ಹಠದಿಂದ ಜಾತಿ ಜನಗಣತಿ ವರದಿ ಸ್ವೀಕಾರ: ಜ್ಞಾನೇಂದ್ರ ಕಿಡಿ

KannadaprabhaNewsNetwork | Published : Mar 2, 2024 1:52 AM

ಹಲವರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಹಠ ಮಾಡಿ, ಜಾತಿ ಜನಗಣತಿ ವರದಿ ಸ್ವೀಕಾರ ಮಾಡಿದ್ದಾರೆ. ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗ್ತದೆ ಅಂತಾ ಆರೋಪಿಸಿದ್ದರು. ಸಮುದಾಯ ಸಮುದಾಯ ನಡುವೆ ವೈಷಮ್ಯ ನಡೆಯುತ್ತಿದೆ ಎಂದು ಮಠಾಧೀಶರು, ಒಕ್ಕಲಿಗ ನಾಯಕರು, ಲಿಂಗಾಯಿತ ನಾಯಕರು ವಿರೋಧ ಮಾಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಲವರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಹಠ ಮಾಡಿ, ಜಾತಿ ಜನಗಣತಿ ವರದಿ ಸ್ವೀಕಾರ ಮಾಡಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಸ್ವೀಕಾರ ಮಾಡಬಾರದು ಅಂತಾ ಹಲವರು ಹೇಳಿದ್ದರು. ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗ್ತದೆ ಅಂತಾ ಆರೋಪಿಸಿದ್ದರು. ಸಮುದಾಯ ಸಮುದಾಯ ನಡುವೆ ವೈಷಮ್ಯ ನಡೆಯುತ್ತಿದೆ ಎಂದು ಮಠಾಧೀಶರು, ಒಕ್ಕಲಿಗ ನಾಯಕರು, ಲಿಂಗಾಯಿತ ನಾಯಕರು ವಿರೋಧ ಮಾಡಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದ ಸಿಎಂ ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡಿ ಜಾತಿ, ಉಪ ಜಾತಿ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ನೆಮ್ಮದಿ ಕದಡುವ ಕೆಲಸ ಮಾಡುತ್ತಿದೆ. ಜಾತಿ ಜನಗಣತಿಗೆ 200 ಕೋಟಿ ವೆಚ್ಚವಾಗಿದೆ. ಅಧಿವೇಶನದಲ್ಲಿ ಮಂಡಿಸಿದ್ದರೆ ಚರ್ಚೆ ಆಗ್ತಿತ್ತು. ಅಧಿವೇಶನದಲ್ಲಿ ಮಂಡಿಸದೇ, ಅಧಿವೇಶನ ಮುಗಿದ ಮೇಲೆ ಸ್ವೀಕಾರ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕಡೆಗಣಿಸಿದ್ದಾರೆ. ಬಜೆಟ್ ಮಂಡನೆ ಮಾಡಿದ್ದಾರೆ, ಹಣ ನಿಗದಿ ಮಾಡಿಲ್ಲ. ಒಂದೊಂದು ಕುಟುಂಬದ ಮೇಲೆ ಸಾಲ ಹೇರುತ್ತಿದ್ದಾರೆ. ಇದರ ಫಲವನ್ನು ಸಿದ್ದರಾಮಯ್ಯ ಉಣ್ಣುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ರಕ್ಷಣೆ ಮಾಡಿದ್ದಾರೆ. ಕೇಳಿದರೆ ಎಫ್‌ಎಸ್‌ಎಲ್ ವರದಿ ಬರಲಿ ಅಂತಾರೆ. ರಾಜ್ಯಸಭೆ ಚುನಾವಣೆ ವೇಳೆ ಒಂದೇ ಸಮುದಾಯದ ಹಲವು ಮಂದಿ ವಿಧಾನಸೌಧಕ್ಕೆ ಬಂದಿದ್ದಾರೆ. ಒಂದೇ ಸಮುದಾಯದವರು ಹೇಗೆ ಬಂದ್ರು? ಅವರಿಗೆ ಪಾಸ್ ಕೊಟ್ಟವರು ಯಾರು? ಇದೆಲ್ಲವನ್ನೂ ಜನ ನೋಡುತ್ತಿದ್ದಾರೆ ಎಂದು ಕುಟುಕಿದರು.

- - - -1ಎಸ್‌ಎಂಜಿಕೆಪಿ02: ಆರಗ ಜ್ಞಾನೇಂದ್ರ