ದಾಬಸ್ಪೇಟೆ: ಮತ ಚಲಾಯಿಸುವುದು ಕೇವಲ ನಿಮ್ಮ ಹಕ್ಕು ಮಾತ್ರವಲ್ಲ. ಅದು ದೇಶಕಟ್ಟುವ ನಿಟ್ಟಿನಲ್ಲಿ ಕರ್ತವ್ಯ ಕೂಡ ಆಗಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಎಲ್.ಮಧು ಹೇಳಿದರು.
ಸ್ವೀಪ್ ಸಮಿತಿಯ ಸಂಚಾಲಕಿ ಪುಷ್ಪಾ ಮಾತನಾಡಿ, ಜಗತ್ತಿನಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡ ಅತಿ ದೊಡ್ಡ ದೇಶ ಭಾರತ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ, ಅಭಿವೃದ್ಧಿಗೆ ಪೂರಕವಾಗಿ ಚುನಾವಣೆಗಳು ಅತಿ ಮಹತ್ತರ ಪಾತ್ರ ವಹಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರು ತಪ್ಪದೆ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಪಂ ಪಿಡಿಒ ರೇಖಾ ಮಾತನಾಡಿ, ಕೇವಲ ಅಧಿಕಾರಿಗಳ ಪ್ರಯತ್ನದಿಂದ ಮಾತ್ರ ಶೇ.100ರಷ್ಟು ಮತದಾನ ಸಾಧ್ಯವಾಗದು. ಮತದಾರರು ಕೈ ಜೋಡಿಸಿದಾಗ ಮಾತ್ರವೇ ಶೇ.100ರಷ್ಟು ಮತದಾನ ಹೆಚ್ಚಿಸುವ ಸದುದ್ದೇಶ ಈಡೇರಲಿದೆ. ಯಾವುದೇ ಆಮಿಷಕ್ಕೂ ಒಳಗಾಗದೆ ನಿರ್ಭಯವಾಗಿ, ಮುಕ್ತ ಹಾಗೂ ಪಾರದರ್ಶಕ ವಾತಾವರಣದಲ್ಲಿ ತಮ್ಮ ಮತವನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ.ಅಧ್ಯಕ್ಷ ಮಲ್ಲೇಶ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿಯವರು ಭಾಗವಹಿಸಿದ್ದರು.ಪೋಟೋ 4 : ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಮಧು ಚಾಲನೆ ನೀಡಿದರು.