳ ಜಾಮೀನು ಈ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ತಹಸೀಲ್ದಾರ್ ಎಸ್.ರೇಣುಕಾ ಅಭಾವಿಪ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರಿಷತ್ನ ಪ್ರಮುಖರಾದ ಬಸವರಾಜ ಮಟ್ಟಿಮನಿ, ಹರೀಶ ಹಾನಗಲ್ಲ, ಲಿಖಿತ ಹದಳಗಿ, ಶಿವು ಮ್ಯಾದರ್, ದರ್ಶನ್ ಕಲಾಲ, ರವಿ ನೆಗಳೂರ, ಮೊಹಮ್ಮದ್ ದೇವಗಿರಿ, ಸಮ್ಮೇದ ಕಂಚಿನೆಗಳೂರ, ಸೃಷ್ಟಿ ಪಾಟೀಲ, ಪ್ರಿಯಾ ಬಾಳಂಬೀಡ, ಸೌಂದರ್ಯ ಮೂಲಿಮನಿ, ಪವಿತ್ರಾ ಸಂಗೂರ, ಸಹನಾ ಪಾಟೀಲ ಇದ್ದರು.ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನಹಾವೇರಿ: ನಗರದ ಬಸ್ ನಿಲ್ದಾಣದಲ್ಲಿ ಹ್ಯಾಂಡ್ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿ ಮಂಜುನಾಥ ಮೇಲಿನಮನಿ ಎಂಬವರಿಗೆ ಸೇರಿದ ಸುಮಾರು ₹30 ಸಾವಿರ ಕಿಮ್ಮತ್ತಿನ ಬೈಕ್ ಇದಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.