ಕನ್ನಡಪ್ರಭ ವಾರ್ತೆ ಅರಸೀಕೆರೆ
ಸ್ವಾಸ್ಥ್ಯ ಜೀವನ ನಡೆಸಲು ಜ್ಞಾನ ಮತ್ತು ಸಮಾನತೆ ಅಗತ್ಯ. ನಿಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಳ್ಳಿ ಎಂದು ಗಂಡಸಿ ವಿದ್ಯುತ್ ಪ್ರಸರಣ ನಿಗಮದ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಬಸವರಾಜೇಂದ್ರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಸ್ವಾಸ್ಥ ಸಂಕಲ್ಪ’ ಕಾರ್ಯಕ್ರಮ ಹಾಗೂ ಪರಿಸರ ದಿನಾಚರಣೆಯ ಅಂಗವಾಗಿ ಹಣ್ಣಿನ ಸಸಿಗಳನ್ನು ನೆಟ್ಟು ಮಾತನಾಡಿ, ಪ್ರೌಢಶಾಲೆಯ ಸಮಯವು ವಿದ್ಯಾರ್ಥಿಗಳ ಜೀವನದ ತಿರುವಿನ ಹಂತವಾಗಿರುತ್ತದೆ. ಚಂಚಲ ಮನಸ್ಸಿನಿಂದ ದೂರವಿದ್ದು, ಆರೋಗ್ಯ ಮತ್ತು ವಿದ್ಯಾಭ್ಯಾಸ ಎರಡರನ್ನೂ ಸಮಾನ ಮಹತ್ವದಿಂದ ನೋಡಬೇಕು. ತಾತ್ಕಾಲಿಕ ಖುಷಿ ನೀಡುವ ಹವ್ಯಾಸಗಳಿಂದ ದೂರವಿರಿ. ಯುವ ಶಕ್ತಿಯನ್ನು ರಾಷ್ಟ್ರಕ್ಕೆ ಅರ್ಪಿಸಲು ಉತ್ತಮ ಜ್ಞಾನ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಶಿಕ್ಷಣ, ಆರೋಗ್ಯ, ಪರಿಸರ, ಕೆರೆಕಟ್ಟೆ ಅಭಿವೃದ್ಧಿ, ದೇವಾಲಯಗಳ ರಕ್ಷಣೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜನತೆಗೆ ನೀಡುತ್ತಿದೆ ಎಂದು ಹೇಳಿದರು.ಶಾಲಾ ಮುಖ್ಯಶಿಕ್ಷಕ ದಯಾನಂದ್ ಮಾತನಾಡಿ ಮಕ್ಕಳಿಗೆ ಜ್ಞಾನ ಪಡೆಯುವ ಬಯಕೆ ಇರುವಂತೆಯೇ, ಅದನ್ನು ಹೇಗೆ ಪ್ರಾಯೋಗಿಕ ಜೀವನದಲ್ಲಿ ಉಪಯೋಗಿಸಬೇಕು ಎಂಬ ಅರಿವೂ ಬೆಳೆಸಬೇಕು. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗವಲ್ಲ, ಉತ್ತಮ ನಾಗರಿಕನಾಗಿ ರೂಪುಗೊಳ್ಳುವ ದಿಕ್ಕಿನಲ್ಲಿ ಪ್ರಯಾಣಿಸಬೇಕು ಎಂದು ಹೇಳಿದರು.ವಿದ್ಯಾರ್ಥಿಗಳ ಮನೋಭಾವನೆ, ಪ್ರವೃತ್ತಿ ಮತ್ತು ಮೌಲ್ಯಪೂರ್ಣ ನಡವಳಿಕೆಯನ್ನು ರೂಪಿಸಲು ಪೋಷಕರೂ ಮುಖ್ಯ ಪಾತ್ರವಹಿಸಬೇಕು. ಮನೆ ಮತ್ತು ಶಾಲೆ ಎರಡೂ ಸಹಕಾರಿಯಾಗಿದ್ದರೆ, ಮಕ್ಕಳ ಬೆಳವಣಿಗೆ ಸಮತೋಲನದಿಂದ ಸಾಗುತ್ತದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಕೃಷಿ ಅಧಿಕಾರಿ ಗುರುಮೂರ್ತಿ, ಮೇಲ್ವಿಚಾರಕಿ ವಿಜಯ, ಶಾಲಾ ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.