ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸತತ ಪರಿಶ್ರಮ, ನಿರಂತರ ಕಲಿಕೆ, ಗುರಿಯೊಂದಿಗೆ ಮುನ್ನೆಡೆದರೆ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಅಮೆರಿಕ ಕಂಪೆನಿಯ ಹಿರಿಯ ಸಾಫ್ಟ್ವೇರ್ ಇಂಜಿನಿಯರ್ ಎ.ಎಂ. ಮಂಜುನಾಥ್ ಹೇಳಿದರು.ತಾಲೂಕಿನ ಚೌಡ್ಲು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಮತ್ತು ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃತಕ ಬುದ್ದಿಮತ್ತೆಯನ್ನು ಆಧರಿಸಿ ಮುನ್ನೆಡೆಯುತ್ತಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳು ಸಾಫ್ಟ್ವೇರ್ ಮತ್ತು ತಂತ್ರಜ್ಞಾನಾಧಾರಿತ ಜೌದ್ಯಮಿಕ ಕ್ಷೇತ್ರದಲ್ಲಿ ಸಿಗುತ್ತಿವೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಹೆಚ್ಚಿನ ವ್ಯಾಸಂಗ ಮಾಡಲೇಬೇಕಾದ ಅನಿವಾರ್ಯತೆಯಿದ್ದು, ಸಮಯವನ್ನು ವ್ಯರ್ಥ ಮಾಡದೇ ಕಲಿಯಬೇಕು. ಪ್ರಪಂಚದಲ್ಲಿ ತಂತ್ರಜ್ಞಾನದ ಪ್ರಗತಿ ಅಡೆತಡೆಗಳಿಲ್ಲದೆ ಆಗುತ್ತಿದೆ. ಯಾರು ಭಯ ಪಡುವ ಆತಂಕವಿಲ್ಲ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ವಿಷಯದ ಅಧ್ಯಯನಕ್ಕೆ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ಅಭಿರುಚಿಗೆ ತಕ್ಕದಾದ ಶಿಕ್ಷಣ ಸಂಸ್ಥೆಗಳು ಸಿಗುತ್ತವೆ. ಜ್ಞಾನಸಂಪಾದಿಸಿಕೊಂಡರೆ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಪಡೆಯಬಹುದು ಎಂದರು.ಕಂಪ್ಯೂಟರ್ ಶಿಕ್ಷಣ ಕಲಿಯುವುದರೊಂದಿಗೆ, ಗೂಗಲ್ ಸರ್ಚ್, ಚಾಟ್ಜಿಪಿಟಿಯನ್ನು ಬಳಸಿಕೊಂಡು ಕಲಿಕೆ ಉತ್ತಮ ಪಡಿಸಿಕೊಳ್ಳಿ. ಬಿಎಸ್ಸಿ, ಬಿಕಾಂ, ಬಿಎ ವ್ಯಾಸಂಗದಲ್ಲಿ ಉತ್ತಮ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ಇಂಜಿನಿಯರಿಂಗ್ನಲ್ಲೂ ಅನೇಕ ತಂತ್ರಜ್ಞಾನದ ವಿಷಯಗಳಿವೆ. ಜ್ಞಾನ ಸಂಪಾದಿಸಿಕೊಂಡವರಿಗೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ನೌಕರಿ ಪಡೆದುಕೊಳ್ಳುವ ಅವಕಾಶವಿದೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಂಸ್ಥೆಯ ಭಾತ್ಮೀದಾರರಾದ ಕೆ.ಎಂ. ಜಗದೀಶ್ ಮಾತನಾಡಿ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಸ್.ಬಿ.ಭರತ್ಕುಮಾರ್ ಹಾಗೂ ಪದಾಧಿಕಾರಿಗಳು ಇದ್ದರು. ಬೃಂದ ಮತ್ತು ಪ್ರಿತೇಶ್ ಅದೃಷ್ಟವಂತ ವಿದ್ಯಾರ್ಥಿಗಳಾಗಿ ಆಯ್ಕೆಯಾದರು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.