ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಮಿನಿ ವಿಧಾನಸೌಧದ ಎದುರು ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ, ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ನೇತೃತ್ವದಲ್ಲಿ ಸದಸ್ಯರು ಹಾಗೂ ರೈತರು ಚಾವಟಿ ಹಿಡಿದು ಪ್ರತಿಭಟಿಸಿ ನೀರು ಬಿಡದಿದ್ದರೆ ಚಾವಟಿ ಏಟು ಎಂಬ ಘೋಷಣೆ ಕೂಗಿ, ರಾಜ್ಯ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕೆಆರ್ಎಸ್ ಅಣೆಕಟ್ಟೆಗೆ ಒಳ ಹರಿವು ಬರುತ್ತಿದ್ದರೂ ಸಹ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ, ರೈತರ ಹಿತ ಕಾಪಾಡದೇ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಣೆಕಟ್ಟೆಯಲ್ಲಿ ನೀರಿಲ್ಲ, ರೈತರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಅಣೆಕಟ್ಟೆಗೆ 6 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಇದರ ಬಗ್ಗೆ ಅವರಿಗೆ ನೀರಿನ ಜ್ಞಾನವಿಲ್ಲ ಎಂದು ಕಿಡಿಕಾರಿದರು.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ನದಿಗಿಳಿದು ಹೋರಾಟ ಮಾಡುತ್ತಿದ್ದಂತೆ ನೀರು ನಿಲ್ಲಿಸಿದ್ದಾರೆ. ರೈತರು ಮನೆಯಲ್ಲೇ ಕುಳಿತರೆ ರೈತರಿಗೆ ಯಾವುದೇ ನ್ಯಾಯ ಸಿಗುವುದಿಲ್ಲ. ನಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ನಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು. ನಾಲೆಗಳಿಗೆ ನೀರು ಬಿಡುವ ಭರವಸೆ ಸಿಗುವವರೆಗೆ ಅಹೋರಾತ್ರಿ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.
ಅಣೆಕಟ್ಟೆಯಲ್ಲಿ ಒಳ ಹರಿವು ಹೆಚ್ಚಳ: ಒಂದೇ ದಿನ 2 ಅಡಿ ನೀರು ಸಂಗ್ರಹ
ಬುಧವಾರ ರಾತ್ರಿ 8 ಗಂಟೆ ವೇಳೆಗೆ ಜಲಾಶಯಕ್ಕೆ 9584 ಕ್ಯುಸೆಕ್ ಹರಿದು ಬರುತ್ತಿದ್ದು, ಮಂಗಳವಾರ 5734 ಕ್ಯುಸೆಕ್ ನೀರು ಬರುತ್ತಿತ್ತು. ಜಲಾಶಯದಿಂದ 731 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ನೆನ್ನೆ 82.45 ಅಡಿ ಇದ್ದ ನೀರು ಇಂದು 84.40 ಅಡಿಗೆ ಏರಿಕೆಯಾಗಿದೆ. 12.864 ಟಿಎಂಸಿ ನೀರು ಸಂಗ್ರಹವಾಗಿದೆ.ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಕೆಆರ್ ಎಸ್ ನೀರಿನ ಮಟ್ಟ
ಒಳ ಹರಿವು – 9584 ಕ್ಯುಸೆಕ್
ಹೊರ ಹರಿವು – 731 ಕ್ಯುಸೆಕ್
ಒಟ್ಟು ಸಂಗ್ರಹ – 12.864 ಟಿಎಂಸಿ