- ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ । ಭಾಗವತ್ ಹೇಳಿದ್ದಕ್ಕೆಲ್ಲಾ ಉತ್ತರ ಕೊಡೋಕ್ಕಾಗಲ್ಲ: ಸಿಎಂ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾರನ್ನು ಡಿಜಿಪಿಯಾಗಿ ಹಾಕಿದ್ದೆವೋ ಆ ಅಧಿಕಾರಿ ರಜೆ ಹೋಗಿದ್ದರು. ಅಲ್ಲಿಯ ಕೈದಿಗಳಿಗೆ ರಾಜಾತೀಥ್ಯ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಜಯ ನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಸಂಬಂಧ ಸೋಮವಾರ ನಾವೂ ಸಭೆ ಕರೆದಿದ್ದೇವೆ. ಗೃಹ ಸಚಿವರೂ ಸಭೆ ಕರೆದಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆಯೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.ಭಾಗವತ್ ಹೇಳಿದ್ದಕ್ಕೆಲ್ಲಾ ಉತ್ತರಿಸಲಿಕ್ಕಾಗದು:
ಎನೀ ಆರ್ಗನೈಸೇಷನ್ ಅಂತಾ ಹೇಳಿದ್ದೆವು. ಅದನ್ನು ಬಿಟ್ಟು ಆರೆಸ್ಸೆಸ್ ಅಂತಾ ಭಾವಿಸಿದ್ದಾರೆ. ಬರೀ ಆರೆಸ್ಸೆಸ್ ಅಂತಾ ಅಲ್ಲ, ಯಾವುದೇ ಆರ್ಗನೈಸೇಷನ್ ಆಗಿದ್ದರೂ ಜಿಲ್ಲಾಧಿಕಾರಿ ಬಳಿ ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕೆಂದು ಹೇಳಿದ್ದೇವೆ ಎಂದು ತಿಳಿಸಿದರು.ಬ್ರಿಟಿಷರ ಕಾಲದಲ್ಲಿ ಆರೆಸ್ಸೆಸ್ ಆರಂಭವಾಗಿದ್ದು, ಸ್ವಾತಂತ್ರ್ಯ ನಂತರ ರಿಜಿಸ್ಟ್ರೇಷನ್ ಕಡ್ಡಾಯ ಮಾಡಿಲ್ಲವೆಂದ ಸಂಘದ ಮೋಹನ ಭಾಗವತ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಭಾಗವತ್ ಹೇಳಿದ್ದಕ್ಕೆಲ್ಲಾ ನಾವು ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ತಾಪಂ, ಜಿಪಂ ಚುನಾವಣೆ ವಿಚಾರ ಕೋರ್ಟ್ನಲ್ಲಿದೆ:ತಾಪಂ, ಜಿಪಂ ಚುನಾವಣೆ ವಿಚಾರ ನ್ಯಾಯಾಲಯದಲ್ಲಿವೆ. ಯಾವಾಗ ಚುನಾವಣೆಗೆ ಹೇಳುತ್ತಾರೋ, ಅವಾಗಲೇ ಚುನಾವಣೆ ಮಾಡುತ್ತೇವೆ. ನ್ಯಾಯಾಲಯದಲ್ಲಿ ಏನಾಗುತ್ತದೋ ನೋಡೋಣ ಎಂದು ಅವರು ತಿಳಿಸಿದರು.
ಯತ್ನಾಳ್ ವಿರೋಧಿಸಿದರೆ ಕ್ರಮ:ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆಯೆಂಬ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿಕೆ ಸರಿಯಲ್ಲ. ಅಂತಹವರ ಎದುರಿನಲ್ಲೇ ನಾವು ತೀರ್ಮಾನ ಮಾಡಿದ್ದೇವೆ. ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರೂ ನಾವು ನಿಗದಿಪಡಿಸಿದ ದರ ನೀಡುತ್ತಾರೆ. ಯತ್ನಾಳ್ ವಿರೋಧ ಮಾಡಿದರೆ ಕಾರ್ಖಾನೆ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿದ ಬೆಲೆ ಕೊಡದಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ರೈತರು ಒತ್ತಾಯಿಸುತ್ತಿದ್ದಾರೆ. ಬೆಂಬಲ ಬೆಲೆ ನಿರ್ಧಾರ ಮಾಡುವುದು ಯಾರು? ಕೇಂದ್ರ ಸರ್ಕಾರ ಅಲ್ಲವಾ? 11 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅಂತಹ ರೈತರಿಗೆ ಪರಿಹಾರವನ್ನೂ ನೀಡುತ್ತೇವೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.- - -
(ಬಾಕ್ಸ್)* ಪೊಲೀಸ್ ಅಧಿಕಾರಿಗಳತ್ತ ಹಾರ, ಶಾಲು, ಪೇಟ ಎಸೆದು ಆಕ್ರೋಶ
- ಸಿಎಂ ಭೇಟಿಗೆ ಅವಕಾಶ ನೀಡದ ಪೊಲೀಸರ ಬಗ್ಗೆ ಕಾರ್ಯಕರ್ತರು ಗರಂ ದಾವಣಗೆರೆ: ಹರಪನಹಳ್ಳಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಅವಕಾಶ ಸಿಗದೇ ಇದ್ದುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡರು.ತಮ್ಮ ನೆಚ್ಚಿನ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಲು, ಹೂವಿನ ಹಾರ, ಪೇಟ ಹಾಕಿ, ಒಂದೊಂದು ಫೋಟೋ ತೆಗೆಸಿಕೊಳ್ಳುವ ತಮ್ಮ ಆಸೆಗೆ ಹೆಲಿಪ್ಯಾಡ್ನಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಅವುಗಳನ್ನೆಲ್ಲಾ ಪೊಲೀಸ್ ಅಧಿಕಾರಿಗಳ ಮೇಲೆಯೇ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮ ಮುಗಿಸಿಕೊಂಡು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರು ಕೂಡ್ಲಿಗಿಯತ್ತ ತೆರಳಿದರು. ಹೆಲಿಪ್ಯಾಡ್ನಲ್ಲಿ ಸಿಎಂ ಭೇಟಿಗೆ ಅವಕಾಶ ನೀಡದ ಬಗ್ಗೆ ಕಾರ್ಯಕರ್ತರು, ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದರು. ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೊತೆಗೆ ಕಾರ್ಯಕರ್ತರು ತೀವ್ರ ವಾಗ್ವಾದಕ್ಕೂ ಇಳಿದರು. ಇತ್ತ ಹರಪನಹಳ್ಳಿ ಹೆಲಿಪ್ಯಾಡ್ನಿಂದ ಒಂದೇ ಹೆಲಿಕಾಫ್ಟರ್ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾಜ ಸತೀಶ ಜಾರಕಿಹೊಳಿ, ಜಮೀರ್ ಅಹಮ್ಮದ್ ಪ್ರಯಾಣ ಬೆಳೆಸಿದರು.- - -
-(ಫೋಟೋ ಹರಪನಹಳ್ಳಿಯಿಂದ ಕಳಿಸಿದ್ದರೆ ಬಳಸಿಕೊಳ್ಳಬೇಕು.)