ಹುಬ್ಬಳ್ಳಿ:ಕಾಂಗ್ರೆಸ್ನ ಹೈಕಮಾಂಡ್ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದಿರುವುದನ್ನು ಖಂಡಿಸಿ ಅಹಿಂದ ಸಂಘಟನೆ, ಕುರುಬ ಸಮಾಜ ಹಾಗೂ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮೆಯಾದ ಅಹಿಂದ ಮತ್ತು ಕುರುಬ ಸಮಾಜದ ಬಂಧುಗಳು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸರ್ಕಲ್ನಲ್ಲಿ ಟೈರ್ಗೆ ಬೆಂಕಿ ಹಚ್ಚುವ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಹಿಂದ ಮುಖಂಡ ಸಿದ್ದು ತೇಜಿ, ಸಿಎಂ ಸಿದ್ದರಾಮಯ್ಯ ಅವರು 3 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೇ, ರಾಜ್ಯದಲ್ಲಿ ಅತ್ಯುತ್ತಮವಾದ ಜನಪರ ಆಡಳಿತ ನೀಡಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಅಹಿಂದ ನಾಯಕ ಸಿಎಂ ಆಗುತ್ತಾರೆ ಎನ್ನುವ ಕಾರಣಕ್ಕಾಗಿ ಅಹಿಂದ ನಾಯಕರು ಪಕ್ಷಾತೀತವಾಗಿ ಕಾಂಗ್ರೆಸ್ ಬೆಂಬಲಿಸಿದ್ದರು. ಹಾಗೆಯೇ ಅವರಿಂದ ನಿರೀಕ್ಷೆಯಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಹೀಗಿದ್ದಾಗ್ಯೂ ಅವರ ರಾಜೀನಾಮೆ ಪಡೆದಿರುವುದು ಅಕ್ಷ್ಯಮ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಡಾ. ಬಸವರಾಜ ಹೊರಕೇರಿ, ಸುಜಾತಾ ಸನದಿ, ಕೆ.ಕೆ. ಪಾಟೀಲ, ಹೇಮಂತ ಚಾಂಗನವರ, ನಿಂಗಪ್ಪ ಜಕ್ಕಲಿ, ರೇಣುಕಾ ಹೊಂಗಲ, ಸಂಜೀವ ಧುಮಕನಾಳ, ನಿಂಗಪ್ಪ ಕುರಬರ, ಹನುಮಂತ ಕಂಬಳಿ, ರಮೇಶ ಅರಳಿಕೇರಿ ಸೇರಿದಂತೆ ಇತರರು ಇದ್ದರು.