ಸೊಸೈಟಿ ಮೂಲಕವೇ ರೈತರ ಬೆಳೆಗಳ ಖರೀದಿ, ಮಾರಾಟಕ್ಕೆ ಕ್ರಮ: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : Mar 24, 2026, 01:30 AM IST
23ಕೆಎಂಎನ್ ಡಿ12 | Kannada Prabha

ಸಾರಾಂಶ

ಗುಣಮಟ್ಟದ ಆಹಾರ ಹಾಗೂ ಆರೋಗ್ಯ ಸುಧಾರಣೆಗೂ ಬಹಳ ಪ್ರಮುಖವಾಗಲಿದೆ, ಮಣ್ಣಿನ ಫಲವತ್ತತೆ ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ರಾಸಾಯನಿಕ ಗೊಬ್ಬರ, ಔಷಧ ಸಿಂಪಡಣೆಯಿಂದಾಗಿ ಫಲವತ್ತತೆ ಕಳೆದುಕೊಂಡಿದೆ. ಇದನ್ನು ಸುಧಾರಣೆಗೆ ತರುವುದು ಎಲ್ಲರ ಜವಾಬ್ದಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರು ಬೆಳೆಯುವ ಬೆಳೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಖರೀದಿಸಿ ಮಾರಾಟ ಮಾಡಿ ಅಧಿಕ ಲಾಭ ನೀಡುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಹೊಸ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿಗಳು ಇಷ್ಟು ದಿನಗಳ ಕಾಲ ರೈತರಿಗೆ ಬೇಕಾದ ರಸಗೊಬ್ಬರ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಪಡಿತರ ವಿತರಣೆ ಮಾತ್ರ ಮಾಡುತ್ತಿದ್ದವು. ಈಗ ಇದರ ಜತೆಗೆ ರೈತರು ಬೆಳೆಯುವ ಭತ್ತ, ರಾಗಿ, ಜೋಳ, ಕಾಳುಗಳನ್ನು ಸಹ ನೇರವಾಗಿ ರೈತರಿಂದ ಖರೀದಿಸಿ ರೈತರಿಗೆ ಅಧಿಕ ಲಾಭ ನೀಡುವುದು, ಜತೆಗೆ ಸೊಸೈಟಿಗಳ ಮೂಲಕವೇ ಸಿದ್ಧಪಡಿಸಿದ ಬೆಳೆಗಳನ್ನು ಮಾರಾಟ ಮಾಡಲು ಕ್ರಮವಹಿಸಲಾಗಿದೆ ಎಂದರು.

ಈ ನಿರ್ಧಾರದಿಂದ ರೈತರಿಗೆ ದಲ್ಲಾಳಿಗಳ ಹಾವಳಿ ತಪ್ಪಿಸಿದಂತಾಗುತ್ತದೆ. ಜತೆಗೆ ರೈತರಿಗೂ ಅಧಿಕ ಲಾಭವಾಗಿ ಸೊಸೈಟಿಗಳು ಲಾಭದಾಯಕವಾಗಿ ನಡಯಲಿವೆ. ಇದಕ್ಕಾಗಿ ನಬಾರ್ಡ್ ಅಥವಾ ಡಿಸಿಸಿ ಬ್ಯಾಂಕ್‌ಗಳಿಂದ ಸೊಸೈಟಿಗಳಿಗೆ ಆರ್ಥಿಕ ನೆರವು ನೀಡಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಬಗ್ಗೆ ಈಗಾಗಲೇ ಸೊಸೈಟಿಗಳ ಸಿಇಒ, ಸಿಬ್ಬಂದಿಯೊಂದಿಗೆ ಹಲವು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಜತೆಗೆ ಹೊಸ ಸಾಪ್ಟವೇರ್‌ಅನ್ನು ಸಹ ಡೆವಲಪ್ ಮಾಡಲಾಗಿದೆ. ಮೊದಲ ಹಂತದಲ್ಲಿ ಭತ್ತ, ರಾಗಿ, ಜೋಳ, ಕಾಳುಗಳು, ಮೆಣಸಿನಕಾಯಿಗಳನ್ನು ಖರೀದಿಸಲಾಗುವುದು, ಬಳಿಕ ಕೋಲ್ಡ್‌ಸ್ಟೋರೇಜ್‌ಗಳನ್ನು ನಿರ್ಮಿಸಿ ತರಕಾರಿಗಳನ್ನು ಖರೀದಿಸಲು ತೀರ್ಮಾನಿಸಲಾಗುತ್ತಿದೆ ಎಂದರು.

ಈ ಕೆಲಸಕ್ಕೆ ಸಹಕಾರ ಸಂಘಗಳ ಸಹಕಾರ ನೀಡಬೇಕು. ಇಲ್ಲಿ ಯಾವುದೇ ರೀತಿಯ ರಾಜಕೀಯ ನಡೆಸುತ್ತಿಲ್ಲ, ಇದು ಕೇವಲ ರೈತರು ಆರ್ಥಿಕ ಸ್ವಾವಲಂಬಿ ನಡೆಸುವುದಕ್ಕಾಗಿ ಮಾತ್ರ ಈ ಕಾರ್‍ಯಕ್ರಮ ರೂಪಿಸಲಾಗಿದೆ. ಈಗಾಗಲೇ ತಾಲೂಕಿನ ಅರಳಕುಪ್ಪೆ, ಕ್ಯಾತನಹಳ್ಳಿ ಸೊಸೈಟಿಗಳಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಿ ಮಾರಾಟ ಮಾಡಿ ಲಾಭಗಳಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಾದ್ಯಂತ ಮಾಡಲಾಗುತ್ತಿದೆ ಎಂದು ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಏ.1 ರಂದು ಈ ವಿಚಾರವಾಗಿ ಚರ್ಚಿಸಲು ಎಲ್ಲಾ ಸಹಕಾರ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕ ಸಭೆ ಕರೆಯಲಾಗಿದೆ. ಸಭೆಗೆ ಎಲ್ಲರೂ ತಪ್ಪದೇ ಆಗಮಿಸಬೇಕೆಂದು ಮನವಿ ಮಾಡಿದರು.

ಸಿಎಂಗೆ ಅಭಿನಂದನೆ:

ಪಾಂಡವಪುರ ತಾಲೂಕನ್ನು ಸಾವಯವ ಕೃಷಿ ತಾಲೂಕು ಎಂಬುದಾಗಿ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರೈತರು ಸಾವಯವ ಕೃಷಿ ಮಾಡುವ ಕಡೆಗೆ ಮುಂದಾಗಬೇಕು, ಇದರಿಂದ ಭೂಮಿ ಫಲವತ್ತತ್ತೆಯೂ ಹೆಚ್ಚಲಿದೆ ಎಂದರು.

ಗುಣಮಟ್ಟದ ಆಹಾರ ಹಾಗೂ ಆರೋಗ್ಯ ಸುಧಾರಣೆಗೂ ಬಹಳ ಪ್ರಮುಖವಾಗಲಿದೆ, ಮಣ್ಣಿನ ಫಲವತ್ತತೆ ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ರಾಸಾಯನಿಕ ಗೊಬ್ಬರ, ಔಷಧ ಸಿಂಪಡಣೆಯಿಂದಾಗಿ ಫಲವತ್ತತೆ ಕಳೆದುಕೊಂಡಿದೆ. ಇದನ್ನು ಸುಧಾರಣೆಗೆ ತರುವುದು ಎಲ್ಲರ ಜವಾಬ್ದಾರಿಯಾಗಿದೆ. ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಸಂಬಂಧ ಕಾರ್‍ಯಕ್ರಮ ರೂಪಿಸುವ ಸಿದ್ಧತೆಗಳ ಕುರಿತು ಸರ್ಕಾರದೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಸುದ್ಧಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ,ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಎಣ್ಣೆಹೊಳೆಕೊಪ್ಪಲು ಮಂಜುನಾಥ್, ಮಾಜಿ ಅಧ್ಯಕ್ಷರಾದ ಕೆನ್ನಾಳು ವಿಜಯ್‌ಕುಮಾರ್, ನಾಗರಾಜು, ಪ್ರಕಾಶ್, ಪ್ರಧಾನ ಕಾರ್‍ಯದರ್ಶಿ ಡಾಮಡಹಳ್ಳಿ ಅಶೋಕ್, ಮುಖಂಡ ಕೆ.ಟಿ.ಗೋವಿಂದೇಗೌಡ, ಬಿ.ಟಿ.ಶಿವಣ್ಣ, ಶಂಕರ, ರೂಪ, ಕಟ್ಟೇರಿ ಮಹದೇವು, ಗೋವಿಂದರಾಜು, ರಾಘು, ಪ್ರಕಾಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಹಿಂದೂ ಹೋರಾಟಗಾರಿಗೆ ಅಧಿಕಾರ ಸಿಕ್ಕರೆ ಕ್ರಾಂತಿ: ಬಸನಗೌಡ ಪಾಟೀಲ್ ಯತ್ನಾಳ್
ಹೊಳೆನರಸೀಪುರದಲ್ಲಿ ಕೈವಾರ ತಾತಯ್ಯ ಜಯಂತಿ