ದೊಡ್ಡಬಳ್ಳಾಪುರ: ಗಣಪತಿ ವಿಸರ್ಜನೆಗೆ ಆಯೋಜಿಸಲಾಗಿದ್ದ ಮೆರವಣಿಗೆ ವೇಳೆ ಪಟಾಕಿಗಳು ತುಂಬಿದ್ದ ಬಾಕ್ಸ್ ಏಕಾಏಕಿ ಸ್ಪೋಟಗೊಂಡು ಓರ್ವ ಮೃತಪಟ್ಟು 8 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೊಡ್ಡಬಳ್ಳಾಪುರದ ಮುತ್ತೂರು ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಘಟನೆ ವಿವರ:
ಶುಕ್ರವಾರ ಸಂಜೆ ಸುಮಾರು 5.40ರಲ್ಲಿ ಫ್ರೆಂಡ್ಸ್ ವಿನಾಯಕ ಗ್ರೂಪ್ ವತಿಯಿಂದ ಗಣೇಶ ವಿಸರ್ಜನೆಗೆಂದು ಮೆರವಣಿಗೆ ನಡೆಸುತ್ತಿದ್ದ ವೇಳೆ, ಮೆರವಣಿಗೆಗೆ ತರಲಾಗಿದ್ದ ಪವರ್ ಲಿಫ್ಟರ್ ವಾಹನದ ಇಂಜಿನ್ನ ಮೇಲೆ ಪಟಾಕಿಗಳು ತುಂಬಿದ್ದ ಬಾಕ್ಸ್ ಇಡಲಾಗಿತ್ತು. ಇಂಜಿನ್ ಬಿಸಿಯಾದ ಹಿನ್ನಲೆ ಪಟಾಕಿಗಳು ಏಕಾಏಕಿ ಸ್ಪೋಟಗೊಂಡಿವೆ. ಈ ವೇಳೆ ಕ್ರೇನ್ನಲ್ಲಿ ಚಾಲಕನ ಜೊತೆ ಕುಳಿತಿದ್ದ ಇಬ್ಬರು ಮಕ್ಕಳು ಅಲ್ಲಿಂದ ಹಾರಿ ಬಿದ್ದಿದ್ದು, ವಾಹನ ಚಾಲಕ ಹಾಗೂ ಪಕ್ಕದಲ್ಲೇ ಸಾಗುತ್ತಿದ್ದ ಪೊಲೀಸ್ ಸಿಬ್ಬಂದಿಗೂ ತೀವ್ರ ಗಾಯಗಳಾಗಿವೆ. ಘಟನೆ ತೀವ್ರತೆಗೆ ಸುತ್ತಮುತ್ತಲ ಕೆಲ ಮನೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ.ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್, ಡಿವೈಎಸ್ಪಿ ರವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರ ಪಡೆದಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
--
29ಕೆಡಿಬಿಪಿ7- ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು.--
29ಕೆಡಿಬಿಪಿ8- ಘಟನೆ ನಡೆದ ಸ್ಥಳದಲ್ಲಿ ಸ್ಥಳೀಯರಿಂದ ಮಾಹಿತಿ ಪಡೆಯುತ್ತಿರುವ ಪೊಲೀಸರು.--
29ಕೆಡಿಬಿಪಿ9- ಪಟಾಕಿಗಳು ಸ್ಪೋಟಗೊಂಡ ಪವರ್ ಲಿಫ್ಟರ್ನ ಜಖಂಗೊಂಡಿರುವುದು.