ಶಿರಸಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅವಹೇಳನಕಾರಿ ನಿಂದನೆ ಮಾಡಿದ ಎಡಿಜಿಪಿ ಎಂ. ಚಂದ್ರಶೇಖರ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ, ಜೆಡಿಎಸ್ ಮುಖಂಡ ಉಪೇಂದ್ರ ಪೈ ನೇತೃತ್ವದಲ್ಲಿ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಸಿದ್ದಾಪುರ: ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥ, ಎಡಿಜಿಪಿ ಎಂ. ಚಂದ್ರಶೇಖರ ಅವರನ್ನು ಭಾರತೀಯ ಸೇವೆಯಿಂದ ಅಮಾನತುಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಿ, ಶಿಸ್ತುಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಶಿಫಾರಸುನೊಂದಿಗೆ ಕಳುಹಿಸಲು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ತಾಲೂಕು ಜೆಡಿಎಸ್ನ ವತಿಯಿಂದ ಮನವಿ ಸಲ್ಲಿಸಲಾಯಿತು.
ತಹಸೀಲ್ದಾದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಮುಖಂಡರು ಮನವಿ ಸಲ್ಲಿಸಿದರು. ಭ್ರಷ್ಟಾಚಾರ, ಸುಲಿಗೆ, ದುರ್ನಡತೆಗಳ ಜತೆಗೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಂ. ಚಂದ್ರಶೇಖರ ಅವರ ನಡವಳಿಕೆ ಸರಿಯಿಲ್ಲ. ಅವರನ್ನು ಅಮಾನತುಗೊಳಿಸಿ, ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಜೆಡಿಎಸ್ ಜಿಲ್ಲಾ ಉಸ್ತುವಾರಿ ಉಪೇಂದ್ರ ಪೈ, ತಾಲೂಕು ಅಧ್ಯಕ್ಷ ಸತೀಶ ಹೆಗಡೆ, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಮಡಿವಾಳ, ಉಪಾಧ್ಯಕ್ಷ ಮಂಜುನಾಥ ನಾಯ್ಕ ಬಾಲಿಕೊಪ್ಪ, ಯುವ ಘಟಕದ ಅಧ್ಯಕ್ಷ ನಾಗಭೂಷಣ ಕೊಂಡ್ಲಿ, ಜನಾರ್ದನ ಹೆಗಡೆ ಹುಲಿಮನೆ, ಗಂಗಾಧರ ಗೌಡ ಹುಲಿಮನೆ, ಮಲ್ಲಿಕ ಗೌಡ ಕಲ್ಲೂರು ಹಾಗೂ ಪಕ್ಷದ ಹಿರಿ, ಕಿರಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.