ಕುವೆಂಪು ಸಾಲುಗಳ ಯಥಾವತ್ತಾಗಿ ಉಳಿಸಲು ಎಬಿವಿಪಿ ಆಗ್ರಹ

KannadaprabhaNewsNetwork |  
Published : Feb 21, 2024, 02:01 AM IST
20ಎಚ್ಎಸ್ಎನ್16 : ಎಬಿವಿಪಿಯಿಂದ ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆ. | Kannada Prabha

ಸಾರಾಂಶ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎನ್ನುವ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ವತಿಯಿಂದ ಮಂಗಳವಾರ ಪ್ರತಿಭಟಿಸಿ ಹಾಸನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಒತ್ತಾಯ । ಜ್ಞಾನ ದೇಗುಲವಿದು ವಿವಾದ । ರಾಜ್ಯ ಸರ್ಕಾರದ ವಿರುದ್ಧ ಕಿಡಿ । ಎಬಿವಿಪಿಯಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಹಾಸನ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎನ್ನುವ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ವತಿಯಿಂದ ಮಂಗಳವಾರ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಎಬಿವಿಪಿ ಹಾಸನ ವಿಭಾಗದ ಸಂಚಾಲಕ ಗಿರೀಶ್ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ಸರ್ಕಾರವು ರಾಜ್ಯದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದ ಸರಸ್ವತಿ, ಗಣಪತಿ ಮೊದಲಾದ ರೀತಿಯ ಧಾರ್ಮಿಕ ಪೂಜೆ ಮಾಡುವುದನ್ನು ನಿಷೇಧ ಮಾಡಿ ಗೊಂದಲವನ್ನ ಸೃಷ್ಟಿ ಮಾಡಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆ ಆದೇಶವನ್ನು ಹಿಂತೆಗೆದುಕೊಂಡಿದ್ದ ಸರ್ಕಾರ ಈಗ ಮತ್ತೆ ವಸತಿ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕರುನಾಡಿನ ಅಗ್ರಮಾನ್ಯ ಕವಿ ಕುವೆಂಪು ಅವರ ವಾಕ್ಯ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎನ್ನುವ ಘೋಷಣೆಯನ್ನು ಬದಲಾವಣೆ ಮಾಡಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ವಾಕ್ಯವನ್ನು ಹಾಕಿರುವ ಸರ್ಕಾರದ ನಡೆಯನ್ನು ಕನ್ನಡದ ಮಹಾನ್ ದಾರ್ಶನಿಕ ಕವಿಯೊಬ್ಬರ ಆಶಯವನ್ನು ಮೀರಿ ನಿಲ್ಲುವ ದಾರ್ಷ್ಟ್ಯವನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ತರ್ಕ ಶೂನ್ಯ ನಡೆಗಳಿಂದ ಸರ್ಕಾರವು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವಂತೆ ಭಾಸವಾಗುತ್ತಿದೆ. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದರೆ ಜ್ಞಾನ ದೇಗುಲವನ್ನೇ ಪ್ರಶ್ನಿಸಬೇಕೇ? ಜ್ಞಾನವನ್ನು ಪ್ರಶ್ನಿಸಬೇಕೆ? ಅಥವಾ ಜ್ಞಾನ ದೇಗುಲದಂಗಳದಲ್ಲಿ ಶ್ರದ್ಧೆಯೊಂದಿಗೆ ವಿನಯಪೂರ್ವಕವಾಗಿ ಜ್ಞಾನ ಸಂಪಾದಿಸಿ ಮೌಲ್ಯಯುತವಾಗಿ ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕೆ? ಹೀಗೆ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವ, ವಿನಯತೆ, ವಿನಮ್ರತೆ, ವಿದ್ವತ್‌ರ್ಣತೆಯಿಂದ ಕೂಡಿರಬೇಕೇ ವಿನಹ ಗೂಂಡಾ ಪ್ರವೃತ್ತಿಯಿಂದಲ್ಲ. ಧೈರ್ಯವಾಗಿ ಪ್ರಶ್ನಿಸು ಎನ್ನುವ ಸಾಲೇ ಬೇಕಿದ್ದರೆ ಭ್ರಷ್ಟ ಸಚಿವರ, ಅಧಿಕಾರಿ ವರ್ಗದವರ ಸರ್ಕಾರಿ ಕಚೇರಿಗಳಲ್ಲಿ ಹಾಕಿಸಿಕೊಳ್ಳಲಿ ಎಂದು ಹೇಳಿದರು.

ಒಬ್ಬ ಸದೃಢ, ಸೃಜನಶೀಲ ವಿದ್ಯಾರ್ಥಿಯಾಗಿ ರೂಪುಗೊಳ್ಳಲು ಜ್ಞಾನಜ್ಯೋತಿಯ ಪ್ರಭೆಯು ಅತ್ಯವಶ್ಯಕ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಶಯದಂತೆ ಸರ್ಕಾರ ತನ್ನ ನಡೆಯನ್ನು ತಿದ್ದಿಕೊಳ್ಳಬೇಕು ಹಾಗೂ ವಿಶ್ವಮಾನವ ಕುವೆಂಪು ಸಾಲುಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು ಎಂದು ಎಬಿವಿಪಿ ಆಗ್ರಹಿಸುತ್ತದೆ ಎಂದರು.

ಎಬಿವಿಪಿ ಮುಖಂಡರಾದ ಸುಶ್ಮಿತಾ, ಚಿರಂತ್, ದರ್ಶನ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎಬಿವಿಪಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ಎರಡೂ ಬಣದಲ್ಲಿ ಖರ್ಗೆ ಮಾತಿಂದ ಸಂಚಲನ
‘ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ’ ಎಂದ ಮರುದಿನವೇ ಸ್ಪಷ್ಟನೆ