ಸಿದ್ದಾಪುರ: ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದಲ್ಲಿ ಗೋಪಾಲ ಗೌರವ ಪ್ರಶಸ್ತಿ ಪರಸ್ಕೃತರನ್ನೊಳಗೊಂಡು ವಿಚಾರಸಂಕಿರಣ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.
ದೊಡ್ಡಬಳ್ಳಾಪುರ ಘಾಟಿಸುಬ್ರಹ್ಮಣ್ಯದಲ್ಲಿ ರಾಷ್ಟ್ರೋತ್ಥಾನ ಗೋಶಾಲೆ ಪ್ರಾರಂಭಿಸಿ, ಗವ್ಯ ಉತ್ಪನ್ನಗಳಿಂದ ಔಷಧ ತಯಾರಿಸಿ ರೋಗಿಗಳಿಗೆ ನೀಡುತ್ತಿರುವ ಡಾ. ಜೀವನಕುಮಾರ ಮಾತನಾಡಿ, ಗೋಮೂತ್ರವು ಔಷಧಗಳ ಆಗರ. ಗೋಮೂತ್ರದ ಚಿಕಿತ್ಸೆಯಿಂದ ಮನುಷ್ಯನ ೭೨ ಸಾವಿರ ನಾಡಿಗಳ ಶುದ್ಧೀಕರಣ ಸಾಧ್ಯ. ಭವಿಷ್ಯದಲ್ಲಿ ಗೋ ಆಧರಿತ ಕೃಷಿ ಹಾಗೂ ಗೋ ಆಧರಿತ ಚಿಕಿತ್ಸೆ ಬಂದೇ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾಸರಗೋಡಿನ ನೆಕ್ಕಲಕೆರೆಯ ಸುಬ್ರಹ್ಮಣ್ಯಪ್ರಸಾದ ಮಾತನಾಡಿ, ಗೋವಿನ ಸಗಣಿಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಬಿಸಿಲು, ಮಳೆ, ಗಾಳಿ, ಕಸ ತಗಲದಂತೆ ಸಗಣಿಯನ್ನು ಸಂರಕ್ಷಿಸಿ ಅದನ್ನೇ ಮೂಲವಾಗಿಟ್ಟುಕೊಂಡು ವಿವಿಧ ರೀತಿಯ ಕಾಯಿಲೆಗಳಿಗೆ ಔಷಧ ತಯಾರಿಸಬಹುದು. ಆರ್ಥಿಕ ನಷ್ಟವಿಲ್ಲದೇ ಗೋ ಉದ್ಯಮ ನಡೆಸಬಹುದು ಎಂದರು.ಕಾಸರಗೋಡಿನ ಪೆರಿಯದ ನಾಗರತ್ನಾ ವಿಷ್ಣು ಹೆಬ್ಬಾರ ಮಾತನಾಡಿ, ಹಸುಗಳೂ ಸಂಗೀತವನ್ನು ಆಸ್ವಾದಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳೂ ನಮ್ಮ ಗೋಶಾಲೆಯಲ್ಲಿ ಒಂದು ದಿನ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಾವು ನಂಬಿರುವ ಗೋ ಮಾತೆ ನಮ್ಮ ಕೈ ಬಿಟ್ಟಿಲ್ಲ ಎಂದರು.
ಹುಬ್ಬಳ್ಳಿಯ ಸಮಾಜಸೇವಕ ಮಹೇಂದ್ರ ಸಿಂಘಿ ಮಾತನಾಡಿ, ಹಸುಗಳಿಗೆ ಕೃತಕ ಕಾಲುಗಳನ್ನು ಪೂರೈಸುವಲ್ಲಿ ನಮ್ಮ ಸಂಘಟನೆ ಸದಾ ಸಿದ್ಧವಿದೆ. ನಮ್ಮನ್ನು ಸಂಪರ್ಕಿಸಿದಲ್ಲಿ ನಮ್ಮ ಜನರೇ ಬಂದು ಗೋವಿನ ಕಾಲಿನ ಅಳತೆ ತೆಗೆದುಕೊಂಡು ಕೃತಕ ಕಾಲು ತಯಾರಿಸಿ, ಉಚಿತವಾಗಿ ಪೂರೈಸುತ್ತೇವೆ ಎಂದರು.ಬೈಲಹೊಂಗಲದ ಬಾಬುರಾವ್ ಪಾಟೀಲ ಮಾತನಾಡಿ, ಗೋ ಆಧರಿತ ಕೃಷಿ, ಜೀವಾಮೃತ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು. ನಾವು ನಡೆಸುತ್ತಿರುವ ಕೃಷಿಯ ಜತೆಗೆ ನಾವು ಬೆಳೆಯುತ್ತಿರುವ ಗಿಡಮರ, ಸಸಿಗಳೊಂದಿಗೆ ಸಂವಹನ ನಡೆಸಬೇಕು. ಇದರಿಂದಲೂ ಉತ್ತಮ ಸ್ಪಂದನೆ ದೊರೆಯುವುದು ಅನುಭವಕ್ಕೆ ಬಂದಿದೆ ಎಂದರು.
ದಿನೇಶ ಶಹರಾ ಫೌಂಡೇಶನ್ನ ಮೀರಾಜಿ, ಕಾಮದುಘಾ ಟ್ರಸ್ಟಿನ ಪ್ರಮುಖ ಡಾ. ವೈ.ವಿ. ಕೃಷ್ಣಮೂರ್ತಿ ಮಾತನಾಡಿದರು. ಸಾರ್ವಜನಿಕರು ಸಂಪನ್ಮೂಲ ವ್ಯಕ್ತಿಗಳಲ್ಲಿ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದು ಸಂಶಯ ನಿವಾರಿಸಿಕೊಂಡರು.